TOP NEWS

Bidadi Township: ಬಿಡದಿ ಸ್ಮಾರ್ಟ್ ಸಿಟಿ ಹೆಸರಲ್ಲಿ ಮಹಾ ಲೂಟಿ, ಸಿಎಂ ಹಠಕ್ಕೆ ರೈತರು ಬಲಿ?

bidadi township jds demands cancellation

ಬೆಂಗಳೂರು: ರಾಮನಗರದ ಬಿಡದಿ (Bidadi Township) ಹಾಗೂ ಹಾರೋಹಳ್ಳಿ ಭಾಗದ ಹಸಿರು ಕೃಷಿ ಭೂಮಿಯನ್ನು ವಶಕ್ಕೆ ಪಡೆಯಲು ಹೊರಡಿಸಲಾಗಿರುವ ಅಂತಿಮ ಭೂಸ್ವಾಧೀನ ನೋಟಿಫಿಕೇಶನ್ ಅನ್ನು ತಕ್ಷಣವೇ ರದ್ದುಗೊಳಿಸಬೇಕು ಎಂದು ಜೆಡಿಎಸ್ ರಾಜ್ಯ ಸರ್ಕಾರವನ್ನು ಆಗ್ರಹಿಸಿದೆ. ಈ ಸಂಬಂಧ ಗ್ರೇಟರ್ ಬೆಂಗಳೂರು ಜೆಡಿಎಸ್ ಅಧ್ಯಕ್ಷ ಎಚ್.ಎಂ. ರಮೇಶ್‌ಗೌಡ ನೇತೃತ್ವದ ಜೆಡಿಎಸ್ ಮುಖಂಡರ ನಿಯೋಗವು ರಾಜ್ಯ ಸರ್ಕಾರದ ಮುಖ್ಯ ಕಾರ್ಯದರ್ಶಿ ಡಾ. ಶಾಲಿನಿ ರಜನೀಶ್ ಅವರನ್ನು ಖುದ್ದಾಗಿ ಭೇಟಿ ಮಾಡಿ, ಅನ್ನದಾತರ ಪರವಾಗಿ ಅಧಿಕೃತ ಮನವಿ ಪತ್ರ ಸಲ್ಲಿಸಿದೆ.

ಯೋಜನೆ ಹೆಸರಿನಲ್ಲಿ ಭೂಮಿ ಕಸಿಯುವ ಹುನ್ನಾರ

ಸುದ್ದಿಗೋಷ್ಠಿಯಲ್ಲಿ ಸರ್ಕಾರದ ನಡೆಗೆ ತೀವ್ರ ಆಕ್ಷೇಪ ವ್ಯಕ್ತಪಡಿಸಿದ ರಮೇಶ್‌ಗೌಡ ಅವರು, ಕೃಷಿ ಪ್ರಧಾನವಾಗಿರುವ ಬಿಡದಿ ಭಾಗದಲ್ಲಿ ಬರೋಬ್ಬರಿ 7,500 ಎಕರೆ ಭೂಮಿಯನ್ನು ಸ್ಮಾರ್ಟ್ ಸಿಟಿ ಹೆಸರಿನಲ್ಲಿ ಕಸಿದುಕೊಳ್ಳುವ ಹುನ್ನಾರ ನಡೆಯುತ್ತಿದೆ. ಈ ಫಲವತ್ತಾದ ನೆಲದಿಂದ ತಿಂಗಳಿಗೆ 6 ಲಕ್ಷ ಲೀಟರ್ ಹಾಲು ಉತ್ಪಾದನೆಯಾಗುತ್ತಿದ್ದು, ರೇಷ್ಮೆ ಹಾಗೂ ತೋಟಗಾರಿಕೆಯನ್ನೇ ನಂಬಿ ಸಾವಿರಾರು ಕುಟುಂಬಗಳು ಬದುಕುತ್ತಿವೆ. ಹೀಗಾಗಿ ಕಳೆದ ಒಂದು ವರ್ಷದಿಂದ ರೈತರು ಈ ಯೋಜನೆಯನ್ನು ವಿರೋಧಿಸಿ ರಸ್ತೆಯಲ್ಲೇ ಧರಣಿ ನಡೆಸುತ್ತಿದ್ದಾರೆ. ಆದರೆ, ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರು ಈ ಪ್ರಾಜೆಕ್ಟ್ ಅನ್ನು ತಮ್ಮ ವೈಯಕ್ತಿಕ ಪ್ರತಿಷ್ಠೆಯಾಗಿ ತೆಗೆದುಕೊಂಡು ಹಠಕ್ಕೆ ಬಿದ್ದಿದ್ದಾರೆ ಎಂದು ಗಂಭೀರವಾಗಿ ಆರೋಪಿಸಿದ ಅವರು, ಜಮೀನು ಕಳೆದುಕೊಳ್ಳುವ ಕೃಷಿಕರ ರಕ್ಷಣೆಗೆ ಜೆಡಿಎಸ್ ಕಟಿಬದ್ಧವಾಗಿದೆ ಎಂದರು.

