TOP NEWS

Good News: ದೆಹಲಿಯಲ್ಲಿ ನಾಗರಿಕ ಸೇವೆಗಳ ಆಕಾಂಕ್ಷಿಗಳಿಗೆ ಹೊಸ ಆಸರೆ: ₹80 ಕೋಟಿ ವೆಚ್ಚದ ‘ಕರ್ನಾಟಕ ಭವನ-4’ ಕ್ಕೆ ಕ್ಯಾಬಿನೆಟ್ ಅಸ್ತು

Good News new Karnataka bhavan to construct in new delhi for UPSC and IAS students

ಬೆಂಗಳೂರು: ದೇಶದ ರಾಜಧಾನಿ ದೆಹಲಿಗೆ ತೆರಳಿ ಯುಪಿಎಸ್‌ಸಿ ಪರೀಕ್ಷೆಗಳಿಗೆ ತರಬೇತಿ ಪಡೆಯುವ ರಾಜ್ಯದ ಪ್ರತಿಭಾವಂತ ಯುವಜನತೆಗೆ ಸರ್ಕಾರ ಸಿಹಿ ಸುದ್ದಿ (Good News) ನೀಡಿದೆ. ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರ ಅಧ್ಯಕ್ಷತೆಯಲ್ಲಿ ನಡೆದ ಸಚಿವ ಸಂಪುಟ ಸಭೆಯಲ್ಲಿ, ಸ್ಪರ್ಧಾತ್ಮಕ ಪರೀಕ್ಷೆಗಳ ತಯಾರಿಯಲ್ಲಿರುವ ವಿದ್ಯಾರ್ಥಿಗಳ ಅನುಕೂಲಕ್ಕಾಗಿ ನವದೆಹಲಿಯಲ್ಲಿ ಹೊಸದಾಗಿ ‘ಕರ್ನಾಟಕ ಭವನ-4’ ಕಟ್ಟಡವನ್ನು ನಿರ್ಮಿಸಲು ಹಸಿರು ನಿಶಾನೆ ನೀಡಲಾಗಿದೆ.

ವಿದ್ಯಾರ್ಥಿಗಳ ಅನುಕೂಲಕ್ಕಾಗಿ ಸರ್ಕಾರದ ನಿರ್ಧಾರ

ಐಎಎಸ್ ಮತ್ತು ಐಪಿಎಸ್‌ನಂತಹ ಉನ್ನತ ಹುದ್ದೆಗಳ ಕನಸು ಹೊತ್ತು ದೆಹಲಿಯಲ್ಲಿ ಬೀಡುಬಿಡುವ ಕರ್ನಾಟಕದ ವಿದ್ಯಾರ್ಥಿಗಳಿಗೆ ವಸತಿ ಹಾಗೂ ಪೂರಕ ಸೌಕರ್ಯ ಒದಗಿಸುವುದು ಈ ಯೋಜನೆಯ ಮುಖ್ಯ ಉದ್ದೇಶವಾಗಿದೆ. ಸುಮಾರು 80 ಕೋಟಿ ರೂಪಾಯಿಗಳ ಅಂದಾಜು ವೆಚ್ಚದಲ್ಲಿ ಅತ್ಯಾಧುನಿಕ ಸೌಲಭ್ಯಗಳೊಂದಿಗೆ ಈ ನೂತನ ಭವನ ತಲೆಯೆತ್ತಲಿದೆ. ಇದರಿಂದಾಗಿ ದೆಹಲಿಯ ದುಬಾರಿ ಜೀವನ ವೆಚ್ಚವನ್ನು ಭರಿಸಲು ಕಷ್ಟಪಡುವ ಬಡ ಹಾಗೂ ಮಧ್ಯಮ ವರ್ಗದ ವಿದ್ಯಾರ್ಥಿಗಳಿಗೆ ಗುಣಮಟ್ಟದ ವಾತಾವರಣ ಸಿಗಲಿದೆ.

ಈ ಹೊಸ ಭವನದಲ್ಲಿ ಕನ್ನಡಿಗ ವಿದ್ಯಾರ್ಥಿಗಳಿಗೆ ಸೀಟುಗಳನ್ನು ಹಂಚಿಕೆ ಮಾಡಲು ಸರ್ಕಾರ ಸಮಾನತೆಯ ಸೂತ್ರವೊಂದನ್ನು ಅಳವಡಿಸಿಕೊಂಡಿದೆ. ಇಲ್ಲಿ ಲಭ್ಯವಾಗುವ ಒಟ್ಟು ಸೌಲಭ್ಯಗಳಲ್ಲಿ ಶೇಕಡಾ 50 ರಷ್ಟನ್ನು ಪರಿಶಿಷ್ಟ ಜಾತಿ ಹಾಗೂ ಪರಿಶಿಷ್ಟ ಪಂಗಡದ (SC-ST) ಅಭ್ಯರ್ಥಿಗಳಿಗೆ ಮೀಸಲಿಡಲು ನಿರ್ಧರಿಸಲಾಗಿದೆ. ಉಳಿದ ಶೇಕಡಾ 50 ರಷ್ಟು ಸೀಟುಗಳನ್ನು ಇತರ ವರ್ಗಗಳ ವಿದ್ಯಾರ್ಥಿಗಳಿಗೆ ಹಂಚಿಕೆ ಮಾಡಲಾಗುವುದು. ಸರ್ಕಾರದ ಈ ದೂರದರ್ಶಿತ್ವದ ನಿರ್ಧಾರದಿಂದಾಗಿ ಮುಂಬರುವ ದಿನಗಳಲ್ಲಿ ಕೇಂದ್ರ ನಾಗರಿಕ ಸೇವೆಗಳಿಗೆ ರಾಜ್ಯದಿಂದ ಆಯ್ಕೆಯಾಗುವ ಅಧಿಕಾರಿಗಳ ಸಂಖ್ಯೆ ಗಣನೀಯವಾಗಿ ಹೆಚ್ಚಾಗಲಿದೆ ಎಂದು ಅಂದಾಜಿಸಲಾಗಿದೆ.

