ನವದೆಹಲಿ: ಭಾರತೀಯ ಸೇನೆಯ ಮಾಜಿ ಮುಖ್ಯಸ್ಥ ಜನರಲ್ ಮನೋಜ್ ನರವಾಣೆ (MM Naravane) ಅವರು ತಮ್ಮ ಬರವಣಿಗೆಯ ಮೂಲಕ ಸೇನೆಯ ಅಪರೂಪದ ಹಾಗೂ ರೋಚಕ ಕಥೆಗಳನ್ನು ಜನಸಾಮಾನ್ಯರಿಗೆ ಪರಿಚಯಿಸುತ್ತಿದ್ದಾರೆ. ಇತ್ತೀಚೆಗೆ ಅವರು ‘ದಿ ಕ್ಯೂರಿಯಸ್ ಅಂಡ್ ದಿ ಕ್ಲಾಸಿಫೈಡ್: ಅನ್ಅರ್ಥಿಂಗ್ ಮಿಲಿಟರಿ ಮೈಥ್ಸ್ ಅಂಡ್ ಮಿಸ್ಟರೀಸ್’ ಎಂಬ ಪುಸ್ತಕವನ್ನು ಬಿಡುಗಡೆ ಮಾಡಿದ್ದಾರೆ. ಈ ಪುಸ್ತಕದಲ್ಲಿ ಸೇನಾ ಪಡೆಗಳ ಇತಿಹಾಸ, ಸಂಪ್ರದಾಯಗಳು ಮತ್ತು ಅಚ್ಚರಿಯ ಘಟನೆಗಳನ್ನು ಅವರು ಕಥಾ ರೂಪದಲ್ಲಿ ವಿವರಿಸಿದ್ದಾರೆ.
ತಮ್ಮ ಮೊದಲ ಪುಸ್ತಕ ‘ಫೋರ್ ಸ್ಟಾರ್ಸ್ ಆಫ್ ಡೆಸ್ಟಿನಿ’ ಪ್ರಕಟಣೆಗೆ ಮುನ್ನವೇ ವಿವಾದಕ್ಕೆ ಗುರಿಯಾಗಿದ್ದ ಬಗ್ಗೆ ಪ್ರತಿಕ್ರಿಯಿಸಿರುವ ನರವಾಣೆ, ಆ ಪುಸ್ತಕದ ವಿಷಯವನ್ನು ಅನಗತ್ಯವಾಗಿ ಎಳೆತಂದು ವಿವಾದ ಸೃಷ್ಟಿಸಿದ್ದು ಸರಿಯಲ್ಲ ಎಂದು ಅಭಿಪ್ರಾಯಪಟ್ಟಿದ್ದಾರೆ. ಸದ್ಯ ಆ ಅಧ್ಯಾಯ ಮುಗಿದು ಹೋಗಿದೆ ಎಂದು ಅವರು ಸ್ಪಷ್ಟಪಡಿಸಿದ್ದಾರೆ. ಇದೀಗ ಬಿಡುಗಡೆಯಾಗಿರುವ ಹೊಸ ಪುಸ್ತಕವು ಗಂಭೀರ ಶೈಕ್ಷಣಿಕ ವಿಷಯಕ್ಕಿಂತ ಹೆಚ್ಚಾಗಿ ಮನರಂಜನೆಯ ಓದನ್ನು ನೀಡುವ ಗುರಿ ಹೊಂದಿದೆ ಎಂದು ಅವರು ತಿಳಿಸಿದ್ದಾರೆ.
