ಬೆಂಗಳೂರು: ಮಾಜಿ ಪ್ರಧಾನಿ ಹಾಗೂ ಜೆಡಿಎಸ್ ವರಿಷ್ಠ ಹೆಚ್.ಡಿ. ದೇವೇಗೌಡ (HD Devegowda) ಅವರಿಗೆ ಎನ್ಡಿಎ ಮೈತ್ರಿಕೂಟದಿಂದ ರಾಜ್ಯಸಭಾ ಟಿಕೆಟ್ ನಿರಾಕರಿಸಿರುವುದು ಈಗ ರಾಜ್ಯ ರಾಜಕಾರಣದಲ್ಲಿ ಭಾರಿ ಬಿರುಗಾಳಿ ಎಬ್ಬಿಸಿದೆ. ಈ ಬೆಳವಣಿಗೆಯನ್ನು ಪ್ರಮುಖ ಅಸ್ತ್ರವಾಗಿ ಬಳಸಿಕೊಂಡಿರುವ ಕಾಂಗ್ರೆಸ್ ನಾಯಕರು, ಬಿಜೆಪಿ ಮತ್ತು ಜೆಡಿಎಸ್ ವಿರುದ್ಧ ಜಂಟಿಯಾಗಿ ವಾಗ್ದಾಳಿ ನಡೆಸಿದ್ದಾರೆ.
ಇಡೀ ಕರ್ನಾಟಕಕ್ಕೆ ಮಾಡಿದ ಅಪಮಾನ: ಬಿ.ಕೆ. ಹರಿಪ್ರಸಾದ್ ಆಕ್ರೋಶ
ದೇವೇಗೌಡರಿಗೆ ಟಿಕೆಟ್ ತಪ್ಪಿಸಿರುವುದು ಕೇವಲ ಜೆಡಿಎಸ್ ಪಕ್ಷಕ್ಕಷ್ಟೇ ಅಲ್ಲ, ಇಡೀ ಕರ್ನಾಟಕದ ಜನತೆಗೆ ಬಿಜೆಪಿ ಮಾಡಿದ ಬಹುದೊಡ್ಡ ಅಪಮಾನ ಎಂದು ಕೆಪಿಸಿಸಿ ಅಧ್ಯಕ್ಷ ಬಿ.ಕೆ. ಹರಿಪ್ರಸಾದ್ ಕಿಡಿಕಾರಿದ್ದಾರೆ. ಬೆಂಗಳೂರಿನಲ್ಲಿ ಮಾತನಾಡಿದ ಅವರು, ಸಂಸತ್ತಿನಲ್ಲಿ ತನ್ನ ಎಲ್ಲಾ ಪ್ರಮುಖ ಮಸೂದೆಗಳಿಗೆ ಜೆಡಿಎಸ್ ಮತ್ತು ದೇವೇಗೌಡರ ಬೆಂಬಲ ಪಡೆದುಕೊಂಡಿದ್ದ ಬಿಜೆಪಿ, ಈಗ ಅವರಿಗೆ ಟಿಕೆಟ್ ನೀಡದೆ ವಂಚಿಸಿದೆ. ಈ ನಯವಂಚಕತನಕ್ಕೆ ಮುಂದಿನ ದಿನಗಳಲ್ಲಿ ರಾಜ್ಯದ ಜನತೆ ತಕ್ಕ ಶಾಸ್ತಿ ಮಾಡಲಿದ್ದಾರೆ ಎಂದು ಎಚ್ಚರಿಸಿದರು. 2020ರಲ್ಲಿ ರಾಜಕೀಯ ಭಿನ್ನಾಭಿಪ್ರಾಯಗಳಿದ್ದರೂ ಕಾಂಗ್ರೆಸ್ ನಾಯಕಿ ಸೋನಿಯಾ ಗಾಂಧಿ ಅವರು ದೇವೇಗೌಡರನ್ನು ಗೌರವಿಸಿ ಬೆಂಬಲ ನೀಡಿದ್ದನ್ನು ಹರಿಪ್ರಸಾದ್ ನೆನಪಿಸಿದ್ದಾರೆ.
