ಮೈಸೂರು: ನಗರದಲ್ಲಿ ಕಳವು ಪ್ರಕರಣಗಳನ್ನು ಭೇದಿಸುವಲ್ಲಿ ಪೊಲೀಸರು ಯಶಸ್ವಿಯಾಗಿದ್ದು, ಚಿನ್ನ, ಬೆಳ್ಳಿ, ವಾಹನ, ನಗದು ಸೇರಿದಂತೆ ಕದ್ದ ವಸ್ತುಗಳನ್ನು (Theft) ಅವುಗಳ ಮಾಲೀಕರಿಗೆ ತಲುಪಿಸಲಾಗಿದೆ ಎಂದು ಪೊಲೀಸ್ ಆಯುಕ್ತೆ ಸೀಮಾ ಲಾಟ್ಕರ್ ತಿಳಿಸಿದ್ದಾರೆ.
2 ಕೋಟಿ 96 ಲಕ್ಷ ಮೌಲ್ಯದ ಚಿನ್ನಾಭರಣ ಕಳವು
ಸುದ್ದಿಗೋಷ್ಠಿಯಲ್ಲಿ ಅವರು, ಸರಸ್ವತಿಪುರಂ, ಕುವೆಂಪುನಗರ, ಲಷ್ಕರ್, ವಿದ್ಯಾರಣ್ಯಪುರಂ, ವಿಜಯನಗರ, ಮೇಟಗಳ್ಳಿ, ಮಂಡಿ ಹಾಗೂ ನರಸಿಂಹರಾಜ ಪೊಲೀಸ್ ಠಾಣೆಗಳ ವ್ಯಾಪ್ತಿಯಲ್ಲಿ ನಡೆದಿದ್ದ ಕಳವು ಪ್ರಕರಣಗಳಲ್ಲಿ ಸುಮಾರು 2 ಕೋಟಿ 96 ಲಕ್ಷ ಮೌಲ್ಯದ ಚಿನ್ನಾಭರಣವನ್ನು ವಶಕ್ಕೆ ಪಡೆಯಲಾಗಿದೆ ಎಂದರು. ಒಂಟಿ ಮನೆಗಳನ್ನು ಗುರಿಯಾಗಿಸಿ ದರೋಡೆ ಮಾಡಿರುವುದು ಹಾಗೂ ಪರಿಚಯಸ್ಥರಂತೆ ನಂಬಿಸಿ ಕಳ್ಳತನ ಮಾಡಿರುವುದು ಪತ್ತೆಯಾಗಿದೆ.
30 ಕೆ.ಜಿ ಗಾಂಜಾ ಸೀಜ್
2026ನೇ ಸಾಲಿನಲ್ಲಿ 30 ಕೆ.ಜಿ ಗಾಂಜಾವನ್ನು ಸೀಜ್ ಮಾಡಲಾಗಿದೆ. 2 ಕೆ.ಜಿ 50 ಗ್ರಾಂ ಚಿನ್ನ, 5 ಕೆ.ಜಿ 312 ಗ್ರಾಂ ಬೆಳ್ಳಿ, 57 ವಾಹನಗಳು, 10 ಲಕ್ಷ ನಗದನ್ನು ವಶಕ್ಕೆ ಪಡೆದು ಮಾಲೀಕರಿಗೆ ತಲುಪಿಸಲಾಗಿದೆ ಎಂದರು. ದೂರುದಾರರಾದ ರಾಣಿ, ತಮ್ಮ ಮನೆ ಮುಂದೆ ನಿಲ್ಲಿಸಿದ್ದ ಕಾರನ್ನು ಕಳವು ಮಾಡಲಾಗಿತ್ತು. ಪೊಲೀಸರು ಕಾರನ್ನು ಪತ್ತೆ ಹಚ್ಚಿ ನಮಗೆ ಒಪ್ಪಿಸಿದ್ದಾರೆ ಎಂದರು. ಆಕಾಶ್ ಆದಿತ್ಯ, ನಗರದ ರೈಲ್ವೆ ನಿಲ್ದಾಣದ ಮುಂದೆ ಡ್ರಾಪ್ ಕೇಳುವ ನೆಪದಲ್ಲಿ ಬಂದು ಹಲ್ಲೆ ನಡೆಸಿ, ಒಡವೆ ಮತ್ತು ಕಾರನ್ನು ಕಸಿದುಕೊಂಡು ಪರಾರಿಯಾಗಿದ್ದರು ಎಂದರು. ಆಟೋ ಚಾಲಕ ರವಿ, ಬಸ್ ನಿಲ್ದಾಣ ಸಮೀಪ ನಿಲ್ಲಿಸಿದ್ದ ಆಟೋವನ್ನು ಕಳವು ಮಾಡಿದ್ದರು. ಪೊಲೀಸರು ಆಟೋವನ್ನು ಪತ್ತೆ ಮಾಡಿ ನಮಗೆ ವಹಿಸಿದ್ದಾರೆ ಎಂದು ತಿಳಿಸಿದರು.
ಇದನ್ನೂ ಓದಿ: 99ರ ವೃದ್ಧೆಯ ಬರ್ಬರ ಹತ್ಯೆ, ಟ್ರಂಕ್ನಲ್ಲಿ ಪತ್ತೆಯಾದ ದೇಹ