ಬಿಡಿಎ, ಬಿಎಂಆರ್‌ಡಿಎ ಮತ್ತು ಕೆಎಚ್‌ಬಿ ನಂತಹ ಸರ್ಕಾರಿ ಸಂಸ್ಥೆಗಳು ಸಕ್ರಿಯವಾಗಿರುವಾಗಲೇ, ಈ ಬೃಹತ್ ಯೋಜನೆಯನ್ನು ಖಾಸಗಿ ಸಹಭಾಗಿತ್ವಕ್ಕೆ (PPP) ನೀಡುತ್ತಿರುವುದರ ಹಿಂದೆ ದೊಡ್ಡ ರಿಯಲ್ ಎಸ್ಟೇಟ್ ದಂಧೆ ಅಡಗಿದೆ. ಖಾಸಗಿ ಕಂಪನಿಗಳು ಮಾಡುವ ಸಾಲಕ್ಕೆ ಸರ್ಕಾರವೇ ಗ್ಯಾರಂಟಿ ನೀಡಲು ಹೊರಟಿರುವುದು ಹಲವು ಅನುಮಾನಗಳಿಗೆ ಕಾರಣವಾಗಿದೆ. ಈಗಾಗಲೇ ಆರಂಭಿಸಲಾದ ಅರ್ಕಾವತಿ ಹಾಗೂ ಕೆ. ಶಿವರಾಮ ಕಾರಂತ ಲೇಔಟ್‌ಗಳೇ ನನೆಗುದಿಗೆ ಬಿದ್ದಿದ್ದು, ಅಲ್ಲಿನ ಸೈಟು ಆಕಾಂಕ್ಷಿಗಳು ಹಾಗೂ ರೈತರು ಇಂದಿಗೂ ಬೀದಿಗೆ ಬಿದ್ದಿದ್ದಾರೆ. ಇಂತಹ ಪರಿಸ್ಥಿತಿಯಲ್ಲಿ ಬಿಡದಿಯ ರೈತರನ್ನು ಮತ್ತೊಂದು ಸಂಕಷ್ಟದ ಕೂಪಕ್ಕೆ ದೂಡಲಾಗುತ್ತಿದೆ. ಬರೋಬ್ಬರಿ 33,562 ಕೋಟಿ ರೂಪಾಯಿ ವೆಚ್ಚದ ಈ ಯೋಜನೆಗಾಗಿ 10 ಲಕ್ಷಕ್ಕೂ ಹೆಚ್ಚು ಹಸಿರು ಮರಗಳನ್ನು ಕಡಿಯಲಾಗುತ್ತಿದ್ದು, ಇದು ಕೇವಲ ದುಡ್ಡು ಮಾಡುವ ತಂತ್ರವಾಗಿದೆ ಎಂದು ಕಿಡಿಕಾರಿದರು.