ಜೆಡಿಎಸ್ಗೆ ದ್ರೋಹ ಎಂದ ಸುರ್ಜೇವಾಲಾ; ಅಧಿಕಾರಕ್ಕಾಗಿ ಸ್ವಾಭಿಮಾನ ಬಲಿ ಕೊಟ್ಟರೇ ಕುಮಾರಸ್ವಾಮಿ?
ತಡರಾತ್ರಿ ನಡೆದ ಹಠಾತ್ ರಾಜಕೀಯ ಬೆಳವಣಿಗೆಯಲ್ಲಿ ದೇವೇಗೌಡರ ಬದಲಿಗೆ ಪ್ರೊ. ಎಂ. ನಾಗರಾಜ ಅವರಿಗೆ ಬಿಜೆಪಿ ಮಣೆ ಹಾಕಿರುವುದನ್ನು ಕಾಂಗ್ರೆಸ್ ಉಸ್ತುವಾರಿ ರಣದೀಪ್ ಸಿಂಗ್ ಸುರ್ಜೇವಾಲಾ ತೀವ್ರವಾಗಿ ಖಂಡಿಸಿದ್ದಾರೆ. ಮಾಜಿ ಪ್ರಧಾನಿಗಳನ್ನೇ ಕಡೆಗಣಿಸುವ ಮೂಲಕ ಬಿಜೆಪಿ ಜೆಡಿಎಸ್ಗೆ ದ್ರೋಹ ಬಗೆದಿದೆ ಎಂದು ಅವರು ಟೀಕಿಸಿದ್ದಾರೆ.
ಮತ್ತೊಂದೆಡೆ, ಕೇಂದ್ರದಲ್ಲಿ ತಮ್ಮ ಸಚಿವ ಸ್ಥಾನವನ್ನು ಉಳಿಸಿಕೊಳ್ಳುವ ಏಕೈಕ ಸ್ವಾರ್ಥಕ್ಕಾಗಿ ಹೆಚ್.ಡಿ. ಕುಮಾರಸ್ವಾಮಿ ಅವರು ಬಿಜೆಪಿಯ ಇಂತಹ ಸರಣಿ ಅವಮಾನಗಳನ್ನು ಮೌನವಾಗಿ ಸಹಿಸುತ್ತಿರುವುದು ರಾಜಕೀಯ ವಲಯದಲ್ಲಿ ತೀವ್ರ ಚರ್ಚೆಗೆ ಗ್ರಾಸವಾಗಿದೆ. ದೇಶದ ಅತ್ಯುನ್ನತ ಹುದ್ದೆ ನಿಭಾಯಿಸಿದ ಹಿರಿಯ ನಾಯಕರನ್ನು ಮೂಲೆಗುಂಪು ಮಾಡಿದರೂ, ಅದನ್ನು ಒಪ್ಪಿಕೊಂಡು ಜೆಡಿಎಸ್ ಮಂಡಿಯೂರಿ ನಿಂತಿರುವುದು ಅದರ ಶರಣಾಗತಿ ರಾಜಕಾರಣವನ್ನು ತೋರಿಸುತ್ತದೆ ಎಂಬ ಟೀಕೆಗಳು ವ್ಯಕ್ತವಾಗಿವೆ.
