ಬೆಂಗಳೂರು: ರಾಜ್ಯದ ನೂತನ ಮುಖ್ಯಮಂತ್ರಿಯಾಗಿ ಅಧಿಕಾರ ವಹಿಸಿಕೊಳ್ಳಲಿರುವ ಡಿ.ಕೆ. ಶಿವಕುಮಾರ್ (DK Shivakumar) ಅವರ ಅಚಲ ದೈವಭಕ್ತಿ ಹಾಗೂ ಜ್ಯೋತಿಷ್ಯ ಶಾಸ್ತ್ರದ ಮೇಲಿನ ನಂಬಿಕೆ ರಾಜಕೀಯ ವಲಯದಲ್ಲಿ ಜಗಜ್ಜಾಹೀರಾಗಿದೆ. ಜೂನ್ 3ರ ಬುಧವಾರ ಸಂಜೆ ಭರ್ಜರಿ ಮುಹೂರ್ತದಲ್ಲಿ ಅಂದರೆ 4:05 ಕ್ಕೆ ಲೋಕಭವನದ ಗಾಜಿನಮನೆಯಲ್ಲಿ ನೆರವೇರಲಿರುವ ಐತಿಹಾಸಿಕ ಸಮಾರಂಭದಲ್ಲಿ ಅವರು ಸಿಎಂ ಆಗಿ ಸತ್ಯಪ್ರತಿಜ್ಞೆ ಮಾಡಲಿದ್ದಾರೆ. ಈ ಮಹತ್ವದ ಕ್ಷಣಕ್ಕೆ ದೇಶದ ವಿವಿಧ ಧರ್ಮಗಳ ಪೂಜ್ಯ ಸ್ವಾಮೀಜಿಗಳು ಮತ್ತು ಧರ್ಮಗುರುಗಳು ಸಾಕ್ಷಿಯಾಗಲಿದ್ದು, ಇಡೀ ಭಾರತಕ್ಕೆ ಸರ್ವಧರ್ಮ ಸಹಿಷ್ಣುತೆ, ಶಾಂತಿ ಹಾಗೂ ಸೌಹಾರ್ದತೆಯ ಪ್ರಬಲ ಸಂದೇಶ ರವಾನಿಸಲು ಡಿಕೆಶಿ ಸಜ್ಜಾಗಿದ್ದಾರೆ. ಇದಕ್ಕಾಗಿ ರಾಜ್ಯದ ಬೇರೆ ಬೇರೆ ಪ್ರಾಂತ್ಯಗಳ ಎಲ್ಲಾ ಸಮುದಾಯ ಹಾಗೂ ಜನಾಂಗಗಳ ಸುಮಾರು 55 ಕ್ಕೂ ಹೆಚ್ಚು ಪ್ರಮುಖ ಮಠಾಧಿಪತಿಗಳು, ಚರ್ಚ್ಗಳ ಫಾದರ್ಗಳು ಮತ್ತು ಮುಸ್ಲಿಂ ಮೌಲ್ವಿಗಳಿಗೆ ಸರ್ಕಾರಿ ವತಿಯಿಂದಲೇ ಅಧಿಕೃತ ಆಮಂತ್ರಣ ಪತ್ರ ತಲುಪಿಸಲು ಕಟ್ಟುನಿಟ್ಟಿನ ಸೂಚನೆ ನೀಡಲಾಗಿದೆ.
