ಮುಂಬೈ: ಕಿರುತೆರೆಯ ಜನಪ್ರಿಯ ಧಾರಾವಾಹಿಗಳಾದ ‘ಕುಂಕುಮ್ ಭಾಗ್ಯ’ ಮತ್ತು ‘ವಾಗ್ಲೆ ಕಿ ದುನಿಯಾ’ ಖ್ಯಾತಿಯ ಯುವ ನಟಿ ಸಂಚಿತಾ ಉಗಾಳೆ (22) ಅವರು ಭಾನುವಾರ (ಜೂನ್ 14) ಸಂಜೆ ತಮ್ಮ ನಿವಾಸದಲ್ಲಿ ಆತ್ಮಹತ್ಯೆ (Crime) ಮಾಡಿಕೊಂಡಿದ್ದಾರೆ. ಈ ಘಟನೆ ಇಡೀ ಟಿವಿ ಉದ್ಯಮ ಮತ್ತು ಅವರ ಅಭಿಮಾನಿಗಳಿಗೆ ತೀವ್ರ ಆಘಾತವನ್ನುಂಟು ಮಾಡಿದೆ.́
ನೇಣು ಬಿಗಿದುಕೊಂಡು ಆತ್ಮಹತ್ಯೆ
ಪೊಲೀಸ್ ಮೂಲಗಳ ಮಾಹಿತಿ ಪ್ರಕಾರ, ನಲಸೋಪಾರಾ ಈಸ್ಟ್ನ ಆಚೋಲೆ ಗ್ರಾಮದ ಸಾಯಿ ಸಂತೋಷಿ ಬಿಲ್ಡಿಂಗ್ನಲ್ಲಿರುವ ತಮ್ಮ ಮನೆಯಲ್ಲಿ ಈ ಘಟನೆ ನಡೆದಿದೆ. ಭಾನುವಾರ ಸಂಜೆ 7 ರಿಂದ 7:30 ರ ಅವಧಿಯಲ್ಲಿ ಸಂಚಿತಾ ಅವರು ತಮ್ಮ ಮಲಗುವ ಕೋಣೆಯನ್ನು ಒಳಗಿನಿಂದ ಲಾಕ್ ಮಾಡಿಕೊಂಡು, ಸೀಲಿಂಗ್ ಫ್ಯಾನ್ಗೆ ಸೀರೆಯಿಂದ ನೇಣು ಬಿಗಿದುಕೊಂಡಿದ್ದಾರೆ ಎಂದು ಅಚೋಲೆ ಪೊಲೀಸ್ ಠಾಣೆಯ ಸಹಾಯಕ ಪೊಲೀಸ್ ಇನ್ಸ್ಪೆಕ್ಟರ್ ವಿನೋದ್ ಬಾಗ್ ತಿಳಿಸಿದ್ದಾರೆ. ಘಟನೆ ತಿಳಿಯುತ್ತಿದ್ದಂತೆ ಕುಟುಂಬಸ್ಥರು ಮತ್ತು ಸ್ಥಳೀಯರು ತಕ್ಷಣವೇ ಅವರನ್ನು ವಸಾಯಿ-ವಿರಾರ್ ಮುನ್ಸಿಪಲ್ ಆಸ್ಪತ್ರೆಗೆ ಕರೆದೊಯ್ದರಾದರೂ, ಅವರು ಅದಾಗಲೇ ಮೃತಪಟ್ಟಿರುವುದಾಗಿ ವೈದ್ಯರು ಘೋಷಿಸಿದರು.
