ಟೆಹರಾನ್: ಇರಾನ್ನ (Iran) ಪರಮೋಚ್ಚ ನಾಯಕರಾಗಿದ್ದ ಆಯತೊಲ್ಲಾ ಅಲಿ ಖಮೇನಿ ಅವರ ವಾರವಿಡೀ ನಡೆಯಲಿರುವ ಅಂತ್ಯಕ್ರಿಯೆಯ ವಿಧಿವಿಧಾನಗಳನ್ನು ಇರಾನ್ ಸರ್ಕಾರವು ತನ್ನ ರಾಜಕೀಯ ಶಕ್ತಿ ಪ್ರದರ್ಶನ ಹಾಗೂ ಧಾರ್ಮಿಕ ಸಂದೇಶ ರವಾನಿಸುವ ಜಾಗತಿಕ ವೇದಿಕೆಯನ್ನಾಗಿ ಬಳಸಿಕೊಳ್ಳುತ್ತಿದೆ. ಕಳೆದ ಫೆಬ್ರುವರಿ 28ರಂದು ಅಮೆರಿಕ ಮತ್ತು ಇಸ್ರೇಲ್ ನಡೆಸಿದ್ದ ಜಂಟಿ ವೈಮಾನಿಕ ದಾಳಿಯಲ್ಲಿ ಖಮೇನಿ ಮೃತಪಟ್ಟಿದ್ದರು. ಈ ದುರಂತ ಸಂಭವಿಸಿ ದೀರ್ಘ ಅವಧಿಯ ನಂತರ ಅತ್ಯಂತ ವ್ಯವಸ್ಥಿತವಾಗಿ ಆಯೋಜಿಸಲಾಗಿರುವ ಈ ಅಂತಿಮಯಾತ್ರೆಯು ಇಡೀ ವಿಶ್ವದ ಗಮನ ಸೆಳೆದಿದೆ. ಅಮೆರಿಕ-ಇಸ್ರೇಲ್ ವಿರುದ್ಧದ ಮಿಲಿಟರಿ ಸಂಘರ್ಷದ ಬೆನ್ನಲ್ಲೇ ಇರಾನ್ ಈಗ ರಾಜತಾಂತ್ರಿಕವಾಗಿಯೂ ಚಾಣಕ್ಷ ಹೆಜ್ಜೆಯಿಟ್ಟಿದೆ.
70ಕ್ಕೂ ಅಧಿಕ ರಾಷ್ಟ್ರಗಳು ಹಾಗೂ ಉಗ್ರ ಸಂಘಟನೆಗಳ ಭಾಗಿ: ಇರಾನ್ ಸರ್ಕಾರದ ಅಧಿಕೃತ ಪ್ರಕಟಣೆಯ ಪ್ರಕಾರ, ಖಮೇನಿ ಅವರಿಗೆ ಅಂತಿಮ ಗೌರವ ಸಲ್ಲಿಸಲು ಭಾರತ, ಪಾಕಿಸ್ತಾನ ಮತ್ತು ಸೌದಿ ಅರೇಬಿಯಾ ಸೇರಿದಂತೆ ಜಗತ್ತಿನ 70ಕ್ಕೂ ಹೆಚ್ಚು ದೇಶಗಳ ಉನ್ನತ ಮಟ್ಟದ ರಾಜತಾಂತ್ರಿಕ ಪ್ರತಿನಿಧಿಗಳು ಆಗಮಿಸಿದ್ದಾರೆ. ಇವರೊಂದಿಗೆ ಇರಾನ್ ಬೆಂಬಲಿತ ಸಶಸ್ತ್ರ ಗುಂಪುಗಳಾದ ಲೆಬನಾನ್ನ ಹಿಜ್ಬುಲ್ಲಾ, ಪ್ಯಾಲೆಸ್ಟೀನ್ನ ಹಮಾಸ್, ಇಸ್ಲಾಮಿಕ್ ಜಿಹಾದ್ ಹಾಗೂ ಯೆಮನ್ನ ಹೌತಿ ಬಂಡುಕೋರರ ಪ್ರಮುಖ ನಾಯಕರು ಪಾಲ್ಗೊಂಡಿದ್ದಾರೆ. 1979ರ ಇಸ್ಲಾಮಿಕ್ ಕ್ರಾಂತಿಯ ನಂತರದ ಒಗ್ಗಟ್ಟನ್ನು ತನ್ನ ಬೆಂಬಲಿಗರಲ್ಲಿ ಮರುಸ್ಥಾಪಿಸಲು ಇರಾನ್ ಈ ಅವಕಾಶವನ್ನು ಬಳಸಿಕೊಳ್ಳುತ್ತಿದ್ದು, ಟೆಹರಾನ್ನಿಂದ ಆರಂಭವಾಗಿರುವ ಮೆರವಣಿಗೆಯು ಶಿಯಾ ಇಸ್ಲಾಂ ಧರ್ಮದ ಬಲಿಷ್ಠ ಸಂಕೇತಗಳನ್ನು ಪ್ರದರ್ಶಿಸುತ್ತಿದೆ.
