ಮಂಗಳೂರು: ಚಿತ್ರರಂಗದ ಸೂಪರ್ ಸ್ಟಾರ್ ಆಗಿರಲಿ ಅಥವಾ ರಾಜಕೀಯದ ಘಟಾನುಘಟಿ ನಾಯಕರೇ ಇರಲಿ, ವೈಯಕ್ತಿಕ ಜೀವನದಲ್ಲಿ ತೀವ್ರ ಸಂಕಷ್ಟ ಎದುರಾದಾಗ ದೈವ-ದೇವರ ಮೊರೆ ಹೋಗುವುದು ಕರಾವಳಿಯ ಆಚರಣೆಗಳಲ್ಲಿ ಪ್ರಮುಖವಾದದ್ದು. ಮಾಜಿ ಪ್ರಧಾನಿ ಎಚ್.ಡಿ. ದೇವೇಗೌಡ, ಮಾಜಿ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಹಾಗೂ ದಿವಂಗತ ಸುಷ್ಮಾ ಸ್ವರಾಜ್ ಅವರಂತಹ ಪ್ರಮುಖ ನಾಯಕರು ನಡೆದುಕೊಂಡಿರುವ ದಕ್ಷಿಣ ಕನ್ನಡ ಜಿಲ್ಲೆಯ ಬೆಳ್ತಂಗಡಿ ಸಮೀಪದ ‘ಅಳದಂಗಡಿ ಸತ್ಯದೇವತೆ ಕಲ್ಲುರ್ಟಿ ದೈವಸ್ಥಾನ’ (Temple) ಸದ್ಯ ಭಾರಿ ಚರ್ಚೆಗೆ ಗ್ರಾಸವಾಗಿದೆ. ನಟ ದರ್ಶನ್ ಅವರ ಜೀವನದ ಹಳೆಯ ಕಠಿಣ ದಿನಗಳಲ್ಲಿ ಕೈಹಿಡಿದಿದ್ದ ಈ ದೈವದ ಸನ್ನಿಧಿಗೆ, ಪ್ರಸ್ತುತ ಅವರು ಎದುರಿಸುತ್ತಿರುವ ಕೊಲೆ ಪ್ರಕರಣದ ಬಿಕ್ಕಟ್ಟಿನ ಸಮಯದಲ್ಲಿ ಅವರ ಕುಟುಂಬದವರು ಭೇಟಿ ನೀಡದಿರುವುದು ಸಾರ್ವಜನಿಕ ವಲಯದಲ್ಲಿ ತೀವ್ರ ಕುತೂಹಲ ಮೂಡಿಸಿದೆ.
ಈ ದೈವ ಸ್ಥಾನದ ವಿಶೇಷತೆ ಏನು?
ಬೆಳ್ತಂಗಡಿಯಿಂದ ಸುಮಾರು ೧೩ ಕಿಲೋಮೀಟರ್ ದೂರದಲ್ಲಿರುವ ಅಳದಂಗಡಿ ಕಲ್ಲುರ್ಟಿ ದೈವಸ್ಥಾನಕ್ಕೆ ಸುಮಾರು ೮೦೦ ವರ್ಷಗಳ ರೋಚಕ ಇತಿಹಾಸವಿದೆ. ಶ್ರವಣಬೆಳಗೊಳದ ಗೊಮ್ಮಟೇಶ್ವರ ವಿಗ್ರಹ ಕೆತ್ತಿದ ಜಗತ್ಪ್ರಸಿದ್ಧ ಶಿಲ್ಪಿಗಳಾದ ‘ಕಲ್ಕುಡ ಮತ್ತು ಕಲ್ಲುರ್ಟಿ’ ಎಂಬ ಅಣ್ಣ-ತಂಗಿಯ ಕಾರುಣಿಕ ಕಥೆಯೇ ಈ ದೈವದ ಮೂಲವಾಗಿದೆ. ರಾಜರ ವಂಚನೆಗೆ ಒಳಗಾಗಿ ಕೈಕಾಲುಗಳನ್ನು ಕಳೆದುಕೊಂಡು, ನ್ಯಾಯಕ್ಕಾಗಿ ಹೋರಾಡಿ ದೈವಾಂಶ ಸಂಭೂತರಾದ ಶಕ್ತಿಗಳಿವು ಎಂಬ ನಂಬಿಕೆಯಿದೆ. ಕೋರ್ಟ್ ಮೊಕದ್ದಮೆಗಳು, ಕೌಟುಂಬಿಕ ಕಲಹಗಳು, ಕಳ್ಳತನದ ಪ್ರಕರಣಗಳು ಹಾಗೂ ವಿವಾಹ ವಿಳಂಬದಂತಹ ಸಮಸ್ಯೆಗಳಿಗೆ ಇಲ್ಲಿ ತಕ್ಷಣವೇ ನ್ಯಾಯ ಸಿಗುತ್ತದೆ ಎಂಬುದು ಕರಾವಳಿ ಜನರ ಅಚಲವಾದ ವಿಶ್ವಾಸವಾಗಿದೆ. ಈ ದೈವದ ಆರಾಧನೆಯಲ್ಲಿ ‘ಬೆಳ್ಳಿಯ ತಿರಿ’ (ಬೆಳ್ಳಿಯ ಚಾವಟಿ ಅಥವಾ ಸರಪಳಿ) ಸತ್ಯ ಮತ್ತು ಶುದ್ಧತೆಯ ಸಂಕೇತವಾಗಿದ್ದು, ದೈವದ ಪಾತ್ರಿ ಮೈಮೇಲೆ ಆವಾಹನೆಯಾದಾಗ ಇದನ್ನು ಹಿಡಿದು ನರ್ತಿಸುತ್ತಾರೆ. ಕರಾವಳಿಯಲ್ಲಿ ಈ ದೈವದ ಕಾರಣಿಕ ಶಕ್ತಿ ಹೆಚ್ಚಾದಂತೆಲ್ಲಾ ವರ್ಷಕ್ಕೆ ನೂರಾರು ಹರಕೆ ಕೋಲಗಳು ಇಲ್ಲಿ ಜರುಗುತ್ತಿವೆ.