ರೈತರು ಹಾಗೂ ಹೈನುಗಾರರ ನೆರವಿಗೆ ನಿಂತ ಸರ್ಕಾರ: ಕೊಟ್ಟಿಗೆ, ರೇಷ್ಮೆ ಮನೆಗಳಿಗೆ ಕರೆಂಟ್ ಬಿಲ್ ರಿಯಾಯಿತಿ

ರಾಜ್ಯದ ಹಳ್ಳಿಗಳ ಆರ್ಥಿಕತೆಗೆ ಚೈತನ್ಯ ತುಂಬುವ ಹಾಗೂ ಗ್ರಾಮೀಣ ಜನತೆಗೆ ಉತ್ತಮ ಸೌಲಭ್ಯ ಕಲ್ಪಿಸುವ ನಿಟ್ಟಿನಲ್ಲಿ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ನೇತೃತ್ವದ ಸಚಿವ ಸಂಪುಟ (Cabinet) ಸಭೆಯು ಹಲವು ಐತಿಹಾಸಿಕ ತೀರ್ಮಾನಗಳನ್ನು ಕೈಗೊಂಡಿದೆ. ತಮ್ಮ ಎರಡನೇ ಕ್ಯಾಬಿನೆಟ್ ಸಭೆಯ ಬಳಿಕ ಜಂಟಿ ಸುದ್ಧಿಗೋಷ್ಠಿ ನಡೆಸಿ ಮಾತನಾಡಿದ ಮುಖ್ಯಮಂತ್ರಿಗಳು, ರೈತರು, ಹೈನುಗಾರರು ಹಾಗೂ ಹಿಂದುಳಿದ ಜಿಲ್ಲೆಗಳ ಅಭಿವೃದ್ಧಿಗೆ ಪೂರಕವಾದ ಯೋಜನೆಗಳನ್ನು ಜಾರಿಗೆ ತರುತ್ತಿರುವುದಾಗಿ ಪ್ರಕಟಿಸಿದರು.

ವಿದ್ಯುತ್‌ ಶುಲ್ಕದಲ್ಲಿ ವಿನಾಯಿತಿ

ಗ್ರಾಮೀಣ ಭಾಗದ ಪ್ರಮುಖ ಉಪಕಸುಬುಗಳಾದ ರೇಷ್ಮೆ ಕೃಷಿ ಹಾಗೂ ಹೈನುಗಾರಿಕೆಯನ್ನು ಪ್ರೋತ್ಸಾಹಿಸಲು ಸರ್ಕಾರ ಮುಂದಾಗಿದೆ. ಇನ್ಮುಂದೆ ಹಳ್ಳಿಗಳಲ್ಲಿರುವ ರೇಷ್ಮೆ ಹುಳು ಸಾಕಾಣಿಕೆಯ ಮನೆಗಳಿಗೆ ಹಾಗೂ ಹಸುಗಳನ್ನು ಕಟ್ಟುವ ಕೊಟ್ಟಿಗೆಗಳಿಗೆ ವಿದ್ಯುತ್ ಶುಲ್ಕದಲ್ಲಿ ವಿನಾಯಿತಿ ನೀಡಲು ಸಚಿವ ಸಂಪುಟ ಒಪ್ಪಿಗೆ ಸೂಚಿಸಿದೆ. ಇದರಿಂದಾಗಿ ಹೈನುಗಾರಿಕೆ ಮತ್ತು ರೇಷ್ಮೆ ಉದ್ಯಮವನ್ನೇ ನಂಬಿಕೊಂಡಿರುವ ಲಕ್ಷಾಂತರ ರೈತ ಕುಟುಂಬಗಳ ಪ್ರತಿ ತಿಂಗಳ ಆರ್ಥಿಕ ಹೊರೆ ಗಣನೀಯವಾಗಿ ತಗ್ಗಲಿದ್ದು, ಗ್ರಾಮೀಣ ಆರ್ಥಿಕತೆ ಮತ್ತಷ್ಟು ಬಲಗೊಳ್ಳಲಿದೆ ಎಂದು ಸಿಎಂ ವಿಶ್ವಾಸ ವ್ಯಕ್ತಪಡಿಸಿದ್ದಾರೆ.

