ಬೆಂಗಳೂರು: ಕರ್ನಾಟಕದ ರಾಜಕೀಯ ಅಖಾಡದಲ್ಲಿ ಮೇ ತಿಂಗಳು ಭಾರಿ ಏರುಪೇರುಗಳಿಗೆ ಸಾಕ್ಷಿಯಾಗುವ ಲಕ್ಷಣಗಳು ದಟ್ಟವಾಗಿವೆ. ಸಿದ್ದರಾಮಯ್ಯ ನೇತೃತ್ವದ ಸರ್ಕಾರಕ್ಕೆ (Congress) ಮೂರು ವರ್ಷ ತುಂಬುತ್ತಿರುವ ಈ ಸಂದರ್ಭದಲ್ಲಿ, ಸಚಿವ ಸಂಪುಟದ ಸಮಗ್ರ ಪುನರ್ರಚನೆಗೆ ಹೈಕಮಾಂಡ್ ಸ್ಕೆಚ್ ಹಾಕಿದೆ ಎನ್ನಲಾಗುತ್ತಿದೆ. ಮೇ 15ರೊಳಗೆ ರಾಜ್ಯ ಸಚಿವ ಸಂಪುಟದಲ್ಲಿ ದೊಡ್ಡ ಮಟ್ಟದ ಬದಲಾವಣೆಗಳಾಗಲಿವೆ ಎಂಬ ಸುದ್ದಿಗೆ ಸಚಿವ ಶಿವಾನಂದ ಪಾಟೀಲ್ ಅವರ “ಹೊಸಬರಿಗಾಗಿ ಸ್ಥಾನ ತ್ಯಾಗಕ್ಕೆ ಸಿದ್ಧ” ಎಂಬ ಹೇಳಿಕೆ ಈಗ ಮತ್ತಷ್ಟು ಪುಷ್ಟಿ ನೀಡಿದೆ.
ಪಂಚರಾಜ್ಯ ಫಲಿತಾಂಶದ ಬಳಿಕ ಹೈಕಮಾಂಡ್ ಆಪರೇಷನ್ ಪಂಚರಾಜ್ಯಗಳ ಚುನಾವಣಾ ಫಲಿತಾಂಶ ಪ್ರಕಟವಾದ ಬೆನ್ನಲ್ಲೇ ಹೈಕಮಾಂಡ್ ಕರ್ನಾಟಕದತ್ತ ಗಮನ ಹರಿಸಲಿದೆ. ಕೇವಲ ಸಂಪುಟ ವಿಸ್ತರಣೆ ಮಾತ್ರವಲ್ಲದೆ, ಮುಖ್ಯಮಂತ್ರಿ ಬದಲಾವಣೆ ಮತ್ತು ಕೆಪಿಸಿಸಿ ಅಧ್ಯಕ್ಷರ ಬದಲಾವಣೆಯಂತಹ ಗಂಭೀರ ವಿಷಯಗಳೂ ಚರ್ಚೆಯ ಮುಂಚೂಣಿಯಲ್ಲಿವೆ. ಸದ್ಯ ಸಂಪುಟದಲ್ಲಿ ಕೆ.ಎನ್. ರಾಜಣ್ಣ ಮತ್ತು ಬಿ. ನಾಗೇಂದ್ರ ಅವರ ನಿರ್ಗಮನದಿಂದ ತೆರವಾಗಿರುವ ಎರಡು ಸ್ಥಾನಗಳ ಭರ್ತಿಯ ಜೊತೆಗೆ, ಅಸಮರ್ಥ ಸಚಿವರಿಗೆ ಮಬಾಗಿಲು ತೋರಿಸುವುದು ಬಹುತೇಕ ಖಚಿತ ಎನ್ನಲಾಗುತ್ತಿದೆ.
13 ಸಚಿವರಿಗೆ ತೂಗುಗತ್ತಿ: ಕಾರ್ಯವೈಖರಿಯೇ ಮುಳುವಾಯಿತೇ? ಸುಮಾರು 13 ಹಾಲಿ ಸಚಿವರ ರಿಪೋರ್ಟ್ ಕಾರ್ಡ್ ಹೈಕಮಾಂಡ್ ಕೈ ಸೇರಿದ್ದು, ಅವರಲ್ಲಿ ಹಲವರಿಗೆ ಸಂಕಷ್ಟ ಎದುರಾಗುವ ಸಾಧ್ಯತೆಯಿದೆ. ಸಚಿವರ ಸಾಧನೆ, ಜಾತಿ ಲೆಕ್ಕಾಚಾರ ಮತ್ತು ಪ್ರತಿಪಕ್ಷಗಳ ವಿರುದ್ಧದ ಹೋರಾಟದಲ್ಲಿ ಅವರ ಸಕ್ರಿಯತೆಯನ್ನು ಮಾನದಂಡವಾಗಿ ಇರಿಸಿಕೊಳ್ಳಲಾಗಿದೆ.