ಪ್ರತೀಕಾರದ ಕೆಂಪು ಧ್ವಜ ಮತ್ತು ಮುಷ್ಟಿ ಬಿಗಿದ ಚಿತ್ರ: 1989ರಿಂದ ಇರಾನ್ ಅನ್ನು ಮುನ್ನಡೆಸಿದ್ದ ಖಮೇನಿ ಅವರ ಸಾವನ್ನು ಇರಾನ್ ‘ಹುತಾತ್ಮತೆ’ ಎಂದು ಕರೆದಿದೆ. ದೇಶಾದ್ಯಂತ ಧರ್ಮಕ್ಕಾಗಿ ಮತ್ತೆ ಎದ್ದು ನಿಲ್ಲುವಂತೆ ಪ್ರೇರೇಪಿಸುವ ಕುರಾನ್ ಶ್ಲೋಕಗಳ ಬ್ಯಾನರ್ಗಳನ್ನು ಹಾಕಲಾಗಿದೆ. ಇಡೀ ಕಾರ್ಯಕ್ರಮದಲ್ಲಿ ಕಪ್ಪು ಮತ್ತು ಕೆಂಪು ಹಿನ್ನೆಲೆಯಲ್ಲಿ ಮೂಡಿಬಂದಿರುವ, ಖಮೇನಿ ಅವರು ಮುಷ್ಟಿ ಬಿಗಿದಿರುವ ಚಿತ್ರಗಳು ರಾರಾಜಿಸುತ್ತಿವೆ. 1981ರ ಬಾಂಬ್ ದಾಳಿಯಲ್ಲಿ ಖಮೇನಿ ಅವರ ಬಲಗೈ ನಿಷ್ಕ್ರಿಯವಾಗಿದ್ದರೂ, ಅವರು ಕೊನೆಯುಸಿರೆಳೆಯುವ ಮುನ್ನ ತಮ್ಮ ಮತ್ತೊಂದು ಕೈಯಲ್ಲಿ ಮುಷ್ಟಿ ಬಿಗಿದಿದ್ದರು ಎಂದು ಅವರ ಉತ್ತರಾಧಿಕಾರಿ ಹಾಗೂ ನೂತನ ಪರಮೋಚ್ಚ ನಾಯಕ ಮೊಜ್ತಬಾ ಖಮೇನಿ ನೀಡಿರುವ ಸಂದೇಶವು ಇರಾನ್ ಜನರಲ್ಲಿ ಪ್ರತೀಕಾರದ ಕಿಚ್ಚು ಹಚ್ಚಿದೆ. ಇಲ್ಲಿ ಕಪ್ಪು ಬಣ್ಣ ಶೋಕವನ್ನು ಸೂಚಿಸಿದರೆ, ಕೆಂಪು ಬಣ್ಣವು ಹಗೆತನ ತೀರಿಸಿಕೊಳ್ಳುವ ಸಂಕೇತವಾಗಿದೆ. ಇದಕ್ಕಾಗಿಯೇ ಟೆಹರಾನ್ನ ಗ್ರ್ಯಾಂಡ್ ಮೊಸಲ್ಲಾ ಮಸೀದಿಯ ಮೇಲೆ ‘ಓ ಹುಸೇನ್ ಅವರ ಪ್ರತೀಕಾರ ತೀರಿಸಿಕೊಳ್ಳುವವರೇ’ ಎಂಬ ಕೆಂಪು ಧ್ವಜ ಹಾರಿಸಿ, ಅಮೆರಿಕ-ಇಸ್ರೇಲ್ ವಿರುದ್ಧದ ಹೋರಾಟವನ್ನು ಧಾರ್ಮಿಕ ಕರ್ತವ್ಯವೆಂದು ಬಿಂಬಿಸಲಾಗುತ್ತಿದೆ.
