TOP NEWS

KN Rajanna: ಸಚಿವರಿಗೆ ಶುರುವಾಗಿದೆ ಹೊಸ ಕಾಯಿಲೆ, ಖಾತೆ ಕ್ಯಾತೆಗೆ ಕೆ.ಎನ್. ರಾಜಣ್ಣ ವ್ಯಂಗ್ಯ

kn rajanna taunted senior mlas about ministry controversy

ಬೆಂಗಳೂರು: ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ನೇತೃತ್ವದ ನೂತನ ಕ್ಯಾಬಿನೆಟ್‌ನಲ್ಲಿ ಮೊದಲ ಹಂತದ ಇಲಾಖೆಗಳ ಹಂಚಿಕೆ ಪ್ರಕ್ರಿಯೆ ಮುಗಿಯುತ್ತಿದ್ದಂತೆಯೇ ಆಡಳಿತಾರೂಢ ಕಾಂಗ್ರೆಸ್ ಪಾಳಯದೊಳಗಿನ ಅಸಮಾಧಾನದ ಜ್ವಾಲೆಗಳು ಬಹಿರಂಗವಾಗಿ ಸ್ಫೋಟಗೊಳ್ಳಲಾರಂಭಿಸಿವೆ. ತಮಗೆ ಸಿಕ್ಕಿರುವ ಖಾತೆಗಳ ಬಗ್ಗೆ ಹಿರಿಯ ಸಚಿವರುಗಳು ಅಸಮಾಧಾನ ಹೊರಹಾಕುತ್ತಿರುವುದನ್ನು ಪಕ್ಷದ ಹಿರಿಯ ನಾಯಕ ಹಾಗೂ ಮಾಜಿ ಸಚಿವ ಕೆ.ಎನ್. ರಾಜಣ್ಣ (KN Rajanna) ಅವರು ತಮ್ಮದೇ ವಿಶಿಷ್ಟ ಶೈಲಿಯಲ್ಲಿ ತೀವ್ರವಾಗಿ ಲೇವಡಿ ಮಾಡಿದ್ದಾರೆ.

ಕೃಷ್ಣಬೈರೇಗೌಡರ ಹಠ; ಹೈಕಮಾಂಡ್ ಬಳಿ ದೂರು ಕೊಂಡೊಯ್ದ ಸಚಿವರು

ಬೆಂಗಳೂರು ನಗರಾಭಿವೃದ್ಧಿ ಸಿಗಲಿಲ್ಲ ಎಂದು ರಾಮಲಿಂಗಾರೆಡ್ಡಿ ಅವರು ನಡೆಸಿದ್ದ ಅಸಮಾಧಾನದ ಹೈಡ್ರಾಮಾ ಮುಗಿಯುವ ಮುನ್ನವೇ, ಆಹಾರ ಇಲಾಖೆ ಬೇಡ, ತಮಗೆ ಸಹಕಾರ ಅಥವಾ ಕೃಷಿ ಖಾತೆಯೇ ಬೇಕು ಎಂದು ಕೆ.ಎಚ್. ಮುನಿಯಪ್ಪ ಪಟ್ಟು ಹಿಡಿದಿದ್ದರು. ಈ ಭಿನ್ನಮತದ ಬೆನ್ನಲ್ಲೇ ಈಗ ಮತ್ತೊಬ್ಬ ಹಿರಿಯ ಸಚಿವ ಕೃಷ್ಣಬೈರೇಗೌಡ ಕೂಡ ಬಂಡಾಯದ ಬಾವುಟ ಹಾರಿಸಿ ದೆಹಲಿ ವಿಮಾನ ಹತ್ತಿದ್ದಾರೆ. ತಮಗೆ ನೀಡಿರುವ ನಗರಾಭಿವೃದ್ಧಿ ಇಲಾಖೆಯ ಅಡಿಯಲ್ಲಿ ಬಿಡಿಎ (BDA) ಮತ್ತು ಬಿಎಂಆರ್‌ಡಿಎ (BMRDA) ಸಂಸ್ಥೆಗಳನ್ನು ಸೇರಿಸದಿದ್ದರೆ ತಾವು ಅಧಿಕಾರ ವಹಿಸಿಕೊಳ್ಳುವುದಿಲ್ಲ ಎಂದು ಕೃಷ್ಣಬೈರೇಗೌಡ ಪಟ್ಟು ಹಿಡಿದಿರುವುದು ಹೈಕಮಾಂಡ್‌ಗೆ ಹೊಸ ತಲೆನೋವು ತಂದಿದೆ.

