ಚೆನ್ನೈ: ಇತ್ತೀಚೆಗಷ್ಟೇ ತಮಿಳುನಾಡಿನ ಮುಖ್ಯಮಂತ್ರಿಯಾಗಿ ಅಧಿಕಾರ ವಹಿಸಿಕೊಂಡಿರುವ ನಟ ಜೋಸೆಫ್ ವಿಜಯ್ (CM Vijay) ಅವರ ಅಭಿಮಾನಿಗಳಿಗೆ ಅವರ ಹುಟ್ಟುಹಬ್ಬದ ಮುನ್ನವೇ ಚಿತ್ರಮಂದಿರಗಳಲ್ಲಿ ಸಂಭ್ರಮಿಸಲು ದೊಡ್ಡ ಅವಕಾಶವೊಂದು ಸಿಕ್ಕಿದೆ. ಸಿಎಂ ವಿಜಯ್ ಅವರ ಕೊನೆಯ ಚಿತ್ರ ಎನ್ನಲಾದ ‘ಜನ ನಾಯಗನ್’ ಸಿನಿಮಾದ ಸೆನ್ಸಾರ್ ಮಂಡಳಿ (CBFC) ಪ್ರಮಾಣಪತ್ರದ ಗೊಂದಲದಿಂದಾಗಿ ಬಿಡುಗಡೆ ತಡವಾಗುತ್ತಿರುವ ಬೆನ್ನಲ್ಲೇ, ಅವರ ವೃತ್ತಿಜೀವನದ 2017ರ ಬ್ಲಾಕ್ಬಸ್ಟರ್ ಸಿನಿಮಾ ‘ಮೆರ್ಸಲ್’ (Mersal) ಜೂನ್ 19 ರಂದು ಮತ್ತೆ ಚಿತ್ರಮಂದಿರಗಳಿಗೆ ಲಗ್ಗೆ ಇಡಲು ಸಜ್ಜಾಗಿದೆ. ಜೂನ್ 22 ರಂದು ಬರಲಿರುವ ವಿಜಯ್ ಅವರ ಜನ್ಮದಿನದ ಆಚರಣೆಯ ಭಾಗವಾಗಿ ಈ ವಿಶೇಷ ಮರು-ಬಿಡುಗಡೆಯನ್ನು ಆಯೋಜಿಸಲಾಗಿದ್ದು, ಸದ್ಯಕ್ಕೆ ಚೆನ್ನೈ ಮತ್ತು ಚೆಂಗಲ್ಪಟ್ಟುವಿನ ಆಯ್ದ ಚಿತ್ರಮಂದಿರಗಳಲ್ಲಿ ಮಾತ್ರ ಈ ಸಿನಿಮಾ ಪ್ರದರ್ಶನಗೊಳ್ಳಲಿದೆ.
ಅಟ್ಲಿ ನಿರ್ದೇಶನದ ‘ಮೆರ್ಸಲ್’
ಖ್ಯಾತ ನಿರ್ದೇಶಕ ಅಟ್ಲಿ ನಿರ್ದೇಶನದ ‘ಮೆರ್ಸಲ್’ ಚಿತ್ರದಲ್ಲಿ ವಿಜಯ್ ಅವರು ತಂದೆ ಮತ್ತು ಇಬ್ಬರು ಮಕ್ಕಳಾಗಿ ತ್ರಿಪಾತ್ರದಲ್ಲಿ ಅಬ್ಬರಿಸಿದ್ದರು. ಕೇವಲ ಐದು ರೂಪಾಯಿ ಮಾತ್ರ ಫೀಸ್ ಪಡೆದು ಬಡವರಿಗೆ ಚಿಕಿತ್ಸೆ ನೀಡುವ ಸಹೃದಯಿ ವೈದ್ಯ ಮಾರನ್, ಮತ್ತೊಂದೆಡೆ ವೈದ್ಯಕೀಯ ರಂಗದಲ್ಲಿ ನಡೆಯುವ ಭರಪೂರ ಭ್ರಷ್ಟಾಚಾರ ಮತ್ತು ವಂಚನೆಗಳನ್ನು ಜಗತ್ತಿನೆದುರು ಬಯಲಿಗೆಳೆಯಲು ಸೀಕ್ರೆಟ್ ಮ್ಯಾಜಿಶಿಯನ್ ಆಗಿ ಹೋರಾಡುವ ಕಥಾಹಂದರವನ್ನು ಈ ಸಿನಿಮಾ ಹೊಂದಿತ್ತು. ಸಮಂತಾ ರುತ್ ಪ್ರಭು, ಕಾಜಲ್ ಅಗರ್ವಾಲ್, ನಿತ್ಯಾ ಮೆನನ್, ಎಸ್.