ನಾಳೆ ಜೆಡಿಎಸ್‌ ಪ್ರತಿಭಟನೆ

ಇದೇ ವೇಳೆ ಮಾಗಡಿ ವಿಧಾನಸಭಾ ಕ್ಷೇತ್ರದ ಕಾಂಗ್ರೆಸ್ ಶಾಸಕ ಎಚ್.ಸಿ. ಬಾಲಕೃಷ್ಣ ಅವರು ಈ ಯೋಜನೆಯ ಹಿಂದಿರುವ ಕಹಿ ಸತ್ಯವನ್ನು ಮುಚ್ಚಿಡದೆ ಜನರ ಮುಂದೆ ಬಹಿರಂಗಪಡಿಸಬೇಕು ಎಂದು ಒತ್ತಾಯಿಸಿದರು. ಈ ವಿವಾದಿತ ಯೋಜನೆಯನ್ನು ಕೈಬಿಡಲು ಒತ್ತಾಯಿಸಿ ಜೂನ್ 20ರ ಶನಿವಾರದಂದು ಜೆಡಿಎಸ್ ಯುವ ಘಟಕದ ಸಾರಥಿ ನಿಖಿಲ್ ಕುಮಾರಸ್ವಾಮಿ ಹಾಗೂ ಮಾಜಿ ಶಾಸಕ ಎ. ಮಂಜುನಾಥ್ ಅವರ ಮುಂದಾಳತ್ವದಲ್ಲಿ ಬೃಹತ್ ಪಾದಯಾತ್ರೆ ಆಯೋಜಿಸಲಾಗಿದೆ ಎಂದು ತಿಳಿಸಿದರು. ಈ ಹೋರಾಟವನ್ನು ಇಲ್ಲಿಗೇ ನಿಲ್ಲಿಸದೆ ಬೆಂಗಳೂರು ದಕ್ಷಿಣ ಡಿಸಿ ಹಾಗೂ ರಾಜ್ಯಪಾಲರಿಗೂ ದೂರು ನೀಡಲಾಗುವುದು ಎಂದ ಅವರು, ಕೇಂದ್ರ ಸಚಿವ ಎಚ್.ಡಿ. ಕುಮಾರಸ್ವಾಮಿ ಮತ್ತು ಅವರ ಪರಿವಾರದ ವಿರುದ್ಧ ಇಂಟರ್ನೆಟ್‌ನಲ್ಲಿ ಅವಹೇಳನಕಾರಿ ಪೋಸ್ಟ್ ಹಾಕುತ್ತಿರುವ ಕಿಡಿಗೇಡಿಗಳ ವಿರುದ್ಧ ಕಠಿಣ ಕಾನೂನು ಕ್ರಮ ಜರುಗಿಸಬೇಕು ಎಂದು ಆಗ್ರಹಿಸಿದರು. ಪತ್ರಿಕಾಗೋಷ್ಠಿಯಲ್ಲಿ ಪಕ್ಷದ ಹಿರಿಯ ನಾಯಕರಾದ ಆರ್. ಪ್ರಕಾಶ್, ಟಿ. ತಿಮೇಗೌಡ ಸೇರಿದಂತೆ ಹಲವರು ಉಪಸ್ಥಿತರಿದ್ದರು.

ಇದನ್ನೂ ಓದಿ:  ಗ್ಯಾರಂಟಿ ಹಗರಣಗಳಿಗೆ ಸಿಎಂ ಬ್ರೇಕ್: ಹೊರರಾಜ್ಯದವರ ಖಾತೆಗೆ ಹೋಗುತ್ತಿದ್ದ ಹಣ ನಿಲ್ಲಿಸಲು ಡಿ.ಕೆ. ಶಿವಕುಮಾರ್ ಕಟ್ಟುನಿಟ್ಟಿನ ಆರ್ಡರ್!

Leave a Reply

Your email address will not be published. Required fields are marked *