ತಿರುವನಂತಪುರ: ಕೊಲ್ಲಂ ಕ್ಷೇತ್ರದ ನೂತನ ಶಾಸಕಿ ಬಿಂದು ಕೃಷ್ಣ ಅವರು ಚುನಾವಣಾ ಗೆಲುವಿನ ನಂತರ ಪಕ್ಷದ ಕಚೇರಿಗೆ ಭೇಟಿ ನೀಡಿದ್ದಾಗ ಈ ಮುಜುಗರದ (Kerala) ಸನ್ನಿವೇಶ ಎದುರಾಗಿದೆ. ಕಚೇರಿಯಲ್ಲಿದ್ದ ನಾಯಕರಿಗೆ ಬಿಂದು ಕೃಷ್ಣ ಅವರು ಕೈಮುಗಿದು ಅಥವಾ ಹಸ್ತಲಾಘವ ಮಾಡುವ ಮೂಲಕ ಶುಭಾಶಯ ವಿನಿಮಯ ಮಾಡಿಕೊಳ್ಳುತ್ತಿದ್ದರು. ಈ ವೇಳೆ ಹಿರಿಯ ನಾಯಕ ಚೆರಿಯನ್ ಫಿಲಿಪ್ ಅವರು ಎದುರಾದಾಗ ಬಿಂದು ಅವರು ಕೈಕುಲುಕಲು ಮುಂದಾಗಿದ್ದಾರೆ.
ಆದರೆ, ಬಿಂದು ಅವರ ಹಸ್ತಲಾಘವವನ್ನು ಗಮನಿಸದ ಫಿಲಿಪ್, ಅವರನ್ನು ಬಲವಂತವಾಗಿ ಅಪ್ಪಿಕೊಳ್ಳಲು ಪ್ರಯತ್ನಿಸಿದ್ದಾರೆ. ಶಾಸಕಿಯ ಒಪ್ಪಿಗೆಯಿಲ್ಲದೆ ಅವರ ಭುಜ ಹಿಡಿದು ಎಳೆಯಲು ಮುಂದಾದಾಗ, ಬಿಂದು ಕೃಷ್ಣ ಅವರು ತಕ್ಷಣವೇ ಹಿಂದೆ ಸರಿದು ಅವರನ್ನು ದೂಡಿ ಅಲ್ಲಿಂದ ಮುಂದೆ ಸಾಗಿದ್ದಾರೆ. ಈ ದೃಶ್ಯಗಳು ಕ್ಯಾಮೆರಾದಲ್ಲಿ ಸೆರೆಯಾಗಿದ್ದು, ಹಿರಿಯ ನಾಯಕನ ವರ್ತನೆಗೆ ವ್ಯಾಪಕ ಆಕ್ರೋಶ ವ್ಯಕ್ತವಾಗಿದೆ.
ನೆಟ್ಟಿಗರ ಆಕ್ರೋಶ ಮತ್ತು ಹಳೆಯ ವಿವಾದ: ಸಾಮಾಜಿಕ ಜಾಲತಾಣಗಳಲ್ಲಿ ಈ ವಿಡಿಯೋ ಹಂಚಿಕೊಂಡಿರುವ ಅನೇಕರು, ಸಾರ್ವಜನಿಕವಾಗಿ ಮಹಿಳಾ ಜನಪ್ರತಿನಿಧಿಯೊಂದಿಗೆ ಇಷ್ಟು ಅಸಭ್ಯವಾಗಿ ನಡೆದುಕೊಳ್ಳುವುದು ಸರಿಯಲ್ಲ ಎಂದು ಆಕ್ಷೇಪಿಸಿದ್ದಾರೆ. ಸಾಮಾಜಿಕ ಹೋರಾಟಗಾರ್ತಿ ಶ್ರೀಜಾ ನೆಯ್ಯಾಟಿಂಕರ ಸೇರಿದಂತೆ ಹಲವರು, “ಅನುಮತಿಯಿಲ್ಲದೆ ಮಹಿಳೆಯ ಮೈಮೇಲೆ ಬೀಳುವುದು ಸಂಸ್ಕೃತಿಯಲ್ಲ” ಎಂದು ಕಿಡಿಕಾರಿದ್ದಾರೆ.
ಚೆರಿಯನ್ ಫಿಲಿಪ್ ಈ ಹಿಂದೆಯೂ ಮಹಿಳಾ ನಾಯಕಿಯರ ಬಗ್ಗೆ ವಿವಾದಾತ್ಮಕ ಹೇಳಿಕೆ ನೀಡಿ ಸುದ್ದಿಯಾಗಿದ್ದರು. 2015ರಲ್ಲಿ ಚುನಾವಣಾ ಟಿಕೆಟ್ ಹಂಚಿಕೆ ವಿಚಾರದಲ್ಲಿ ಅವರು ನೀಡಿದ್ದ ಲೈಂಗಿಕ ಅಶ್ಲೀಲತೆಯ ಅರ್ಥ ಬರುವಂತಹ ಹೇಳಿಕೆ ದೊಡ್ಡ ಮಟ್ಟದ ವಿರೋಧಕ್ಕೆ ಕಾರಣವಾಗಿತ್ತು. ಈಗ ಶಾಸಕಿಯ ಜೊತೆಗಿನ ಈ ವರ್ತನೆಯಿಂದಾಗಿ ಅವರ ವಿರುದ್ಧ ಕಟ್ಟುನಿಟ್ಟಿನ ಕ್ರಮ ಕೈಗೊಳ್ಳಬೇಕು ಮತ್ತು ಪಕ್ಷದಿಂದ ಅಮಾನತು ಮಾಡಬೇಕು ಎಂಬ ಒತ್ತಾಯ ಕೇಳಿಬರುತ್ತಿದೆ.
ಇದನ್ನೂ ಓದಿ: ಬ್ಯಾಂಕ್ ವಶಪಡಿಸಿಕೊಂಡ ಆಸ್ತಿ ಮಾರಾಟಕ್ಕೆ 7 ವರ್ಷಗಳ ಗಡುವು
