ಬೆಂಗಳೂರು: ರಾಜ್ಯದ ಸರ್ಕಾರಿ ಪದವಿ ಪೂರ್ವ ಕಾಲೇಜುಗಳ ವಿದ್ಯಾರ್ಥಿಗಳಿಗೆ ಸರ್ಕಾರ ಭರ್ಜರಿ ಕೊಡುಗೆಯೊಂದನ್ನು ನೀಡಿದೆ. ಇನ್ಮುಂದೆ ನಿಗದಿತ ಸಮಯ ಮುಗಿದ (Good News) ನಂತರ ಕಾಲೇಜು ಸೇರುವ ವಿದ್ಯಾರ್ಥಿಗಳಿಗೆ ವಿಧಿಸಲಾಗುತ್ತಿದ್ದ ‘ವಿಳಂಬ ದಾಖಲಾತಿ ದಂಡ ಶುಲ್ಕ’ವನ್ನು ಅಧಿಕೃತವಾಗಿ ರದ್ದುಗೊಳಿಸಲಾಗಿದೆ. ಈ ಹಿಂದಿನ ಕಠಿಣ ನಿಯಮವನ್ನು ವಾಪಸ್ ಪಡೆದಿರುವ ಸರ್ಕಾರ, ಪ್ರಸಕ್ತ 2026-27ನೇ ಶೈಕ್ಷಣಿಕ ವರ್ಷದಿಂದಲೇ ಜಾರಿಗೆ ಬರುವಂತೆ ಈ ವಿನಾಯಿತಿ ಘೋಷಿಸಿದೆ.
ಏನಿದೆ ಹೊಸ ಆದೇಶದಲ್ಲಿ?
ಹೊಸ ಆದೇಶದ ಅನ್ವಯ, ಸರ್ಕಾರಿ ಪಿಯು ಕಾಲೇಜುಗಳಲ್ಲಿ ಪ್ರಥಮ ಹಾಗೂ ದ್ವಿತೀಯ ಪಿಯುಸಿಗೆ ತಡವಾಗಿ ಪ್ರವೇಶ ಪಡೆಯುವ ವಿದ್ಯಾರ್ಥಿಗಳಿಗೆ ಯಾವುದೇ ದಂಡ ಇರುವುದಿಲ್ಲ. ಈ ಮುಂಚೆ ಇದ್ದ ನಿಯಮಗಳ ಪ್ರಕಾರ, ನಿಗದಿತ ಅವಧಿ ಮುಗಿದ 10 ದಿನಗಳ ಒಳಗೆ ದಾಖಲಾತಿ ಪಡೆದರೆ ₹670 ಲೇಟ್ ಫೀಸ್ ಹಾಗೂ 20 ದಿನಗಳ ವರೆಗೆ ತಡವಾದರೆ ಬರೋಬ್ಬರಿ ₹2,220 ವಿಶೇಷ ದಂಡ ಶುಲ್ಕವನ್ನು ವಸೂಲಿ ಮಾಡಲಾಗುತ್ತಿತ್ತು. ಈಗ ಈ ಎರಡೂ ರೀತಿಯ ಕಡ್ಡಾಯ ಶುಲ್ಕಗಳಿಂದ ವಿದ್ಯಾರ್ಥಿಗಳಿಗೆ ಸಂಪೂರ್ಣ ಮುಕ್ತಿ ನೀಡಲಾಗಿದೆ.
ರಾಜ್ಯದ ಸರ್ಕಾರಿ ಪದವಿ ಪೂರ್ವ ಕಾಲೇಜುಗಳಿಗೆ ವಿಳಂಬವಾಗಿ ದಾಖಲಾಗುತ್ತಿದ್ದ ವಿದ್ಯಾರ್ಥಿಗಳಿಗೆ ʻವಿಳಂಬ ದಾಖಲಾತಿ ದಂಡ ಶುಲ್ಕʼ ವಿಧಿಸುವುದಕ್ಕೆ ಸಂಬಂಧಿಸಿದಂತೆ ಈ ಹಿಂದೆ ಹೊರಡಿಸಿದ್ದ ಆದೇಶವನ್ನು ರಾಜ್ಯ ಸರ್ಕಾರ ಹಿಂಪಡೆದಿದೆ. ಈ ಶೈಕ್ಷಣಿಕ (2026-27) ಸಾಲಿನಿಂದ ರಾಜ್ಯದ ಸರ್ಕಾರಿ ಪದವಿ ಪೂರ್ವ ಕಾಲೇಜುಗಳಲ್ಲಿ ಪ್ರಥಮ ಹಾಗೂ ದ್ವಿತೀಯ… pic.twitter.com/LvodO9WULq
— School Education & Literacy Department Karnataka (@ShalaShikshana) July 6, 2026
ವಿದ್ಯಾರ್ಥಿಗಳಿಗೆ ದೊಡ್ಡ ರಿಲೀಫ್
ಬಡತನ ಹಾಗೂ ವೈಯಕ್ತಿಕ ಅಡಚಣೆಗಳಿಂದಾಗಿ ಗ್ರಾಮೀಣ ಭಾಗದ ಶೇಖಡಾವಾರು ವಿದ್ಯಾರ್ಥಿಗಳಿಗೆ ಸಮಯಕ್ಕೆ ಸರಿಯಾಗಿ ಅಡ್ಮಿಷನ್ ಪಡೆಯಲು ಸಾಧ್ಯವಾಗುತ್ತಿರಲಿಲ್ಲ. ಅಂತಹ ಸಂದರ್ಭಗಳಲ್ಲಿ ಸಾವಿರಾರು ರೂಪಾಯಿ ದಂಡ ಕಟ್ಟುವುದು ಬಡ ಪೋಷಕರಿಗೆ ಆರ್ಥಿಕ ಹೊರೆಯಾಗಿ ಪರಿಣಮಿಸುತ್ತಿತ್ತು. ಸರ್ಕಾರದ ಈ ಮಹತ್ವದ ತೀರ್ಮಾನದಿಂದಾಗಿ ಸದ್ಯ ಸಾವಿರಾರು ವಿದ್ಯಾರ್ಥಿಗಳಿಗೆ ಯಾವುದೇ ಆರ್ಥಿಕ ಆತಂಕವಿಲ್ಲದೆ ಉನ್ನತ ಶಿಕ್ಷಣ ಮುಂದುವರಿಸಲು ಅನುಕೂಲವಾಗಲಿದೆ.