ಸಂಕಷ್ಟದಲ್ಲಿರುವ ಸಂಭಾವ್ಯ ಸಚಿವರ ಪಟ್ಟಿ: ಕೆ.ಎಚ್. ಮುನಿಯಪ್ಪ, ದಿನೇಶ್ ಗುಂಡೂರಾವ್, ಶರಣಬಸಪ್ಪ ದರ್ಶನಾಪುರ, ಎನ್.ಎಸ್. ಭೋಸರಾಜು, ಲಕ್ಷ್ಮಿ ಹೆಬ್ಬಾಳ್ಕರ್, ಮಧು ಬಂಗಾರಪ್ಪ, ಡಾ. ಎಚ್.ಸಿ. ಮಹದೇವಪ್ಪ, ಬೈರತಿ ಸುರೇಶ್, ಕೆ. ವೆಂಕಟೇಶ್, ಡಾ. ಎಂ.ಸಿ. ಸುಧಾಕರ್, ರಹೀಂ ಖಾನ್, ಎಸ್.ಎಸ್. ಮಲ್ಲಿಕಾರ್ಜುನ ಮತ್ತು ಶಿವಾನಂದ ಪಾಟೀಲ್.
ಮಂತ್ರಿಗಿರಿಯ ರೇಸ್ನಲ್ಲಿ ಯಾರಿದ್ದಾರೆ? ಹಳೆಯ ಮುಖಗಳನ್ನು ಕೈಬಿಟ್ಟು ಹೊಸಬರಿಗೆ ಮತ್ತು ಹಿರಿಯ ಆಕಾಂಕ್ಷಿಗಳಿಗೆ ಅವಕಾಶ ನೀಡಲು ಕಾಂಗ್ರೆಸ್ ಮುಂದಾಗಿದೆ. ಈ ಪಟ್ಟಿಯಲ್ಲಿ ಹಿರಿಯ ನಾಯಕ ಬಿ.ಕೆ. ಹರಿಪ್ರಸಾದ್, ವಿಧಾನಸಭೆ ಸ್ಪೀಕರ್ ಯು.ಟಿ. ಖಾದರ್ ಮತ್ತು ಅನುಭವಿ ರಾಜಕಾರಣಿ ಆರ್.ವಿ. ದೇಶಪಾಂಡೆ ಅವರ ಹೆಸರುಗಳು ಮುಂಚೂಣಿಯಲ್ಲಿವೆ. ಇದರೊಂದಿಗೆ ಕೆ.ಎಚ್. ಮುನಿಯಪ್ಪ ಅವರ ಪುತ್ರಿ ರೂಪಾ ಶಶಿಧರ್ ಮತ್ತು ಲಿಂಗಾಯತ ಸಮುದಾಯದ ಪ್ರಭಾವಿ ನಾಯಕರು ಕೂಡ ಮಂತ್ರಿ ಸ್ಥಾನದ ನಿರೀಕ್ಷೆಯಲ್ಲಿದ್ದಾರೆ.
ಅದೃಷ್ಟ ಖುಲಾಯಿಸಲಿರುವ ಸಂಭಾವ್ಯರು: ಬಿ.ಕೆ. ಹರಿಪ್ರಸಾದ್, ಯು.ಟಿ. ಖಾದರ್, ಆರ್.ವಿ. ದೇಶಪಾಂಡೆ, ರೂಪಾ ಶಶಿಧರ್, ಸಲೀಂ ಅಹ್ಮದ್, ಅನಿಲ್ ಚಿಕ್ಕಮಾದು, ಬೇಳೂರು ಗೋಪಾಲಕೃಷ್ಣ, ಅಶೋಕ್ ಪಟ್ಟಣ್, ಟಿ.ಬಿ. ಜಯಚಂದ್ರ ಮತ್ತು ಎಚ್.ಸಿ. ಬಾಲಕೃಷ್ಣ.
ಒಟ್ಟಾರೆಯಾಗಿ ಮೇ ಮಧ್ಯಭಾಗದ ವೇಳೆಗೆ ಕರ್ನಾಟಕ ಸರ್ಕಾರದ ಸ್ವರೂಪ ಬದಲಾಗಲಿದೆಯೇ ಅಥವಾ ಇದು ಕೇವಲ ಊಹಾಪೋಹಕ್ಕೆ ಸೀಮಿತವಾಗಲಿದೆಯೇ ಎಂಬ ಕುತೂಹಲ ಈಗ ವಿಧಾನಸೌಧದ ಪಡಸಾಲೆಯಲ್ಲಿ ಮನೆಮಾಡಿದೆ. ಅಧಿಕಾರ ಹಂಚಿಕೆಯ ಒಪ್ಪಂದದ ಚರ್ಚೆ ಮತ್ತೆ ಮುನ್ನೆಲೆಗೆ ಬಂದಿರುವುದು ಹಾಲಿ ಸಚಿವರಲ್ಲಿ ಎದೆಬಡಿತ ಹೆಚ್ಚಿಸಿರುವುದಂತೂ ಸುಳ್ಳಲ್ಲ.
ಇದನ್ನೂ ಓದಿ: ದಾವಣಗೆರೆ ದಕ್ಷಿಣದಲ್ಲಿ ಶಾಮನೂರು ಮೊಮ್ಮಗನ ಭರ್ಜರಿ ಎಂಟ್ರಿ: ಬಿಜೆಪಿಗೆ ಶಾಕ್ ನೀಡಿದ ಸಮರ್ಥ್!