ಯಾರ್ಯಾರಿಗೆ ಯಾವ ಕಾಯಿಲೆ ಇದೆಯೋ ಗೊತ್ತಿಲ್ಲ!

ಸಚಿವರುಗಳ ಈ ಖಾತೆ ಹಠದ ಬಗ್ಗೆ ಮಾಧ್ಯಮಗಳೊಂದಿಗೆ ಮಾತನಾಡಿದ ಕೆ.ಎನ್. ರಾಜಣ್ಣ, “ಈಗ ಕೃಷ್ಣಬೈರೇಗೌಡರ ಸರದಿ ಬಂದಿದೆ. ಬಿಡಿಎ ಮತ್ತು ಬಿಎಂಆರ್‌ಡಿಎ ಇಲ್ಲದಿದ್ದರೆ ನಗರಾಭಿವೃದ್ಧಿ ಖಾತೆಯೇ ಬೇಡ ಎನ್ನುತ್ತಿದ್ದಾರೆ. ಇಲ್ಲಿ ಒಬ್ಬೊಬ್ಬ ನಾಯಕರಿಗೂ ಒಂದೊಂದು ರೀತಿಯ ರಾಜಕೀಯ ಕಾಯಿಲೆ ಕಾಣಿಸಿಕೊಂಡಿದೆ. ಯಾರ್ಯಾರಿಗೆ ಎಂತಹ ಕಾಯಿಲೆಗಳು ಇವೆಯೋ ಗೊತ್ತಿಲ್ಲ, ಇದಕ್ಕೆ ಹೈಕಮಾಂಡ್ ನಾಯಕರು ದೆಹಲಿಯಿಂದ ಯಾವ ತರಹದ ಔಷಧಿಗಳನ್ನು ಕಳುಹಿಸಿಕೊಡುತ್ತಾರೋ ಕಾದು ನೋಡಬೇಕಿದೆ” ಎಂದು ವ್ಯಂಗ್ಯವಾಡಿದರು.

ನನಗೇನು ಮಂತ್ರಿ ಸ್ಥಾನ ಬೇಡ, ಆದ್ರೆ ಹಲವು ಡಿಸಿಎಂ ಬೇಕು

ಇದೇ ವೇಳೆ ತಮಗೆ ಸಚಿವ ಸ್ಥಾನ ಸಿಗದ ಕುರಿತು ಸ್ಪಷ್ಟನೆ ನೀಡಿದ ರಾಜಣ್ಣ, ತಾವು ಸಚಿವ ಸ್ಥಾನದ ರೇಸ್‌ನಲ್ಲಿ ಇಲ್ಲ ಮತ್ತು ಯಾವುದೇ ಬೇಡಿಕೆ ಇಟ್ಟಿಲ್ಲ ಎಂದರು. ಆದರೆ, ರಾಜ್ಯದಲ್ಲಿ ಸಮುದಾಯವಾರು ಉಪಮುಖ್ಯಮಂತ್ರಿ (DCM) ಹುದ್ದೆಗಳನ್ನು ಸೃಷ್ಟಿಸಬೇಕು ಎಂಬ ತಮ್ಮ ಹಳೆಯ ನಿಲುವನ್ನು ಅವರು ಮತ್ತೊಮ್ಮೆ ಪ್ರತಿಪಾದಿಸಿದರು. ಪರಿಶಿಷ್ಟ ಜಾತಿ (SC), ಹಿಂದುಳಿದ ವರ್ಗಗಳು (OBC) ಹಾಗೂ ಅಲ್ಪಸಂಖ್ಯಾತ ಸಮುದಾಯಗಳ ಹಿರಿಯ ನಾಯಕರಿಗೆ ಡಿಸಿಎಂ ಸ್ಥಾನಗಳನ್ನು ನೀಡುವುದರಿಂದ ಸಮಾಜದಲ್ಲಿ ಸಮತೋಲನ ಕಾಯ್ದುಕೊಳ್ಳಲು ಮತ್ತು ಪಕ್ಷವನ್ನು ಭದ್ರಪಡಿಸಲು ಅನುಕೂಲವಾಗುತ್ತದೆ ಎಂದು ವಾದಿಸಿದರು.

