ಚೆನ್ನೈ: ತಮಿಳುನಾಡಿನಲ್ಲಿ ನೂತನ ಸರ್ಕಾರ ಅಸ್ತಿತ್ವಕ್ಕೆ ಬರುವ ಪ್ರಕ್ರಿಯೆ ತಡವಾಗುತ್ತಿರುವುದಕ್ಕೆ ನಿರ್ಗಮಿತ ಮುಖ್ಯಮಂತ್ರಿ ಎಂ.ಕೆ. ಸ್ಟಾಲಿನ್ (MK Stalin) ತೀವ್ರ ಕಳವಳ ವ್ಯಕ್ತಪಡಿಸಿದ್ದಾರೆ. ಈ ಸಂಬಂಧ ರಾಜ್ಯಪಾಲ ರಾಜೇಂದ್ರ ವಿಶ್ವನಾಥ್ ಅರ್ಲೇಕರ್ ಅವರಿಗೆ ಮನವಿ ಮಾಡಿರುವ ಅವರು, ಪ್ರಜಾಪ್ರಭುತ್ವದ ಹಿತದೃಷ್ಟಿಯಿಂದ ಕೂಡಲೇ ಮುಂದಿನ ಕ್ರಮ ಕೈಗೊಳ್ಳುವಂತೆ ಒತ್ತಾಯಿಸಿದ್ದಾರೆ.
ಪ್ರಜಾಪ್ರಭುತ್ವದ ಗೌರವ ಕಾಪಾಡಿ: ತಮ್ಮ ಅಧಿಕೃತ ಎಕ್ಸ್ (ಟ್ವಿಟರ್) ಖಾತೆಯಲ್ಲಿ ಈ ಬಗ್ಗೆ ಬರೆದುಕೊಂಡಿರುವ ಸ್ಟಾಲಿನ್, “ಚುನಾವಣಾ ಫಲಿತಾಂಶ ಹೊರಬಂದು ಹಲವು ದಿನಗಳೇ ಕಳೆದಿದ್ದರೂ ಹೊಸ ಸರ್ಕಾರ ರಚನೆಯಾಗದಿರುವುದು ವಿಷಾದನೀಯ. ಈಗಾಗಲೇ ಹಳೆಯ ವಿಧಾನಸಭೆ ವಿಸರ್ಜನೆಯಾಗಿದೆ. ಇಂತಹ ಸಮಯದಲ್ಲಿ ಹೊಸದಾಗಿ ಆಯ್ಕೆಯಾದ ಶಾಸಕರು ಪ್ರಮಾಣವಚನ ಸ್ವೀಕರಿಸಲು ಮತ್ತು ರಾಜ್ಯದ ಜನಪರ ಕೆಲಸಗಳು ಆರಂಭವಾಗಲು ಸರ್ಕಾರ ಅಸ್ತಿತ್ವಕ್ಕೆ ಬರುವುದು ಅತ್ಯಗತ್ಯ. ರಾಜ್ಯಪಾಲರು ಸಂವಿಧಾನದ ಚೌಕಟ್ಟಿನಲ್ಲಿ ತಕ್ಷಣವೇ ಸ್ಪಂದಿಸಬೇಕು” ಎಂದು ತಿಳಿಸಿದ್ದಾರೆ.