ಈ ಪುಸ್ತಕದಲ್ಲಿ ಸೇನೆಯಲ್ಲಿ ಬಳಕೆಯಲ್ಲಿರುವ ‘ಜೈ ಹಿಂದ್’ ಘೋಷಣೆಯ ಮೂಲದ ಬಗ್ಗೆ ವಿಶೇಷ ಮಾಹಿತಿಯನ್ನು ಹಂಚಿಕೊಂಡಿದ್ದಾರೆ. ‘ಜೈ ಹಿಂದ್’ ಮೊದಲು ಭಾರತೀಯ ವಾಯುಪಡೆಯಲ್ಲಿ ಬಳಕೆಗೆ ಬಂತು, ನಂತರ ಅದನ್ನು ನೌಕಾಪಡೆ ಮತ್ತು ಸೇನೆ ಅಳವಡಿಸಿಕೊಂಡಿತು ಎಂದು ಅವರು ವಿವರಿಸಿದ್ದಾರೆ. ಇದಕ್ಕೂ ಮುನ್ನ ಸೈನ್ಯದಲ್ಲಿ ರೆಜಿಮೆಂಟ್ಗಳಿಗೆ ತಕ್ಕಂತೆ ‘ಸತ್ ಶ್ರೀ ಅಕಾಲ್’ ಅಥವಾ ‘ರಾಮ್ ರಾಮ್’ ನಂತಹ ವಿವಿಧ ಸ್ವಾಗತಗಳು ಬಳಕೆಯಲ್ಲಿದ್ದವು ಎಂದು ಅವರು ನೆನಪಿಸಿಕೊಂಡಿದ್ದಾರೆ. ‘ಜೈ ಹಿಂದ್’ ಘೋಷಣೆಗೆ ಇರುವ ಆಳವಾದ ಐತಿಹಾಸಿಕ ಬೇರುಗಳನ್ನು ತಿಳಿದುಕೊಳ್ಳುವುದು ತಮಗೂ ಒಂದು ಹೊಸ ಅನುಭವವಾಗಿತ್ತು ಎಂದು ಅವರು ಹೇಳಿದ್ದಾರೆ.
ಪುಸ್ತಕದಲ್ಲಿ ಅಸ್ಸಾಂ ರೆಜಿಮೆಂಟ್ನ ಯೋಧ ಬದ್ಲುರಾಮ್ ಅವರ ತ್ಯಾಗದ ಕಥೆ ಕೂಡ ಇದೆ. 1944ರ ಕೊಹಿಮಾ ಯುದ್ಧದಲ್ಲಿ ಬದ್ಲುರಾಮ್ ಹುತಾತ್ಮರಾದರೂ, ಅವರ ಹೆಸರಿನಲ್ಲಿ ಬರುತ್ತಿದ್ದ ಪಡಿತರವು ಉಳಿದ ಸೈನಿಕರ ಜೀವ ಉಳಿಸಲು ಸಹಾಯ ಮಾಡಿತ್ತು. ಈ ಘಟನೆಯೇ ‘ಬದ್ಲುರಾಮ್ ಕಾ ಬದನ್’ ಎಂಬ ಪ್ರಸಿದ್ಧ ಹಾಡಿಗೆ ಸ್ಪೂರ್ತಿಯಾಯಿತು. ಜೊತೆಗೆ, 1971ರ ಯುದ್ಧದಲ್ಲಿ ಪಾಕಿಸ್ತಾನದ ವಶದಲ್ಲಿದ್ದರೂ, ತನ್ನ ತವರು ಸೇನಾ ಘಟಕಕ್ಕೆ ಮರಳಿ ಬಂದ ‘ಪೆಡೋಂಗಿ’ ಎಂಬ ಹೇಸರಗತ್ತೆಯ ಶೌರ್ಯ ಹಾಗೂ ನಿಷ್ಠೆಯ ಕಥೆಯನ್ನೂ ಅವರು ಹಂಚಿಕೊಂಡಿದ್ದಾರೆ. ಪೆಡೋಂಗಿಯು ಮೈನ್ ಫೀಲ್ಡ್ಗಳನ್ನು ದಾಟಿ ಸುರಕ್ಷಿತವಾಗಿ ಮರಳಿದಾಗ, ಅದನ್ನು ಸೇನೆಯಲ್ಲಿ ಗೌರವದಿಂದ ನಿವೃತ್ತಿಗೊಳಿಸಿ 37 ವರ್ಷಗಳ ಕಾಲ ಪ್ರೀತಿಯಿಂದ ನೋಡಿಕೊಳ್ಳಲಾಗಿತ್ತು ಎಂಬುದು ವಿಶೇಷ.
ಇದನ್ನೂ ಓದಿ: ಜೀವ ಉಳಿದರೂ ಕಷ್ಟವಾಗಿದೆ ಬದುಕು, ಇದು ಮೊಜ್ತಬಾ ಖಮೇನಿ ಆರೋಗ್ಯ ಸ್ಥಿತಿ