ಶಾಸ್ತ್ರೋಕ್ತವಾಗಿ ಪೂರ್ವಾಭಿಮುಖ ವೇದಿಕೆ ನಿರ್ಮಾಣ: ಜ್ಯೋತಿಷಿಗಳು ಮತ್ತು ಪಂಡಿತರು ನಿಗದಿಪಡಿಸಿದ ದಿನಾಂಕ ಹಾಗೂ ಸಮಯವನ್ನು ಚಾಚೂ ತಪ್ಪದೆ ಪಾಲಿಸುವ ಡಿಕೆಶಿ ಅವರ ಆಶಯದಂತೆಯೇ ಇಡೀ ಕಾರ್ಯಕ್ರಮದ ನೀಲನಕ್ಷೆ ಸಿದ್ಧಗೊಂಡಿದೆ. ಧಾರ್ಮಿಕ ಮುಖಂಡರ ಸಲಹೆಯ ಮೇರೆಗೆ ನೂತನ ಮುಖ್ಯಮಂತ್ರಿಗಳು ಪೂರ್ವಾಭಿಮುಖವಾಗಿ ನಿಂತು ಪ್ರಮಾಣವಚನ ಸ್ವೀಕರಿಸಲಿದ್ದಾರೆ. ಇದಕ್ಕಾಗಿಯೇ ಲೋಕಭವನದ ಬ್ಯಾಂಕ್ವೆಟ್ ಹಾಲ್ನಲ್ಲಿ ವಿಶೇಷವಾಗಿ ಮೂಡಣ ದಿಕ್ಕಿಗೆ ಮುಖ ಮಾಡಿರುವ ಬೃಹತ್ ಸ್ಟೇಜ್ ಸಿದ್ಧಪಡಿಸಲಾಗಿದೆ. ಕಲಾತ್ಮಕವಾಗಿ ವಿನ್ಯಾಸಗೊಳಿಸಲಾದ ಈ ವೇದಿಕೆಯ ಆವರಣದಲ್ಲಿ ಒಟ್ಟು 1,100 ಆಸನಗಳ ವ್ಯವಸ್ಥೆ ಮಾಡಲಾಗಿದ್ದು, ಪೂಜ್ಯ ಶ್ರೀಗಳು, ಗಣ್ಯ ನ್ಯಾಯಾಧೀಶರು, ನೆರೆ ರಾಜ್ಯಗಳಿಂದ ಬರುವ ಮುಖ್ಯಮಂತ್ರಿಗಳು ಹಾಗೂ ವಿಶೇಷ ಅತಿಥಿಗಳಿಗಾಗಿ ವಿವಿಐಪಿ ಆಸನಗಳನ್ನು ಕಾಯ್ದಿರಿಸಲಾಗಿದೆ.
ಆಹ್ವಾನಿತ ಪ್ರಮುಖ ಧರ್ಮಗುರುಗಳ ಮತ್ತು ಮಠಾಧಿಪತಿಗಳ ಪಟ್ಟಿ:
- ಶ್ರೀ ನಿರ್ಮಲಾನಂದನಾಥ ಮಹಾಸ್ವಾಮಿಗಳು – ಆದಿಚುಂಚನಗಿರಿ ಮಹಾಸಂಸ್ಥಾನಮಠ, ಆದಿಚುಂಚನಗಿರಿ.
- ಶ್ರೀ ಶಿವರಾತ್ರಿದೇಶಿಕೇಂದ್ರ ಮಹಾಸ್ವಾಮಿಗಳು – ಸುತ್ತೂರುಮಠ, ಮೈಸೂರು.
- ಶ್ರೀ ಸಿದ್ಧಲಿಂಗ ಮಹಾಸ್ವಾಮಿಗಳು – ಶ್ರೀಸಿದ್ಧಗಂಗಾಮಠ, ತುಮಕೂರು.
- ಶ್ರೀ ನಿಶ್ಚಲಾನಂದನಾಥ ಮಹಾಸ್ವಾಮಿಗಳು – ವಿಶ್ವ ಒಕ್ಕಲಿಗ ಮಹಾಸಂಸ್ಥಾನಮಠ, ಬೆಂಗಳೂರು.
- ಶ್ರೀ ನಂಜಾವಧೂತ ಮಹಾಸ್ವಾಮಿಗಳು – ಗುರು ಬೃಹ್ಮೇಶ್ವರಮಠ, ಪಟ್ಟನಾಯಕನಹಳ್ಳಿ, ಶಿರಾ.
- ಶ್ರೀ ಕರಿವೃಷಭ ದೇಶಿಕೇಂದ್ರ ಶಿವಯೋಗಿ ಮಹಾಸ್ವಾಮಿಗಳು – ಕಾಡಸಿದ್ಧೇಶ್ವರಮಠ, ನೊಣವಿನಕೆರೆ.
- ಶ್ರೀ ಶಿವಮೂರ್ತಿ ಶಿವಾಚಾರ್ಯ ಮಹಾಸ್ವಾಮಿಗಳು – ತರಳಬಾಳು ಬೃಹನ್ಮಠ, ಸಿರಿಗೆರೆ.
- ಶ್ರೀ ವಚನಾನಂದ ಮಹಾಸ್ವಾಮಿಗಳು – ವೀರಶೈವ ಲಿಂಗಾಯತ ಪಂಚಮಸಾಲಿ ಜಗದ್ಗುರು ಪೀಠ, ಹರಿಹರ.