ವಿಜಯಲಕ್ಷ್ಮಿ ಈ ದೇವಸ್ಥಾನಕ್ಕೆ ಯಾಕಿನ್ನೂ ಹೋಗಿಲ್ಲ
ನಟ ದರ್ಶನ್ ಅವರಿಗೂ ಮತ್ತು ಈ ಕಲ್ಲುರ್ಟಿ ದೈವಕ್ಕೂ ಬಿಡಿಸಲಾಗದ ಹಳೆಯ ನಂಟಿದೆ. ೨೦೧೧ ರಲ್ಲಿ ದರ್ಶನ್ ಕೌಟುಂಬಿಕ ಕಲಹದ ಹಿನ್ನೆಲೆಯಲ್ಲಿ ಜೈಲು ಪಾಲಾಗಿದ್ದಾಗ, ಅವರ ಬಿಡುಗಡೆಯ ನಂತರ ತೆರೆಕಂಡ ‘ಸಾರಥಿ’ ಚಿತ್ರವು ಭಾರಿ ಯಶಸ್ಸು ತಂದುಕೊಟ್ಟಿತ್ತು. ಆ ಸಮಯದಲ್ಲಿ ತಮ್ಮ ಕಷ್ಟಗಳನ್ನು ದೂರ ಮಾಡಿದ ಸತ್ಯದೇವತೆಗೆ ಕೃತಜ್ಞತೆ ಸಲ್ಲಿಸಲು ದರ್ಶನ್ ನೇರವಾಗಿ ಅಳದಂಗಡಿಗೆ ಆಗಮಿಸಿ ವಿಶೇಷ ಕೋಲ ಸೇವೆ ಒಪ್ಪಿಸಿದ್ದರು. ಆದರೆ ಪ್ರಸ್ತುತ ಕೊಲೆ ಪ್ರಕರಣದ ತನಿಖೆ ಎದುರಿಸುತ್ತಿರುವ ದರ್ಶನ್ ಪರವಾಗಿ ಅವರ ಕುಟುಂಬಸ್ಥರಾಗಲಿ ಅಥವಾ ಆಪ್ತರಾಗಲಿ ಈ ದೈವಸ್ಥಾನಕ್ಕೆ ಇತ್ತೀಚೆಗೆ ಭೇಟಿ ನೀಡಿಲ್ಲ ಎನ್ನಲಾಗಿದೆ. ದರ್ಶನ್ ಪತ್ನಿ ವಿಜಯಲಕ್ಷ್ಮಿ ಅವರು ಮೈಸೂರಿನ ಚಾಮುಂಡೇಶ್ವರಿ ಮತ್ತು ಕೊಲ್ಲೂರು ಮೂಕಾಂಬಿಕಾ ದೇವಸ್ಥಾನಗಳಿಗೆ ಭೇಟಿ ನೀಡಿ ಪ್ರಾರ್ಥನೆ ಸಲ್ಲಿಸುತ್ತಿದ್ದಾರಾದರೂ, ಹಿಂದೆ ಕಷ್ಟಕಾಲದಲ್ಲಿ ನೆರವಾಗಿದ್ದ ಸತ್ಯದೇವತೆಯ ಸನ್ನಿಧಿಗೆ ಬಾರದಿರುವುದು ಭಕ್ತ ವಲಯದಲ್ಲಿ ಮತ್ತು ಸಾಮಾಜಿಕ ಜಾಲತಾಣಗಳಲ್ಲಿ ತರಾವರಿ ಚರ್ಚೆಗಳನ್ನು ಹುಟ್ಟುಹಾಕಿದೆ.
