ಚೆನ್ನೈ: ಪ್ಯಾಕೇಜ್ಡ್ ಸ್ನ್ಯಾಕ್ಸ್ ಮತ್ತು ಸಿಹಿತಿಂಡಿಗಳ ಕ್ಷೇತ್ರದಲ್ಲಿ ದೇಶದ ಪ್ರಮುಖ ಕಂಪನಿಯಾಗಿರುವ ‘ಬಿಕಾಜಿ ಫುಡ್ಸ್ ಇಂಟರ್ನ್ಯಾಷನಲ್’ನ ಸಂಸ್ಥಾಪಕ ಮತ್ತು ಅಧ್ಯಕ್ಷ ಶಿವ ರತನ್ ಅಗರ್ವಾಲ್ (Shiv Ratan) ಅವರು ನಿಧನರಾಗಿದ್ದಾರೆ. ಏಪ್ರಿಲ್ 23 ರಂದು ಅಗರ್ವಾಲ್ ವಿಧಿವಶರಾಗಿರುವ ವಿಷಯವನ್ನು ಕಂಪನಿಯು ಷೇರುಪೇಟೆಗೆ ನೀಡಿರುವ ಅಧಿಕೃತ ಮಾಹಿತಿಯಲ್ಲಿ ಖಚಿತಪಡಿಸಿದೆ. ಸಾಂಪ್ರದಾಯಿಕ ಭಾರತೀಯ ತಿಂಡಿ ತಿನಿಸುಗಳನ್ನು ದೇಶ-ವಿದೇಶಗಳಲ್ಲಿ ಜನಪ್ರಿಯಗೊಳಿಸುವಲ್ಲಿ ಅಗರ್ವಾಲ್ ಅವರ ಪಾತ್ರ ಅತ್ಯಂತ ಮಹತ್ವದ್ದಾಗಿದ್ದು, ಅವರ ನಿಧನದ ಕಾರಣವನ್ನು ಕಂಪನಿ ಬಹಿರಂಗಪಡಿಸಿಲ್ಲ.
ಕಂಪನಿ ಹೇಳಿದ್ದೇನು?
ನಿಯಮಗಳ ಪ್ರಕಾರ ಶಿವ ರತನ್ ಅಗರ್ವಾಲ್ ಅವರು ಇನ್ನು ಮುಂದೆ ಕಂಪನಿಯ ಪ್ರವರ್ತಕ ಮತ್ತು ಪ್ರವರ್ತಕ ಗುಂಪಿನ ಭಾಗವಾಗಿರುವುದಿಲ್ಲ ಎಂದು ಕಂಪನಿ ತಿಳಿಸಿದೆ. ತಮ್ಮ ಸಂಸ್ಥಾಪಕರ ದೂರದೃಷ್ಟಿಯನ್ನು ಮುಂದುವರಿಸಲು ಸಂಸ್ಥೆಯ ನಾಯಕತ್ವ ಮತ್ತು ನೌಕರರು ಬದ್ಧರಾಗಿದ್ದಾರೆ ಎಂದು ತಿಳಿಸಿರುವ ಬಿಕಾಜಿ ಫುಡ್ಸ್, ಈ ಪರಿವರ್ತನೆಯ ಸಂದರ್ಭದಲ್ಲಿ ವ್ಯವಹಾರದ ಸ್ಥಿರತೆ ಮತ್ತು ದೀರ್ಘಾವಧಿಯ ಮೌಲ್ಯವರ್ಧನೆಯ ಮೇಲೆ ಹೆಚ್ಚಿನ ಗಮನ ಹರಿಸುವುದಾಗಿ ಸ್ಪಷ್ಟಪಡಿಸಿದೆ.
ಭುಜಿಯಾ, ನಮ್ಕೀನ್, ಪ್ಯಾಕೇಜ್ಡ್ ಸಿಹಿತಿಂಡಿಗಳು ಮತ್ತು ರೆಡಿ-ಟು-ಈಟ್ ಉತ್ಪನ್ನಗಳ ಮೂಲಕ ಬಿಕಾಜಿ ಫುಡ್ಸ್ ಭಾರತೀಯ ಮಾರುಕಟ್ಟೆಯಲ್ಲಿ ತನ್ನದೇ ಆದ ಛಾಪು ಮೂಡಿಸಿದೆ. ಅಗರ್ವಾಲ್ ಅವರ ನೇತೃತ್ವದಲ್ಲಿ ಕಂಪನಿಯು ಕೇವಲ ಭಾರತದಲ್ಲಿ ಮಾತ್ರವಲ್ಲದೆ, ಅಂತರರಾಷ್ಟ್ರೀಯ ಮಾರುಕಟ್ಟೆಗಳಿಗೂ ವಿಸ್ತರಣೆಯಾಗಿ ಸಂಘಟಿತ ಸ್ನ್ಯಾಕ್ಸ್ ವಲಯದಲ್ಲಿ ಪ್ರಮುಖ ಕಂಪನಿಯಾಗಿ ಹೊರಹೊಮ್ಮಿದೆ. ನಗರ ಪ್ರದೇಶಗಳಲ್ಲಿನ ಹೆಚ್ಚುತ್ತಿರುವ ಬೇಡಿಕೆ ಮತ್ತು ಬ್ರಾಂಡೆಡ್ ಉತ್ಪನ್ನಗಳ ಬಳಕೆಯಿಂದಾಗಿ ಭಾರತದ ಪ್ಯಾಕೇಜ್ಡ್ ಆಹಾರ ವಲಯವು ವೇಗವಾಗಿ ಬೆಳೆಯುತ್ತಿದ್ದು, ಇದರಲ್ಲಿ ಬಿಕಾಜಿ ಕಂಪನಿಯ ಪಾತ್ರ ದೊಡ್ಡದಿದೆ.
ಸಂಪ್ರದಾಯ ಮತ್ತು ಆಧುನಿಕತೆಯನ್ನು ಸಮರ್ಥವಾಗಿ ಬಳಸಿಕೊಂಡ ಬಿಕಾಜಿ ಫುಡ್ಸ್, ಇಂದು ಹಲವು ರಾಷ್ಟ್ರೀಯ ಹಾಗೂ ಪ್ರಾದೇಶಿಕ ಕಂಪನಿಗಳ ಜೊತೆಗೆ ಸ್ಪರ್ಧಿಸುತ್ತಿದೆ. ವಿಶೇಷವಾಗಿ ಭಾರತೀಯರು ನೆಲೆಸಿರುವ ವಿದೇಶಿ ಮಾರುಕಟ್ಟೆಗಳಲ್ಲಿಯೂ ಬಿಕಾಜಿ ಉತ್ಪನ್ನಗಳಿಗೆ ಭಾರಿ ಬೇಡಿಕೆಯಿದ್ದು, ಕಂಪನಿಯ ಈ ಯಶಸ್ಸಿನ ಹಿಂದೆ ಶಿವ ರತನ್ ಅಗರ್ವಾಲ್ ಅವರ ಪರಿಶ್ರಮ ಮತ್ತು ದೂರದೃಷ್ಟಿ ಅಡಗಿದೆ.
ಇದನ್ನೂ ಓದಿ: ಕಾಂಗ್ರೆಸ್ ನಾಯಕ ಪವನ್ ಖೇರಾಗೆ ಸುಪ್ರೀಂ ಕೋರ್ಟ್ನಲ್ಲಿ ಹಿನ್ನಡೆ
