ಬೆಂಗಳೂರು: ರಾಜ್ಯದ ವಿವಿಧೆಡೆ ಸರ್ಕಾರಿ ಮತ್ತು ಖಾಸಗಿ ಆಸ್ಪತ್ರೆಗಳ ಸಿಬ್ಬಂದಿ ನಿರ್ಲಕ್ಷ್ಯದಿಂದಾಗಿ (Shocking) ರೋಗಿಗಳು ಪ್ರಾಣ ಕಳೆದುಕೊಂಡಿರುವ ಎರಡು ಆಘಾತಕಾರಿ ಘಟನೆಗಳು ವರದಿಯಾಗಿವೆ.
ಬಳ್ಳಾರಿಯಲ್ಲಿ ಇಬ್ಬಂದಿ ನಿರ್ಲಕ್ಷ್ಯ, ವೃದ್ಧೆ ಸಾವು
ಬಳ್ಳಾರಿಯ ಬಿಎಂಇಆರ್ಸಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದ 70 ವರ್ಷದ ಅಕ್ಕಮ್ಮ ಎಂಬುವವರು ಮೃತಪಟ್ಟಿದ್ದು, ಸಿಬ್ಬಂದಿಯ ನಿರ್ಲಕ್ಷ್ಯವೇ ಸಾವಿಗೆ ಕಾರಣ ಎಂದು ಕುಟುಂಬಸ್ಥರು ಆರೋಪಿಸಿದ್ದಾರೆ. ಬಾಯಿಯ ಕ್ಯಾನ್ಸರ್ನಿಂದ ಬಳಲುತ್ತಿದ್ದ ಇವರಿಗೆ ಏಪ್ರಿಲ್ 17ರಂದು ಯಶಸ್ವಿಯಾಗಿ ಶಸ್ತ್ರಚಿಕಿತ್ಸೆ ನೆರವೇರಿತ್ತು. ಆದರೆ, ಆಪರೇಷನ್ ನಂತರದ ದಿನಗಳಲ್ಲಿ ಅಗತ್ಯವಿದ್ದ ಇಂಜೆಕ್ಷನ್ ಮತ್ತು ಔಷಧಗಳನ್ನು ಸಿಬ್ಬಂದಿ ಸಕಾಲದಲ್ಲಿ ನೀಡಲಿಲ್ಲ ಎಂದು ಕುಟುಂಬದವರು ದೂರುತ್ತಿದ್ದಾರೆ. ಅಲ್ಲದೆ, ಆಸ್ಪತ್ರೆಯಲ್ಲಿ ಔಷಧ ಇಲ್ಲವೆಂದು ಹೇಳಿ ಖಾಸಗಿ ಮೆಡಿಕಲ್ನಲ್ಲಿ ಸುಮಾರು 40 ಸಾವಿರ ರೂಪಾಯಿ ಖರ್ಚು ಮಾಡಿಸಲಾಗಿದೆ ಹಾಗೂ ಖಾಸಗಿ ಲ್ಯಾಬ್ಗಳಲ್ಲಿ ಪರೀಕ್ಷೆ ಮಾಡಿಸಲು ಒತ್ತಾಯಿಸಲಾಗಿದೆ ಎಂದು ಆರೋಪಿಸಲಾಗಿದೆ.
ಚೆಲುವಾಂಬ ಆಸ್ಪತ್ರೆಯ ಐಸಿಯುನಲ್ಲಿ ಇರುವೆ ಕಚ್ಚಿ ನವಜಾತ ಶಿಶು ಸಾವು
ಮೈಸೂರಿನ ಚೆಲುವಾಂಬ ಆಸ್ಪತ್ರೆಯಲ್ಲಿ ವೈದ್ಯರು ಮತ್ತು ಸಿಬ್ಬಂದಿಯ ನಿರ್ಲಕ್ಷ್ಯದಿಂದಾಗಿ ನವಜಾತ ಶಿಶುವೊಂದು ಮೃತಪಟ್ಟಿದೆ. ಏಪ್ರಿಲ್ 15ರಂದು 7 ತಿಂಗಳಿಗೆ ಜನಿಸಿದ್ದ 1 ಕೆಜಿ 40 ಗ್ರಾಂ ತೂಕದ ಮಗುವನ್ನು ಐಸಿಯುವಿನಲ್ಲಿ ಇರಿಸಲಾಗಿತ್ತು. ಆ ವಾರ್ಡ್ನಲ್ಲಿ ವಿಪರೀತ ಇರುವೆಗಳ ಕಾಟವಿದ್ದು, ಈ ಬಗ್ಗೆ ಸಿಬ್ಬಂದಿಗೆ ಮೊದಲೇ ಎಚ್ಚರಿಕೆ ನೀಡಿದರೂ ಅವರು ನಿರ್ಲಕ್ಷ್ಯ ವಹಿಸಿದ್ದರು ಎಂದು ಪೋಷಕರು ಆರೋಪಿಸಿದ್ದಾರೆ. ‘ಇರುವೆಗಳ ಕಾರಣಕ್ಕೆ ಮಗು ಸಾವನ್ನಪ್ಪಿದೆ’ ಎಂದು ಪೋಷಕರು ಕಣ್ಣೀರು ಹಾಕುತ್ತಿದ್ದು, ಇದು ಆಸ್ಪತ್ರೆಯ ನೈರ್ಮಲ್ಯ ಮತ್ತು ಸಿಬ್ಬಂದಿಯ ಜವಾಬ್ದಾರಿಯ ಬಗ್ಗೆ ಪ್ರಶ್ನೆಗಳನ್ನು ಹುಟ್ಟುಹಾಕಿದೆ.
ಈ ಎರಡು ಪ್ರತ್ಯೇಕ ಘಟನೆಗಳು ಆಸ್ಪತ್ರೆಗಳ ನಿರ್ಲಕ್ಷ್ಯ ಮತ್ತು ರೋಗಿಗಳಿಗೆ ದೊರೆಯಬೇಕಾದ ಮೂಲಭೂತ ಸೌಕರ್ಯಗಳ ಕುರಿತಾದ ಗಂಭೀರ ಲೋಪಗಳನ್ನು ಹೊರಹಾಕಿದ್ದು, ಸಂಬಂಧಪಟ್ಟ ಅಧಿಕಾರಿಗಳು ಈ ಬಗ್ಗೆ ಕಠಿಣ ಕ್ರಮ ಕೈಗೊಳ್ಳಬೇಕೆಂದು ಸಾರ್ವಜನಿಕರು ಆಗ್ರಹಿಸಿದ್ದಾರೆ.