- ಶ್ರೀ ಪ್ರಸನ್ನ ರೇಣುಕ ವೀರಸೋಮೇಶ್ವರ ಶಿವಾಚಾರ್ಯ ಮಹಾಸ್ವಾಮಿಗಳು – ರಂಭಾಪುರ ಪೀಠ, ಬಾಳೆಹೊನ್ನೂರು.
- ಶ್ರೀ ಸಿದ್ಧಲಿಂಗ ರಾಜದೇಶಿಕೇಂದ್ರ ಮಹಾಸ್ವಾಮಿಗಳು – ಉಜ್ಜಯಿನಿಪೀಠ, ವಿಜಯನಗರಾ ಜಿಲ್ಲೆ.
- ಶ್ರೀ ಭೀಮಾಶಂಕರ ಶಿವಾಚಾರ್ಯ ಮಹಾಸ್ವಾಮಿಗಳು – ಕೇದಾರಪೀಠ, ಕೇದಾರನಾಥ.
- ಶ್ರೀ ಚೆನ್ನಸಿದ್ಧರಾಮ ಶಿವಾಚಾರ್ಯ ಮಹಾಸ್ವಾಮಿಗಳು – ಶ್ರೀಶೈಲಪೀಠ, ಶ್ರೀಶೈಲ.
- ಶ್ರೀ ನಿರಂಜನಾನಂದಪುರಿ ಸ್ವಾಮೀಜಿ – ಕನಕ ಗುರುಪೀಠ, ಕಾಗಿನೆಲೆ.
- ಶ್ರೀ ಇಮ್ಮಡಿ ಸಿದ್ದರಾಮೇಶ್ವರ ಸ್ವಾಮೀಜಿ – ಭೋವಿ ಗುರುಪೀಠ, ಚಿತ್ರದುರ್ಗ.
- ಶ್ರೀ ಶಾಂತವೀರ ಸ್ವಾಮೀಜಿ – ಕುಂಚಟಿಗ ಗುರುಪೀಠ, ಹೊಸದುರ್ಗ.
- ಬಸವಮೂರ್ತಿ ಮಾದಾರ ಚನ್ನಯ್ಯ ಸ್ವಾಮೀಜಿ – ಮಾದಾರ ಚನ್ನಯ್ಯ ಗುರುಪೀಠ, ಚಿತ್ರದುರ್ಗ.
- ಶ್ರೀ ವಿಶ್ವಪ್ರಸನ್ನ ತೀರ್ಥ ಮಹಾಸ್ವಾಮಿಗಳು – ಪೇಜಾವರಮಠ, ಉಡುಪಿ.
- ಶ್ರೀ ರವಿಶಂಕರ ಗುರೂಜೀ – ಆರ್ಟ್ ಆಫ್ ಲಿವಿಂಗ್ ಆಶ್ರಮ, ಬೆಂಗಳೂರು.
- ಶ್ರೀ ಸ್ವಸ್ತಿಶ್ರೀ ಆಗಮಕೀರ್ತಿ ಭಟ್ಟಾರಕ ಮಹಾಸ್ವಾಮಿಗಳು – ದಿಗಂಬರ ಜೈನಮಠ, ಶ್ರವಣಬೆಳಗೊಳ.
- ಶ್ರೀ ವೀರಭದ್ರ ಚನ್ನಮಲ್ಲ ಮಹಾಸ್ವಾಮಿಗಳು – ನಿಡುಮಾಮಡಿಮಠ, ಬೆಂಗಳೂರು.
- ಆನಂದ ಬಿಕ್ಕು – ಮಹಾಬೋಧಿ ಸೊಸೈಟಿ, ಬೆಂಗಳೂರು.
- ಆರ್ಚಬಿಷಪ್ ಡಾ. ಪೀಟರ್ ಮಚಾಡೋ – ಕ್ಯಾಥೋಲಿಕ್ ಚರ್ಚ್, ಬೆಂಗಳೂರು.
- ಹಜರತ್ ಹಫೀಜ್ ಡಾ. ಸೈಯದ್ ಮೊಹಮ್ಮದ್ ಅಲಿ ಅಲ್ ಹುಸೈನ್ – ದರ್ಗಾ ಹಜರತ್ ಖ್ವಾಜಾ ಬಂದೆನವಾಜ್, ಕಲಬುರ್ಗಿ.
