TOP NEWS

DN Jeevaraj: ಶೃಂಗೇರಿ ಮರುಮತ ಏಣಿಕೆ, ಡಿಕೆಶಿಗೆ ಜೀವರಾಜ್‌ ಟಾಂಗ್

DN Jeevaraj reaction about dk shivakumar statement

ಬೆಂಗಳೂರು: ಶೃಂಗೇರಿ ವಿಧಾನಸಭಾ ಕ್ಷೇತ್ರದ ಮರು ಎಣಿಕೆ ಫಲಿತಾಂಶದ ಬಳಿಕ ರಾಜ್ಯ ರಾಜಕೀಯದಲ್ಲಿ ಆರೋಪ-ಪ್ರತ್ಯಾರೋಪಗಳು ತೀವ್ರಗೊಂಡಿವೆ. ಮರು ಎಣಿಕೆಯಲ್ಲಿ ಜಯ ಸಾಧಿಸಿರುವ ಬಿಜೆಪಿ ಶಾಸಕ ಡಿ.ಎನ್. ಜೀವರಾಜ್ (DN Jeevaraj) ಅವರು ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರ ಹೇಳಿಕೆಗಳಿಗೆ ಕಟುವಾಗಿ ಪ್ರತಿಕ್ರಿಯಿಸಿದ್ದು, ಪ್ರಜಾಪ್ರಭುತ್ವದ ಮೌಲ್ಯಗಳ ಬಗ್ಗೆ ಉಭಯ ನಾಯಕರ ನಡುವೆ ವಾಕ್ಸಮರ ಆರಂಭವಾಗಿದೆ.

ಬೆದರಿಕೆ ತಂತ್ರ ನಡೆಯಲ್ಲ: ಡಿಕೆಶಿಗೆ ಜೀವರಾಜ್ ಟಾಂಗ್ ಮರು ಎಣಿಕೆಯಲ್ಲಿ ಗೆಲುವು ದಾಖಲಿಸಿದ ನಂತರ ಬೆಂಗಳೂರಿನಲ್ಲಿ ಮಾಜಿ ಸಿಎಂ ಬಿ.ಎಸ್. ಯಡಿಯೂರಪ್ಪ ಅವರ ಆಶೀರ್ವಾದ ಪಡೆದ ಡಿ.ಎನ್. ಜೀವರಾಜ್, ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದರು. “ಡಿ.ಕೆ. ಶಿವಕುಮಾರ್ ಅವರು ಹಿರಿಯ ನಾಯಕರು, ಅವರು ನಮ್ಮನ್ನು ಅಪರಾಧಿಗಳಂತೆ ಚಿತ್ರಿಸಿ ಬೆದರಿಸಲು ಪ್ರಯತ್ನಿಸಬಾರದು. ಮತಗಳ ಟ್ಯಾಂಪರಿಂಗ್ ಆಗಿದೆ ಎಂಬ ಕಾಂಗ್ರೆಸ್ ಆರೋಪದಲ್ಲಿ ಸತ್ಯಾಂಶವಿಲ್ಲ. 24 ಗಂಟೆ ಪೊಲೀಸ್ ಕಾವಲಿರುವ ಪೋಸ್ಟಲ್ ಬ್ಯಾಲೆಟ್‌ಗಳನ್ನು ಮುಟ್ಟುವುದು ಯಾರಿಗೂ ಸಾಧ್ಯವಿಲ್ಲ. ಡಿಕೆಶಿ ಅವರು ನಮಗೂ ಉಪಮುಖ್ಯಮಂತ್ರಿಗಳೇ, ಹಾಗಾಗಿ ಅವರು ಜವಾಬ್ದಾರಿಯುತವಾಗಿ ಮಾತನಾಡಬೇಕು” ಎಂದು ತಿರುಗೇಟು ನೀಡಿದರು. ಅಲ್ಲದೆ, ಈ ಪ್ರಕರಣದ ತನಿಖೆಯನ್ನು ಚುನಾವಣಾ ಆಯೋಗ ಮಾಡಬೇಕೇ ಹೊರತು ಸರ್ಕಾರವಲ್ಲ ಎಂದು ಅವರು ಸ್ಪಷ್ಟಪಡಿಸಿದರು.