ವಿಷಯ ತಿಳಿದು ಸ್ಥಳಕ್ಕೆ ಧಾವಿಸಿದ ಪೊಲೀಸರು ಇನ್ಕ್ವೆಸ್ಟ್ ಮಹಜರು ನಡೆಸಿ, ಮೃತದೇಹವನ್ನು ಮರಣೋತ್ತರ ಪರೀಕ್ಷೆಗೆ ರವಾನಿಸಿದ್ದಾರೆ. ಮೃತ ನಟಿಯ ತಂದೆ ಮಚ್ಚೀಂದ್ರ ಉಗಾಳೆ ನೀಡಿದ ದೂರಿನ ಆಧಾರದ ಮೇಲೆ ಅಚೋಲೆ ಪೊಲೀಸರು ಜೂನ್ 15 ರಂದು ಭಾರತೀಯ ನಾಗರಿಕ ಸುರಕ್ಷಾ ಸಂಹಿತೆಯ (BNSS) ಸೆಕ್ಷನ್ 194 ರ ಅಡಿಯಲ್ಲಿ ಅಸಹಜ ಸಾವು (ADR) ಎಂದು ಪ್ರಕರಣ ದಾಖಲಿಸಿಕೊಂಡಿದ್ದಾರೆ. ಸಂಚಿತಾ ಅವರ ಈ ಕಠಿಣ ನಿರ್ಧಾರಕ್ಕೆ ನಿಖರವಾದ ಕಾರಣ ಏನೆಂಬುದು ಇನ್ನು ತಿಳಿದುಬಂದಿಲ್ಲ. ಪೊಲೀಸರು ಎಲ್ಲಾ ಆಯಾಮಗಳಿಂದಲೂ ತನಿಖೆ ನಡೆಸುತ್ತಿದ್ದು, ಹೆಚ್ಚಿನ ವಿಚಾರಣೆ ಮುಂದುವರಿದಿದೆ.ಕಿರುತೆರೆ ನಟಿ ಸಂಚಿತಾ ಉಗಾಳೆ ಸಾವು; ಕೊನೆಯ ರೀಲ್ಸ್ನಲ್ಲಿ ನಟಿಸಿದ್ದ ನಟಿ ಇನ್ನು ನೆನಪು ಮಾತ್ರ
ಕೇವಲ 22ನೇ ವಯಸ್ಸಿಗೆ ಬಾರದ ಲೋಕಕ್ಕೆ ಪಯಣಿಸಿರುವ ಸಂಚಿತಾ ಉಗಾಳೆ, ಕಿರುತೆರೆ, ಹಿರಿತೆರೆ ಹಾಗೂ ಒಟಿಟಿ ವೇದಿಕೆಗಳಲ್ಲಿ ಸಕ್ರಿಯವಾಗಿ ಗುರುತಿಸಿಕೊಳ್ಳುತ್ತಿದ್ದರು. ಜೀ ಟಿವಿಯ ಸುದೀರ್ಘ ಕಥಾಹಂದರದ ‘ಕುಂಕುಮ್ ಭಾಗ್ಯ’ ಧಾರಾವಾಹಿಯಲ್ಲಿ ದಿಯಾ ಟಂಡನ್ ಪಾತ್ರದ ಮೂಲಕ ಅವರು ಮನೆಮಾತಾಗಿದ್ದರು. ಇದರೊಂದಿಗೆ ‘ವಾಗ್ಲೆ ಕಿ ದುನಿಯಾ’ದಲ್ಲಿ ರುಚಿತಾ ಜೇಟ್ಲಿ ಪಾತ್ರದಲ್ಲಿ ಹಾಗೂ ದಂಗಲ್ ಟಿವಿಯ ‘ದಿಲ್ವಾಲಿ ದುಲ್ಹಾ ಲೇ ಜಾಯೇಗಿ’ ಧಾರಾವಾಹಿಯಲ್ಲಿ ಸೊರಬ್ ಬೇಡಿ ಎದುರು ಸುಕೂನ್ ಎಂಬ ಮುಖ್ಯ ಪಾತ್ರದಲ್ಲಿ ನಟಿಸಿ ಗಮನ ಸೆಳೆದಿದ್ದರು.
ಸಿನಿಮಾದಲ್ಲೂ ನಟಿಸಿದ್ದ ನಟಿ
ಕಿರುತೆರೆ ಮಾತ್ರವಲ್ಲದೆ ಸಿನಿಮಾಗಳಲ್ಲೂ ನಟಿಸಿದ್ದ ಇವರು, ವಿಕ್ಕಿ ಕೌಶಲ್ ನಟನೆಯ ಬಹುನಿರೀಕ್ಷಿತ ‘ಚಾವಾ’ ಚಿತ್ರದಲ್ಲಿ ತಾರಾ ರಾಣಿಯ ಬಾಲ್ಯದ ಪಾತ್ರಕ್ಕೆ ಬಣ್ಣ ಹಚ್ಚಿದ್ದರು. ಮನೋಜ್ ಬಾಜಪೇಯಿ ಅಭಿನಯದ ‘ಸೈಲೆನ್ಸ್ 2: ದಿ ನೈಟ್ ಔಲ್ ಬಾರ್ ಶೂಟೌಟ್’ ಚಿತ್ರದಲ್ಲೂ ಅವರು ನಟಿಸಿದ್ದರು. ಪ್ರತಿಭಾವಂತ ನಟಿಯ ಹಠಾತ್ ನಿಧನಕ್ಕೆ ಚಿತ್ರರಂಗದ ಗಣ್ಯರು ಕಂಬನಿ ಮಿಡಿದಿದ್ದಾರೆ.
ಇದನ್ನೂ ಓದಿ: ಬೆಳಗಾವಿ ಕ್ರೈಂ ಟ್ವಿಸ್ಟ್: ಆಸ್ಪತ್ರೆಯಲ್ಲೇ ನಿವೃತ್ತ ಯೋಧನಿಗೆ ಸ್ಲೋ ಪಾಯ್ಸನ್?