தமிழ்நாடு சட்டமன்றத் தேர்தல் முடிவுகள் வெளியாகி, மக்களால் தேர்வு செய்யப்பட்ட சட்டமன்ற உறுப்பினர்களின் பட்டியலைத் தேர்தல் ஆணையம் வெளியிட்டு விட்டது. ஏற்கனவே இருந்த சட்டமன்றத்தையும் கலைத்து மாண்புமிகு ஆளுநர் அவர்கள் ஆணையும் பிறப்பித்து விட்டார். இப்படியொரு நிலையில், தேர்தலில் வென்ற…
— M.K.Stalin – தமிழ்நாட்டை தலைகுனிய விடமாட்டேன் (@mkstalin) May 8, 2026
ರಾಜ್ಯಪಾಲರ ನಿಲುವಿಗೆ ವಿರೋಧ: ದಳಪತಿ ವಿಜಯ್ ನೇತೃತ್ವದ ಟಿವಿಕೆ (TVK) ಪಕ್ಷವು 107 ಸ್ಥಾನಗಳನ್ನು ಗೆದ್ದು ದೊಡ್ಡ ಪಕ್ಷವಾಗಿ ಹೊರಹೊಮ್ಮಿದ್ದರೂ, ಸರ್ಕಾರ ರಚನೆಗೆ ಹಕ್ಕು ಮಂಡಿಸುವ ವಿಚಾರದಲ್ಲಿ ರಾಜ್ಯಪಾಲರು ಅನುಸರಿಸುತ್ತಿರುವ ನಿಲುವು ಈಗ ವಿವಾದಕ್ಕೆ ಕಾರಣವಾಗಿದೆ. ಬಹುಮತ ಸಾಬೀತುಪಡಿಸಲು ರಾಜ್ಯಪಾಲರು ನೀಡಿರುವ ಸೂಚನೆಯನ್ನು ಹಲವು ರಾಜಕೀಯ ಪಕ್ಷಗಳು ಟೀಕಿಸಿವೆ. ಇದು ಜನರ ತೀರ್ಪಿಗೆ ವಿರುದ್ಧವಾದ ನಡೆ ಎಂದು ಆಕ್ಷೇಪ ವ್ಯಕ್ತಪಡಿಸಲಾಗುತ್ತಿದೆ.
ವಿಜಯ್ ಬೆನ್ನಿಗೆ ನಿಂತ ಎಡಪಕ್ಷಗಳು: ಮತ್ತೊಂದೆಡೆ, ಸರ್ಕಾರ ರಚನೆಯ ಕಸರತ್ತು ಚುರುಕುಗೊಂಡಿದ್ದು ನಟ ವಿಜಯ್ ಅವರಿಗೆ ಮಹತ್ವದ ಬೆಂಬಲ ಲಭಿಸಿದೆ. ಸಿಪಿಐ ಮತ್ತು ಸಿಪಿಐ(ಎಂ) ಪಕ್ಷಗಳು ಟಿವಿಕೆಗೆ ಬೇಷರತ್ ಬೆಂಬಲ ನೀಡಲು ಮುಂದಾಗಿವೆ. ಇವು ಮೈತ್ರಿ ಮಾಡಿಕೊಳ್ಳದೆ ಹೊರಗಿನಿಂದ ಬೆಂಬಲ ನೀಡಲಿವೆ. ಇದೇ ಹಾದಿಯಲ್ಲಿ ವಿಸಿಪಿ (VCK) ಕೂಡ ವಿಜಯ್ ಅವರ ಸರ್ಕಾರಕ್ಕೆ ಸಾಥ್ ನೀಡುವ ಮುನ್ಸೂಚನೆ ನೀಡಿದೆ. ಈ ಬೆಳವಣಿಗೆಗಳಿಂದಾಗಿ ವಿಜಯ್ ಅವರಿಗೆ ಅಗತ್ಯವಿರುವ ಸಂಖ್ಯಾಬಲದ ಬಲ ಸಿಕ್ಕಂತಾಗಿದ್ದು, ಅವರು ಇಂದು ಮತ್ತೊಮ್ಮೆ ರಾಜ್ಯಪಾಲರನ್ನು ಭೇಟಿ ಮಾಡುವ ನಿರೀಕ್ಷೆಯಿದೆ.
ಇದನ್ನೂ ಓದಿ: ಗೆದ್ದಿರೋದು ಒಂದು ಸೀಟು, ಕೊಡೋ ಬಿಲ್ಡಪ್ ನೋಡಿ: ಬಿಜೆಪಿಯ ‘ತಟಸ್ಥ’ ನಿಲುವಿಗೆ ನೆಟ್ಟಿಗರ ವ್ಯಂಗ್ಯ!