ಶಿಯಾ ಜಗತ್ತಿನ ನಾಯಕತ್ವ ಸಾಬೀತುಪಡಿಸಲು ದರ್ಗಾದಲ್ಲಿ ಅಂತ್ಯಕ್ರಿಯೆ: ಖಮೇನಿ ಅವರ ಪಾರ್ಥಿವ ಶರೀರವನ್ನು ಕೊಂಡೊಯ್ಯುವ ಮಾರ್ಗವನ್ನು ಇರಾನ್ ಅತ್ಯಂತ ರಾಜತಾಂತ್ರಿಕವಾಗಿ ರೂಪಿಸಿದೆ. ಇಸ್ಲಾಮಿಕ್ ಕ್ರಾಂತಿಯ ಕೇಂದ್ರಸ್ಥಾನವಾದ ಕೋಮ್ ನಗರದಿಂದ ಆರಂಭವಾಗುವ ಈ ಯಾತ್ರೆ, ಇರಾಕ್ನ ಪ್ರಮುಖ ಶಿಯಾ ಧಾರ್ಮಿಕ ಕೇಂದ್ರಗಳಾದ ನಜಾಫ್ ಮತ್ತು ಕರ್ಬಲಾ ಮೂಲಕ ಸಾಗಿ, ಅಂತಿಮವಾಗಿ ಇರಾನ್ನ ಮಶಾದ್ನಲ್ಲಿರುವ ಇಮಾಮ್ ರೆಜಾ ಅವರ ಪವಿತ್ರ ದರ್ಗಾದಲ್ಲಿ ಅಂತ್ಯಗೊಳ್ಳಲಿದೆ. ಇಡೀ ವಿಶ್ವದ ಶಿಯಾ ಮುಸ್ಲಿಮರ ಕೇಂದ್ರವಾಗಿರುವ ನಜಾಫ್ ಅನ್ನು ಬಳಸಿಕೊಳ್ಳುವ ಮೂಲಕ ಇರಾನ್ ತಾನು ಇಡೀ ಮಧ್ಯಪ್ರಾಚ್ಯದ ಶಿಯಾ ಜಗತ್ತಿನ ಮುಂಚೂಣಿ ನಾಯಕ ಎಂಬುದನ್ನು ಸಾಬೀತುಪಡಿಸಲು ಹೊರಟಿದೆ. ಇದೇ ವೇಳೆ ಇರಾನ್ ಜೊತೆ ಸಂಧಾನದ ಮಾತುಕತೆಗೆ ಬಂದಿರುವ ಸೌದಿ ಅರೇಬಿಯಾದ ನಿಯೋಗದ ಸಮ್ಮುಖದಲ್ಲೇ ಇಸ್ಲಾಮಿಕ್ ಇತಿಹಾಸದ ಪ್ರಸಿದ್ಧ ಬದ್ರ್ ಯುದ್ಧವನ್ನು ಉಲ್ಲೇಖಿಸುವ ಕುರಾನ್ ಶ್ಲೋಕವನ್ನು ಪಠಿಸಿರುವುದು ರಾಜಕೀಯ ವಿಶ್ಲೇಷಕರಲ್ಲಿ ತೀವ್ರ ಚರ್ಚೆ ಹುಟ್ಟುಹಾಕಿದ್ದು, ಪಶ್ಚಿಮ ಏಷ್ಯಾದ ರಾಜಕಾರಣದಲ್ಲಿ ಹೊಸ ಸಂಚಲನ ಸೃಷ್ಟಿಸಿದೆ.
ಇದನ್ನೂ ಓದಿ: ಪಹಲ್ಗಾಮ್ ಪ್ರವಾಸಿಗರ ಹತ್ಯಾಕಾಂಡ: ಲಷ್ಕರ್ ಹಫೀಜ್ ಸಯೀದ್ ವಿರುದ್ಧ ಎನ್ಐಎ ದೋಷಾರೋಪ ಪಟ್ಟಿ ಸಲ್ಲಿಕೆ!