ಸ್ಥಳೀಯ ಸಂಸ್ಥೆಗಳ ಚುನಾವಣೆ ವಿಳಂಬಕ್ಕೆ ಆಕ್ರೋಶ: ರಾಜ್ಯದಲ್ಲಿ ಜಿಲ್ಲಾ, ತಾಲೂಕು ಮತ್ತು ಗ್ರಾಮ ಪಂಚಾಯಿತಿ ಚುನಾವಣೆಗಳು ನಿರಂತರವಾಗಿ ತಡವಾಗುತ್ತಿರುವುದಕ್ಕೆ ಕೆ.ಎನ್. ರಾಜಣ್ಣ ತೀವ್ರ ಕಳವಳ ವ್ಯಕ್ತಪಡಿಸಿದರು. ಸುಪ್ರೀಂ ಕೋರ್ಟ್ ಗಡುವಿನ ಪ್ರಕಾರ ಆಗಸ್ಟ್ ಒಳಗೆ ಗ್ರಾಮ ಪಂಚಾಯಿತಿ ಚುನಾವಣೆ ನಡೆಸಬೇಕಿದೆ. ಆದರೆ ಜಿಲ್ಲಾ ಮತ್ತು ತಾಲೂಕು ಪಂಚಾಯಿತಿ ಚುನಾವಣೆಗಳು ನಡೆದು ಐದು ವರ್ಷಗಳೇ ಕಳೆದಿವೆ. ಈ ಆಡಳಿತಾತ್ಮಕ ವಿಳಂಬದಿಂದಾಗಿ ಸಂವಿಧಾನದ 73 ಮತ್ತು 74ನೇ ತಿದ್ದುಪಡಿಯಡಿ ಕೇಂದ್ರ ಸರ್ಕಾರದಿಂದ ಬರಬೇಕಿದ್ದ ಕೋಟ್ಯಂತರ ರೂಪಾಯಿಗಳ ವಿಕೇಂದ್ರೀಕರಣ ಅನುದಾನ ಸ್ಥಗಿತಗೊಂಡಿದೆ. ಇದು ಕರ್ನಾಟಕಕ್ಕೆ ಆಗುತ್ತಿರುವ ದೊಡ್ಡ ಅನ್ಯಾಯ ಎಂದ ಅವರು, ಪ್ರಜಾಪ್ರಭುತ್ವದಲ್ಲಿ ಜನಪ್ರತಿನಿಧಿಗಳು ಆಡಳಿತ ನಡೆಸಬೇಕೇ ಹೊರತು ಅಧಿಕಾರಿಗಳಲ್ಲ ಎಂದು ಹೇಳುವ ಮೂಲಕ ಸ್ವಪಕ್ಷದ ಸರ್ಕಾರದ ಮೇಲೆಯೇ ಪರೋಕ್ಷವಾಗಿ ಒತ್ತಡ ಹೇರಿದರು.

ಇದನ್ನೂ ಓದಿ: ವಾಸ್ತು ಬದಲಾವಣೆಗೆ ಸಿಎಂ ಡಿಕೆಶಿ ಕಸರತ್ತು: ಕುಮಾರಕೃಪಾ ದ್ವಾರ ಉಲ್ಟಾ, ಕೊಠಡಿ ಧ್ವಂಸ

Leave a Reply

Your email address will not be published. Required fields are marked *