ಜಮ್ಮು-ಕಾಶ್ಮೀರ: ಶ್ರೀನಗರದ ಹೈದರ್ ಪೋರಾ ಪ್ರದೇಶದ ಖಾಸಗಿ ಹೋಟೆಲ್ನಲ್ಲಿ ಶುಕ್ರವಾರ ಸಂಭವಿಸಿದ ಲಿಫ್ಟ್ (Lift Mishap) ಅಪಘಾತದಲ್ಲಿ ಬೆಂಗಳೂರಿನಿಂದ ಪ್ರವಾಸಕ್ಕೆ ತೆರಳಿದ್ದ ಆರು ಮಂದಿ ಪ್ರವಾಸಿಗರು ಗಾಯಗೊಂಡಿದ್ದಾರೆ. ಹೋಟೆಲ್ನಲ್ಲಿ ತಂಗಿದ್ದ ವೇಳೆ ಲಿಫ್ಟ್ ತಾಂತ್ರಿಕ ದೋಷದಿಂದಾಗಿ ಹಠಾತ್ತನೆ ಕುಸಿದಿದ್ದು, ಒಳಗಿದ್ದ ಪ್ರವಾಸಿಗರಿಗೆ ಗಾಯಗಳಾಗಿವೆ. ಕೂಡಲೇ ಎಚ್ಚೆತ್ತ ತುರ್ತು ಸೇವಾ ಸಿಬ್ಬಂದಿ, ಗಾಯಾಳುಗಳನ್ನು ಬರ್ಜುಲ್ಲಾದ ಮೂಳೆ ಮತ್ತು ಕೀಲು ಆಸ್ಪತ್ರೆಗೆ ದಾಖಲಿಸಿದ್ದಾರೆ.
ಅದೃಷ್ಟವಶಾತ್ ಪ್ರಾಣಾಪಾಯವಾಗಿಲ್ಲ
ವೈದ್ಯರ ಮಾಹಿತಿಯ ಪ್ರಕಾರ, ಗಾಯಾಳುಗಳ ಕಾಲು ಮತ್ತು ದೇಹದ ಕೆಳಭಾಗಕ್ಕೆ ಪೆಟ್ಟಾಗಿದೆ. ಸದ್ಯ ಎಲ್ಲರೂ ಪ್ರಾಣಾಪಾಯದಿಂದ ಪಾರಾಗಿದ್ದು, ವೈದ್ಯರ ನಿಗಾದಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಗಾಯಗೊಂಡವರನ್ನು ವೆಂಕಟೇಶ್ (65), ಮಂಗಳಾ (54), ಕುಶಾಲಾ (18), ಪಂಕಜಾ (16), ವೆಂಕಟಲಕ್ಷ್ಮಮ್ಮ (60) ಮತ್ತು ಸೌಭಾಗ್ಯ (60) ಎಂದು ಗುರುತಿಸಲಾಗಿದೆ. ಇವರೆಲ್ಲರೂ ಬೆಂಗಳೂರಿನ ನಿವಾಸಿಗಳಾಗಿದ್ದು, ಪ್ರವಾಸಕ್ಕಾಗಿ ಕಾಶ್ಮೀರಕ್ಕೆ ತೆರಳಿದ್ದರು.
ಈ ದುರ್ಘಟನೆಯು ಪ್ರವಾಸೋದ್ಯಮ ವಲಯದಲ್ಲಿನ ಸುರಕ್ಷತಾ ನಿಯಮಗಳ ಬಗ್ಗೆ ಮತ್ತೊಮ್ಮೆ ಗಂಭೀರ ಪ್ರಶ್ನೆಗಳನ್ನು ಹುಟ್ಟುಹಾಕಿದೆ. ಹೋಟೆಲ್ಗಳಲ್ಲಿ ಅಳವಡಿಸಲಾದ ಲಿಫ್ಟ್ ಸೇರಿದಂತೆ ಪ್ರಮುಖ ಉಪಕರಣಗಳ ನಿರ್ವಹಣೆ ಮತ್ತು ಸುರಕ್ಷತಾ ತಪಾಸಣೆ ಅತ್ಯಗತ್ಯ ಎಂಬ ಮಾತುಗಳು ಕೇಳಿಬರುತ್ತಿವೆ. ಆಡಳಿತ ಮಂಡಳಿ ಈ ಅಪಘಾತದ ನಿಖರ ಕಾರಣವನ್ನು ಪತ್ತೆಹಚ್ಚಲು ಪ್ರಾಥಮಿಕ ತನಿಖೆ ಆರಂಭಿಸಿದೆ. ಹೋಟೆಲ್ ಆಡಳಿತದ ನಿರ್ಲಕ್ಷ್ಯ ಇದೆಯೇ ಅಥವಾ ತಾಂತ್ರಿಕ ಲೋಪವೇ ಎಂಬ ಬಗ್ಗೆ ತನಿಖೆ ಮುಂದುವರಿದಿದೆ.
ಇದನ್ನೂ ಓದಿ: ಹೆಂಡತಿ ನೈಟಿ ಧರಿಸಿದ್ದ ಬೆಂಕಿ ಹಚ್ಚಿದ ಗಂಡ, ಸೀಮೆಎಣ್ಣೆ ಸುರಿದು ಹತ್ಯೆಗೆ ಯತ್ನ
