ಚೆನ್ನೈ: ತಮಿಳುನಾಡು ರಾಜಕೀಯದಲ್ಲಿ ಹೊಸ ಮೈಲಿಗಲ್ಲು ಸ್ಥಾಪಿಸಿರುವ ನಟ ವಿಜಯ್ (Vijay) ಅವರ ಭರ್ಜರಿ ಗೆಲುವನ್ನು ದಕ್ಷಿಣ ಭಾರತದ ಖ್ಯಾತ ನಟ ಪ್ರಕಾಶ್ ರಾಜ್ ಅವರು ಟೀಕಿಸಿದ್ದು, ಇದು ಈಗ ದೊಡ್ಡ ವಿವಾದಕ್ಕೆ ನಾಂದಿ ಹಾಡಿದೆ. ವಿಜಯ್ ಅವರ ಯಶಸ್ಸನ್ನು ಕೇವಲ ಅಭಿಮಾನಿ ಸಂಘಗಳ ಪ್ರಭಾವ ಎಂದು ಕರೆದಿರುವ ಅವರ ನಿಲುವಿಗೆ ಸಾಮಾಜಿಕ ಜಾಲತಾಣಗಳಲ್ಲಿ ಭಾರಿ ಪ್ರತಿರೋಧ ವ್ಯಕ್ತವಾಗುತ್ತಿದೆ.
ಏನಿದು ಪ್ರಕಾಶ್ ರಾಜ್ ಪೋಸ್ಟ್? ತಮ್ಮ ಎಕ್ಸ್ ಖಾತೆಯಲ್ಲಿ ಈ ಕುರಿತು ಬರೆದುಕೊಂಡಿರುವ ಪ್ರಕಾಶ್ ರಾಜ್, “ಹಲೋ ತಮಿಳುನಾಡು.. ಹಿಂದೆ ಕಾಮರಾಜ್ ಸೋತಿದ್ದರು, ಈಗ ಸ್ಟಾಲಿನ್ ಸೋತಿದ್ದಾರೆ. ಸಮಾಜವು ಈಗ ಕೇವಲ ಅಭಿಮಾನಿಗಳ ಕೂಟವಾಗಿದೆಯೇ ಹೊರತು ರಾಜಕೀಯವಾಗಿ ಪ್ರಬುದ್ಧಗೊಂಡಿಲ್ಲ ಎಂಬುದು ಇದರಿಂದ ಸಾಬೀತಾಗಿದೆ. ಜಾಗೃತಿ ಮೂಡಿಸುವುದು ವಿರೋಧ ಪಕ್ಷದ ಕೆಲಸವಾಗಿರಲಿ” ಎಂದು ಮಾರ್ಮಿಕವಾಗಿ ಕುಟುಕಿದ್ದಾರೆ. ಜನರ ತೀರ್ಪನ್ನು ರಾಜಕೀಯ ಪ್ರಜ್ಞೆಯ ಕೊರತೆ ಎಂದು ವ್ಯಾಖ್ಯಾನಿಸಿರುವುದು ವಿಜಯ್ ಬೆಂಬಲಿಗರನ್ನು ಕೆರಳಿಸಿದೆ.
Tamilnadu Elections வணக்கம் தமிழ்நாடு.. காமராஜர் தோற்றார். மு. க. ஸ்டாலின் தோற்றிருக்கிறார். சமூகம் ரசிகர் மயமாகி இருக்கிறது. அரசியல் மயமாகவில்லை என்பது நிரூபணமாகிறது. அரசியல் விழிப்புணர்வு செய்பவர்களின் பணி என்பது எப்போதும் எதிர்க்கட்சி…
— Prakash Raj (@prakashraaj) May 4, 2026
ತಿರುಗೇಟು ನೀಡಿದ ನೆಟ್ಟಿಗರು: ಪ್ರಕಾಶ್ ರಾಜ್ ಅವರ ಈ ಹೇಳಿಕೆಗೆ ತಮಿಳು ಜನತೆ ಮತ್ತು ವಿಜಯ್ ಅಭಿಮಾನಿಗಳು ತೀವ್ರ ಆಕ್ರೋಶ ಹೊರಹಾಕಿದ್ದಾರೆ. “ಕರ್ನಾಟಕದಲ್ಲಿ ವಾಸಿಸುತ್ತಾ ತಮಿಳುನಾಡಿನ ಜನರ ವಿವೇಚನೆಯನ್ನು ಪ್ರಶ್ನಿಸುವ ಹಕ್ಕು ನಿಮಗಿಲ್ಲ. ನಮಗೆ ಯಾರನ್ನು ಆರಿಸಬೇಕು ಎಂಬ ಅರಿವಿದೆ” ಎಂದು ಅನೇಕರು ಕಿಡಿಕಾರಿದ್ದಾರೆ. ಇನ್ನು ಕೆಲವರು ಪ್ರಕಾಶ್ ರಾಜ್ ಅವರು ಈ ಹಿಂದೆ ಚುನಾವಣೆಯಲ್ಲಿ ಅನುಭವಿಸಿದ ಸೋಲನ್ನು ನೆನಪಿಸಿ, “ಮೊದಲು ನೀವು ಚುನಾವಣೆಯಲ್ಲಿ ಗೆದ್ದು ತೋರಿಸಿ, ಆಮೇಲೆ ಜನರಿಗೆ ಬುದ್ಧಿ ಹೇಳಿ” ಎಂದು ವ್ಯಂಗ್ಯವಾಡಿದ್ದಾರೆ.
ಐತಿಹಾಸಿಕ ಗೆಲುವು ಮತ್ತು ಸಿನಿಮಾ: ಚುನಾವಣಾ ಕಣಕ್ಕೆ ಇಳಿದ ಮೊದಲ ಪ್ರಯತ್ನದಲ್ಲೇ 108 ಸ್ಥಾನಗಳಲ್ಲಿ ಮುನ್ನಡೆ ಕಾಯ್ದುಕೊಳ್ಳುವ ಮೂಲಕ ವಿಜಯ್ ದಾಖಲೆ ಬರೆದಿದ್ದಾರೆ. ಇತ್ತ ರಾಜಕೀಯ ಜಯಭೇರಿಯ ನಡುವೆಯೇ ಅವರ ಬಹುನಿರೀಕ್ಷಿತ ‘ಜನ ನಾಯಗನ್’ ಸಿನಿಮಾ ಬಿಡುಗಡೆಗೆ ಸಜ್ಜಾಗುತ್ತಿದೆ. ಎಚ್. ವಿನೋದ್ ನಿರ್ದೇಶನದ ಈ ಚಿತ್ರದಲ್ಲಿ ಪೂಜಾ ಹೆಗ್ಡೆ ನಾಯಕಿಯಾಗಿ ನಟಿಸಿದ್ದು, ಬಾಬಿ ಡಿಯೋಲ್ ಮತ್ತು ಪ್ರಿಯಾಮಣಿ ಅವರಂತಹ ತಾರಾಗಣವಿರುವುದು ಚಿತ್ರದ ಮೇಲಿನ ಕುತೂಹಲವನ್ನು ಮತ್ತಷ್ಟು ಹೆಚ್ಚಿಸಿದೆ.
ಇದನ್ನೂ ಓದಿ: ಅಂದು ಕರುಣಾನಿಧಿ ಹಿಂದೆ ನಿಂತಿದ್ದ ಆ ಹುಡುಗ ಇಂದು ಡಿಎಂಕೆ ಕೋಟೆ ಧೂಳೀಪಟ ಮಾಡಿದ ‘ಜನನಾಯಕ’!