ಷಡ್ಯಂತ್ರದ ಆರೋಪ ಮಾಡಿದ ಡಿ.ಕೆ. ಶಿವಕುಮಾರ್ ಮತ್ತೊಂದೆಡೆ, ಶೃಂಗೇರಿ ಮರು ಎಣಿಕೆ ಫಲಿತಾಂಶದ ಬಗ್ಗೆ ತೀವ್ರ ಆಕ್ರೋಶ ವ್ಯಕ್ತಪಡಿಸಿರುವ ಡಿ.ಕೆ. ಶಿವಕುಮಾರ್, ಇದೊಂದು ವ್ಯವಸ್ಥಿತ ಷಡ್ಯಂತ್ರ ಎಂದು ದೂರಿದ್ದಾರೆ. “ಮತ ಎಣಿಕೆ ಮುಗಿದು ಬಂಡಲ್‌ಗಳನ್ನು ಸೀಲ್ ಮಾಡಿದ ಮೇಲೆ, ಆ ಸೀಲ್ ಒಡೆದು ಕಾಂಗ್ರೆಸ್ ಪರವಾಗಿದ್ದ ಮತಗಳ ಮೇಲೆ ಮತ್ತೊಂದು ಗುರುತು ಹಾಕುವ ಮೂಲಕ ಅವುಗಳನ್ನು ಅಸಿಂಧುಗೊಳಿಸಲಾಗಿದೆ. ಅಧಿಕಾರಿಗಳನ್ನು ಬಳಸಿಕೊಂಡು ಈ ಅಕ್ರಮ ಎಸಗಲಾಗಿದ್ದು, ಇದು ಪ್ರಜಾಪ್ರಭುತ್ವಕ್ಕೆ ಮಾರಕವಾಗಿದೆ” ಎಂದು ಕಿಡಿಕಾರಿದರು. ಈ ಅಕ್ರಮದ ವಿರುದ್ಧ ಸರ್ಕಾರದ ಮಟ್ಟದಲ್ಲಿ ಉನ್ನತ ತನಿಖೆ ನಡೆಸುವುದಾಗಿ ಅವರು ಎಚ್ಚರಿಸಿದ್ದಾರೆ.

ಜಯನಗರ ಪ್ರಕರಣ ಉಲ್ಲೇಖಿಸಿ ಪ್ರಶ್ನೆ ಇದೇ ಸಂದರ್ಭದಲ್ಲಿ ಜಯನಗರ ಕ್ಷೇತ್ರದ ಉದಾಹರಣೆ ನೀಡಿದ ಡಿ.ಕೆ. ಶಿವಕುಮಾರ್, “ಜಯನಗರದಲ್ಲಿ ಸೌಮ್ಯ ರೆಡ್ಡಿ ಅವರು ಕೇವಲ 12 ಮತಗಳಿಂದ ಸೋತಿದ್ದರೂ ಅಲ್ಲಿ ಮರು ಎಣಿಕೆಗೆ ಅವಕಾಶ ಸಿಕ್ಕಿಲ್ಲ. ಆದರೆ ಶೃಂಗೇರಿಯಲ್ಲಿ ಮಾತ್ರ ಮರು ಎಣಿಕೆ ನಡೆದಿದ್ದು ಹೇಗೆ? ಗಾಯತ್ರಿ ಶಾಂತನಗೌಡ ಅವರಿಗೆ ನ್ಯಾಯ ಸಿಗದಂತೆ ಕೋರ್ಟ್ ಮೂಲಕ ತಡೆ ತರಲಾಗುತ್ತಿದೆ” ಎಂದು ವಾಗ್ದಾಳಿ ನಡೆಸಿದರು. ಕಾಂಗ್ರೆಸ್ ನೀಡಿರುವ ದೂರಿನ ಆಧಾರದ ಮೇಲೆ ಈಗಾಗಲೇ ಎಫ್‌ಐಆರ್ ದಾಖಲಾಗಿದ್ದು, ಕಾನೂನು ಹೋರಾಟ ಮುಂದುವರಿಸುವುದಾಗಿ ಅವರು ತಿಳಿಸಿದ್ದಾರೆ.

ಒಟ್ಟಾರೆಯಾಗಿ ಶೃಂಗೇರಿ ಮರು ಎಣಿಕೆ ಫಲಿತಾಂಶವು ರಾಜ್ಯದ ಆಡಳಿತ ಮತ್ತು ವಿರೋಧ ಪಕ್ಷಗಳ ನಡುವೆ ದೊಡ್ಡ ಮಟ್ಟದ ಸಂಘರ್ಷಕ್ಕೆ ನಾಂದಿ ಹಾಡಿದೆ. ಈ ವಿವಾದ ಮುಂದಿನ ದಿನಗಳಲ್ಲಿ ಯಾವ ತಿರುವು ಪಡೆಯಲಿದೆ ಎಂಬುದು ಕುತೂಹಲಕಾರಿಯಾಗಿದೆ.

ಇದನ್ನೂ ಓದಿ: ಕೇರಳದಲ್ಲಿ ಕಾಂಗ್ರೆಸ್ ವಿಜಯೋತ್ಸವ: ಪಶ್ಚಿಮ ಬಂಗಾಳದ ಫಲಿತಾಂಶ ಪ್ರಜಾಪ್ರಭುತ್ವದ ಸೋಲು!: ಸಿಎಂ ಸಿದ್ದರಾಮಯ್ಯ

Leave a Reply

Your email address will not be published. Required fields are marked *