ಇದರ ಜೊತೆಗೆ ಹೆಲ್ತ್ ಸೆಕ್ಟರ್‌ಗೂ ದೊಡ್ಡ ಕೊಡುಗೆ ಸಿಕ್ಕಿದ್ದು, ಕಲ್ಯಾಣ ಕರ್ನಾಟಕ ಭಾಗದ ಅತ್ಯಂತ ಹಿಂದುಳಿದ ಜಿಲ್ಲೆಯಾದ ಯಾದಗಿರಿಯ ಜನರ ಆರೋಗ್ಯ ರಕ್ಷಣೆಗೆ ಸರ್ಕಾರ ಹೊಸ ಯೋಜನೆ ರೂಪಿಸಿದೆ. ಜಿಲ್ಲೆಯ ನಾಗರಿಕರಿಗೆ ಸ್ಥಳೀಯವಾಗಿಯೇ ಅತ್ಯಾಧುನಿಕ ಚಿಕಿತ್ಸೆ ಸಿಗುವಂತೆ ಮಾಡಲು ಬರೋಬ್ಬರಿ 100 ಕೋಟಿ ರೂಪಾಯಿಗಳ ಭಾರೀ ವೆಚ್ಚದಲ್ಲಿ ಹೊಸ ಸೂಪರ್ ಸ್ಪೆಷಾಲಿಟಿ ಆಸ್ಪತ್ರೆಯನ್ನು ಸ್ಥಾಪಿಸಲು ಸಂಪುಟ ಸಭೆಯಲ್ಲಿ ಗ್ರೀನ್ ಸಿಗ್ನಲ್ ನೀಡಲಾಗಿದೆ. ಅಲ್ಲದೆ, ಸದ್ಯ ರಾಜ್ಯದ ಹಲವೆಡೆ ಕಾಡುತ್ತಿರುವ ಕುಡಿಯುವ ನೀರಿನ ಅಭಾವವನ್ನು ಶಾಶ್ವತವಾಗಿ ನೀಗಿಸುವ ಸಲುವಾಗಿ ಶೀಘ್ರದಲ್ಲೇ ಉನ್ನತ ಮಟ್ಟದ ಪ್ರತ್ಯೇಕ ಸಭೆಯೊಂದನ್ನು ನಡೆಸಿ ಕಟ್ಟುನಿಟ್ಟಿನ ಕ್ರಮ ಕೈಗೊಳ್ಳಲಾಗುವುದು ಎಂದು ಮುಖ್ಯಮಂತ್ರಿಗಳು ಭರವಸೆ ನೀಡಿದ್ದಾರೆ.

ಇದೇ ವೇಳೆ ಮುಂಬರುವ ದಿನಗಳಲ್ಲಿ ಸಂಪುಟ ವಿಸ್ತರಣೆಯ ಪ್ರಕ್ರಿಯೆ ಮುಗಿಯುತ್ತಿದ್ದಂತೆಯೇ ರಾಜ್ಯದ ಎಲ್ಲಾ ಜಿಲ್ಲೆಗಳಿಗೂ ಹೊಸದಾಗಿ ಉಸ್ತುವಾರಿ ಸಚಿವರನ್ನು ನೇಮಿಸಲಾಗುವುದು ಎಂದು ತಿಳಿಸಿದ ಅವರು, ಆಡಳಿತಾತ್ಮಕವಾಗಿ ಅತ್ಯಂತ ಪ್ರಮುಖವಾಗಿರುವ ಇನ್ನುಳಿದ ಮೂರು ವಿಷಯಗಳ ಬಗ್ಗೆ ಚರ್ಚಿಸಲು ಬರುವ ಸೋಮವಾರ ಮತ್ತೊಂದು ಸಚಿವ ಸಂಪುಟ ಸಭೆಯನ್ನು ಕರೆಯಲಾಗಿದೆ ಎಂದು ಸ್ಪಷ್ಟಪಡಿಸಿದರು. ಅಂದಿನ ಸಭೆಯಲ್ಲಿ ಈ ಮೂರೂ ಪ್ರಮುಖ ವಿಷಯಗಳಿಗೆ ಅಂತಿಮ ಮುದ್ರೆ ಬೀಳಲಿದ್ದು, ಸರ್ಕಾರದ ಈ ಎಲ್ಲಾ ನಡೆಗಳು ರಾಜ್ಯದಲ್ಲಿ ಜನಸೇವೆಯನ್ನು ಮತ್ತಷ್ಟು ಚುರುಕುಗೊಳಿಸಲಿವೆ ಎಂದು ಡಿ.ಕೆ. ಶಿವಕುಮಾರ್ ವಿವರಿಸಿದ್ದಾರೆ.

ಇದನ್ನೂ ಓದಿ: ಸಾರಿಗೆ ಸುಧಾರಣೆಗೆ ಸರ್ಕಾರದ ಬಿಗ್ ಪ್ಲಾನ್: ಹಳ್ಳಿಗಳಿಗೆ ಸಿಗಲಿವೆ ಹೊಸ ಬಸ್ಸುಗಳು

Leave a Reply

Your email address will not be published. Required fields are marked *