ಕಾಂಗ್ರೆಸ್ ನೀಡಿದ್ದ ಗೌರವ ಮತ್ತು ಹಳೇ ಇತಿಹಾಸ
2019ರ ಲೋಕಸಭಾ ಚುನಾವಣೆಯಲ್ಲಿ ದೇವೇಗೌಡರು ತುಮಕೂರು ಕ್ಷೇತ್ರದಲ್ಲಿ ಸೋಲನ್ನನುಭವಿಸಿದ್ದರು. ಆ ಸಂದರ್ಭದಲ್ಲಿ ಕಾಂಗ್ರೆಸ್ ಪಕ್ಷವು ಅವರ ‘ಮಾಜಿ ಪ್ರಧಾನಿ’ ಎಂಬ ಸ್ಥಾನಮಾನಕ್ಕೆ ಸಂಪೂರ್ಣ ಗೌರವ ನೀಡಿ, ಅವರನ್ನು ರಾಜ್ಯಸಭೆಗೆ ಅವಿರೋಧವಾಗಿ ಆಯ್ಕೆ ಮಾಡಲು ಬೆಂಬಲ ನೀಡಿತ್ತು ಎಂದು ಸುರ್ಜೇವಾಲ ನೆನಪಿಸಿದ್ದಾರೆ. ಹಿಂದೆ “ಯಾವುದೇ ಕಾರಣಕ್ಕೂ ಬಿಜೆಪಿಯೊಂದಿಗೆ ಕೈಜೋಡಿಸುವುದಿಲ್ಲ, ಒಂದು ವೇಳೆ ಕುಮಾರಸ್ವಾಮಿ ಹೋದರೆ ಕುಟುಂಬದಿಂದಲೇ ಹೊರಹಾಕುವುದಾಗಿ” ಸಾರಿದ್ದ ದೇವೇಗೌಡರು, 2023ರ ಅಕ್ಟೋಬರ್ನಲ್ಲಿ ಸದ್ದಿಲ್ಲದೆ ಮೈತ್ರಿ ಮಾಡಿಕೊಂಡು ಕೇಂದ್ರ ಸಚಿವ ಸ್ಥಾನ ಗಿಟ್ಟಿಸಿಕೊಂಡಿದ್ದನ್ನು ಕಾಂಗ್ರೆಸ್ ಲೇವಡಿ ಮಾಡಿದೆ.
ಬಿಜೆಪಿಯ ಒಬಿಸಿ ಮತಬ್ಯಾಂಕ್ ಲೆಕ್ಕಾಚಾರ
ರಾಜಕೀಯ ವಿಶ್ಲೇಷಕರ ಪ್ರಕಾರ, ಬಿಜೆಪಿ ಇಲ್ಲಿ ಮೈತ್ರಿ ಧರ್ಮಕ್ಕಿಂತ ತನ್ನ ಸ್ವಂತ ಪಕ್ಷದ ಒಬಿಸಿ (OBC) ಮತಬ್ಯಾಂಕ್ ಬಲಪಡಿಸುವ ತಂತ್ರಕ್ಕೆ ಆದ್ಯತೆ ನೀಡಿದೆ. ಕೆಪಿಎಸ್ಸಿ ಮಾಜಿ ಸದಸ್ಯ ಹಾಗೂ ಹಿಂದುಳಿದ ವರ್ಗದ ಪ್ರಮುಖ ನಾಯಕರಾದ ಪ್ರೊ. ಎಂ. ನಾಗರಾಜ ಅವರಿಗೆ ಟಿಕೆಟ್ ನೀಡುವ ಮೂಲಕ ತಳಮಟ್ಟದ ಕಾರ್ಯಕರ್ತರನ್ನು ಗುರುತಿಸುತ್ತೇವೆ ಎಂಬ ಸಂದೇಶ ರವಾನಿಸಲು ಬಿಜೆಪಿ ಯತ್ನಿಸಿದೆ. ಆದರೆ, ಈ ಪ್ರಕ್ರಿಯೆಯಲ್ಲಿ ದೇವೇಗೌಡರಂತಹ ಮುತ್ಸದ್ದಿ ನಾಯಕರನ್ನು ಕಡೆಗಣಿಸಿರುವುದು ಮೈತ್ರಿಕೂಟದ ಒಳಗಿನ ಆಂತರಿಕ ಭಿನ್ನಮತವನ್ನು ಬೀದಿಗೆ ತಂದಿದೆ.
ಇದನ್ನೂ ಓದಿ: ಡಿಕೆಶಿ ಸಂಪುಟದ ನೂತನ ಸಚಿವರಿಗೆ ಖಾತೆಗಳದ್ದೇ ಚಿಂತೆ; ಎರಡನೇ ಪಟ್ಟಿಗಾಗಿ ಹೈಕಮಾಂಡ್ ಕಸರತ್ತು