ಜೆ. ಸೂರ್ಯ, ವಡಿವೇಲು ಮತ್ತು ಸತ್ಯರಾಜ್ ಅವರಂತಹ ಘಟಾನುಘಟಿ ತಾರಾಗಣ ಹೊಂದಿದ್ದ ಈ ಚಿತ್ರಕ್ಕೆ ಆಸ್ಕರ್ ವಿಜೇತ ಎ.ಆರ್. ರೆಹಮಾನ್ ಸಂಗೀತ ನೀಡಿದ್ದರು. ತೇನಾಂಡಲ್ ಸ್ಟುಡಿಯೋ ಲಿಮಿಟೆಡ್ ಬ್ಯಾನರ್ನ 100ನೇ ಸಿನಿಮಾ ಆಗಿದ್ದ ಮೆರ್ಸಲ್, ಜಾಗತಿಕ ಬಾಕ್ಸ್ ಆಫೀಸ್ನಲ್ಲಿ ಬರೋಬ್ಬರಿ 200 ಕೋಟಿ ರೂಪಾಯಿ ಗಳಿಸಿ ಭಾರಿ ಯಶಸ್ಸು ಕಂಡಿತ್ತಾದರೂ, ಮ್ಯಾಜಿಶಿಯನ್ ರಮನ್ ಶರ್ಮಾ ಅವರು ಚಿತ್ರತಂಡದ ವಿರುದ್ಧ ನೈತಿಕತೆಯ ಪ್ರಶ್ನೆ ಎತ್ತಿ ಟೀಕಿಸಿದ್ದರಿಂದ ಸಣ್ಣ ವಿವಾದಕ್ಕೂ ಸಿಲುಕಿತ್ತು. ಇನ್ನು ಚೀನಾದಲ್ಲಿ ಬಿಡುಗಡೆಯಾದ ಮೊದಲ ತಮಿಳು ಸಿನಿಮಾ ಎಂಬ ಇತಿಹಾಸವನ್ನೂ ಸೃಷ್ಟಿಸಿತ್ತು.
ಪ್ರಸ್ತುತ ತಮಿಳುನಾಡು ಮುಖ್ಯಮಂತ್ರಿಯಾದ ಬಳಿಕ ವಿಜಯ್ ಅವರು ಸಂಪೂರ್ಣವಾಗಿ ಸಾರ್ವಜನಿಕ ಸೇವೆ ಮತ್ತು ರಾಜ್ಯದ ಆಡಳಿತದಲ್ಲಿ ತೊಡಗಿಸಿಕೊಂಡಿದ್ದಾರೆ. ಹೀಗಾಗಿ ನಿರ್ದೇಶಕ ಹೆಚ್. ವಿನೋತ್ ಅವರ ಸಾರಥ್ಯದಲ್ಲಿ ಮೂಡಿಬರುತ್ತಿರುವ ‘ಜನ ನಾಯಗನ್’ ಚಿತ್ರವೇ ಅವರ ಕೊನೆಯ ಸಿನಿಮಾವಾಗಲಿದೆ ಎಂದು ಹೇಳಲಾಗುತ್ತಿದೆ. ಆದರೆ ಈ ಚಿತ್ರಕ್ಕೆ ಸೆನ್ಸಾರ್ ಮಂಡಳಿಯಿಂದ ಇನ್ನು ಕ್ಲಿಯರೆನ್ಸ್ ಸಿಗದ ಕಾರಣ ಚಿತ್ರತಂಡ ಬಿಡುಗಡೆಯ ದಿನಾಂಕವನ್ನು ಅಧಿಕೃತವಾಗಿ ಪ್ರಕಟಿಸಿಲ್ಲ. ಈ ಗೊಂದಲದ ನಡುವೆ ಥಿಯೇಟರ್ಗಳಲ್ಲಿ ತಮ್ಮ ನೆಚ್ಚಿನ ನಟನ ಹುಟ್ಟುಹಬ್ಬವನ್ನು ಹಬ್ಬದಂತೆ ಆಚರಿಸಲು ಕಾಯುತ್ತಿದ್ದ ಅಭಿಮಾನಿಗಳಿಗೆ ‘ಮೆರ್ಸಲ್’ ರೀ-ರಿಲೀಸ್ ಸುದ್ದಿ ಭಾರಿ ಉತ್ಸಾಹ ತಂದಿದೆ.
ಇದನ್ನೂ ಓದಿ: ಶುಭಾ ಪೂಂಜಾ ಡಿವೋರ್ಸ್ ಕೇಸ್, ಮೌನ ಮುರಿದು ಸಮಯ ಕೇಳಿದ ನಟಿ
