ಉತ್ತರ ಪ್ರದೇಶ: ಮೀರತ್ ನ ಶತಾಬ್ಧಿ ನಗರದ ನಮೋ ಭಾರತ್ ನಿಲ್ದಾಣದಲ್ಲಿಂದು ಮೀರತ್ ಮೆಟ್ರೋ ಮತ್ತು ನಮೋ ಭಾರತ್ ರೈಲಿಗೆ ಪ್ರಧಾನಿ ನರೇಂದ್ರ ಮೋದಿ (Narendra Modi) ಹಸಿರು ನಿಶಾನೆ ತೋರಿಸಿದರು.
ವಿದ್ಯಾರ್ಥಿಗಳ ಜೊತೆ ಮೋದಿ ಸಂವಾದ
ಬಳಿಕ ಮೀರತ್ ದಕ್ಷಿಣ ನಿಲ್ದಾಣದವರೆಗೆ ಮೆಟ್ರೋ ರೈಲಿನಲ್ಲಿ ಪ್ರಧಾನಿ ಮೋದಿ ಅವರು ಪ್ರಯಾಣ ಮಾಡಿದ್ದಾರೆ. ಈ ಸಂದರ್ಭದಲ್ಲಿ ವಿದ್ಯಾರ್ಥಿಗಳು ಹಾಗೂ ಅಧಿಕಾರಿಗಳೊಂದಿಗೆ ಪ್ರಧಾನಿ ಸಂವಾದ ನಡೆಸಿದರು. ನಂತರ ಪ್ರಧಾನಿ, 82 ಕಿಲೋ ಮೀಟರ್ ದೆಹಲಿ- ಮೀರತ್ ನಮೋ ಭಾರತ್ ಕಾರಿಡಾರ್ ಅನ್ನು ದೇಶಕ್ಕೆ ಸಮರ್ಪಿಸಿದರು. ದೇಶದ ಮೊದಲ ನಮೋ ಭಾರತ್ ಪ್ರಾದೇಶಿಕ ಕ್ಷಿಪ್ರ ಸಾರಿಗೆ ವ್ಯವಸ್ಥೆಯ ಉಳಿದ ವಿಭಾಗಗಳನ್ನು ಉದ್ಘಾಟಿಸಿದರು.
ಅನೇಕ ಅಭಿವೃದ್ಧಿ ಯೋಜನೆ ಉದ್ಘಾಟನೆ
ಮೀರತ್ ನಲ್ಲಿ ಆಯೋಜಿಸಲಾಗಿದ್ದ ಸಾರ್ವಜನಿಕ ಸಮಾರಂಭದಲ್ಲಿ 12 ಸಾವಿರದ 930 ಕೋಟಿ ರೂಪಾಯಿ ವೆಚ್ಚದ ವಿವಿಧ ಅಭಿವೃದ್ಧಿ ಯೋಜನೆಗಳನ್ನು ಉದ್ಘಾಟಿಸಿ ರಾಷ್ಟ್ರಕ್ಕೆ ಸಮರ್ಪಿಸಿದರು. ಈ ಸಂದರ್ಭದಲ್ಲಿ ಮಾತನಾಡಿದ ಪ್ರಧಾನಿ, ಇಂದು ಆರಂಭಿಸಲಾದ ಯೋಜನೆಗಳು ವಿಕಸಿತ ಉತ್ತರ ಪ್ರದೇಶ ಹಾಗೂ ವಿಕಸಿತ ಭಾರತಕ್ಕೆ ಒತ್ತು ನೀಡುತ್ತವೆ. ಕೇಂದ್ರ ಮತ್ತು ರಾಜ್ಯ ಸರ್ಕಾರ ಜೊತೆಯಾಗಿ ಜನರ ಕಲ್ಯಾಣಕ್ಕಾಗಿ ಶ್ರಮಿಸುತ್ತಿವೆ. ಇದು ಬೆಳವಣಿಗೆಯ ಕಾಯಕ ಸಂಸ್ಕೃತಿಯನ್ನು ಎತ್ತಿ ತೋರಿಸುತ್ತದೆ. ಎಲ್ಲಾ ಯೋಜನೆಗಳನ್ನು ಸಮಯಕ್ಕೆ ಸರಿಯಾಗಿ ಪೂರ್ಣಗೊಳಿಸಲು ತಮ್ಮ ಸರ್ಕಾರ ಬದ್ಧವಾಗಿದೆ ಎಂದು ಹೇಳಿದರು.
ಪ್ರತಿಪಕ್ಷಗಳು ನಕಾರಾತ್ಮಕ ರಾಜಕೀಯ ಧೋರಣೆ ತ್ಯಜಿಸಿ ಅಭಿವೃದ್ಧಿಯ ವಿಷಯದಲ್ಲಿ ಸಹಕಾರ ನೀಡಬೇಕು. ಬಿಜೆಪಿ ಅಭಿವೃದ್ಧಿಯನ್ನು ತನ್ನ ನೀತಿ, ತತ್ವ ಹಾಗೂ ಧ್ಯೇಯವಾಕ್ಯವಾಗಿರಿಸಿಕೊಂಡಿದ್ದು, ಅಭಿವೃದ್ಧಿಯೊಂದೇ ಸಾರ್ವತ್ರಿಕ ವಿಷಯವಾಗಿದ್ದು, ಈ ನಿಟ್ಟಿನಲ್ಲಿ ಮೀರತ್ ಮೆಟ್ರೋ ರೈಲು ಉದಾಹರಣೆಯಾಗಿದೆ ಎಂದು ತಿಳಿಸಿದರು. ದೆಹಲಿಯಲ್ಲಿ ನಡೆದ ಎ.ಐ. ಜಾಗತಿಕ ಶೃಂಗಸಭೆಯ ವೇಳೆ ಕಾಂಗ್ರೆಸ್ ಕಾರ್ಯಕರ್ತರು ನಡೆಸಿದ ಪ್ರತಿಭಟನೆಯನ್ನು ಪ್ರಸ್ತಾಪಿಸಿದ ಪ್ರಧಾನಿ, ಶೃಂಗಸಭೆ ರಾಷ್ಟ್ರೀಯ ಕೆಲಸವಾಗಿದ್ದು, ಕಾಂಗ್ರೆಸ್ ತನ್ನ ಸಭ್ಯತೆಯನ್ನು ಮುರಿದು ಭ್ರಷ್ಟ ನೀತಿಯನ್ನು ಅನಾವರಣಗೊಳಿಸುವ ಮೂಲಕ ದೇಶದ ಖಂಡನೆಗೆ ಒಳಗಾಯಿತು ಎಂದು ವಿಶ್ಲೇಷಿಸಿದರು.
ಇದನ್ನೂ ಓದಿ: ಬ್ರೆಜಿಲ್ನ ಆರೋಗ್ಯ ಸಚಿವರನ್ನ ಭೇಟಿ ಮಾಡಿದ ಜೆಪಿ ನಡ್ಡಾ
