ನವದೆಹಲಿ: ಕೇಂದ್ರ ಗ್ರಾಮೀಣಾಭಿವೃದ್ಧಿ ಸಚಿವ ಶಿವರಾಜ್ ಸಿಂಗ್ ಚೌಹಾಣ್ , ರಾಜ್ಯ ಖಾತೆ ಸಚಿವ ಡಾ. ಚಂದ್ರಶೇಖರ ಪೆಮ್ಮಸಾನಿ ಹಾಗೂ ಗ್ರಾಮೀಣಾಭಿವೃದ್ಧಿ ಇಲಾಖೆಯ ಹಿರಿಯ ಅಧಿಕಾರಿಗಳ ನಿಯೋಗ ದೆಹಲಿಯಲ್ಲಿ ಉಪರಾಷ್ಟ್ರಪತಿ ಸಿ.ಪಿ.ರಾಧಾಕೃಷ್ಣನ್ (CP Radhakrishnan) ಅವರನ್ನು ಭೇಟಿ ಮಾಡಿ ಸಮಾಲೋಚನೆ ನಡೆಸಿತು.
ಉಪರಾಷ್ಟ್ರಪತಿಗೆ ಮಾಹಿತಿ ನೀಡಿದ ನಿಯೋಗ
ಈ ವೇಳೆ ಗ್ರಾಮೀಣಾಭಿವೃದ್ಧಿ ಸಚಿವಾಲಯದಲ್ಲಿ ಕೈಗೊಂಡ ವಿವಿಧ ಯೋಜನೆಗಳ ಕುರಿತು ಉಪರಾಷ್ಟ್ರಪತಿ ಅವರಿಗೆ ಮಾಹಿತಿ ನೀಡಲಾಯಿತು. ಸಾರ್ವಜನಿಕ ಕಲ್ಯಾಣಕ್ಕಾಗಿ ಕೈಗೊಂಡ ಕ್ರಮಗಳು, ದೇಶದ ಎಲ್ಲರಿಗೂ ಮನೆ, ಗ್ರಾಮೀಣ ಉದ್ಯೋಗ, ಕೌಶಲ್ಯ ಮತ್ತು ಸಾಮರ್ಥ್ಯ ವೃದ್ಧಿ, ಜೀವನೋಪಾಯ ಸುಧಾರಣೆಗೆ ಕ್ರಮ, ಸಮುದಾಯ ಮೂಲಸೌಕರ್ಯ ಅಭಿವೃದ್ಧಿ, ರಸ್ತೆ ಮತ್ತು ಸಂಪರ್ಕ, ಜಲಮೂಲಗಳ ನಿರ್ವಹಣೆ, ಭೂ-ದಾಖಲೆಗಳ ಡಿಜಿಟಲೀಕರಣ ಸೇರಿದಂತೆ ವಿವಿಧ ವಿಷಯಗಳ ಕುರಿತು ಉಪರಾಷ್ಟ್ರಪತಿ ಅವರಿಗೆ ಮಾಹಿತಿ ನೀಡಿದರು.
ಕೇಂದ್ರದ ಯೋಜನೆಗಳನ್ನ ಶ್ಲಾಘಿಸಿದ ಉಪರಾಷ್ಟ್ರಪತಿ
ಇದೇ ವೇಳೆ ಕೇಂದ್ರ ಸರ್ಕಾರದ ಪ್ರಮುಖ ಯೋಜನೆಗಳಾದ ವಿಬಿ- ಜಿ ರಾಮ್ ಜಿ, ಪ್ರಧಾನ ಮಂತ್ರಿ ಗ್ರಾಮ ಸಡಕ್ ಯೋಜನೆ, ದೀನ್ ದಯಾಳ್ ಅಂತ್ಯೋದಯ ಯೋಜನೆ, ಪ್ರಧಾನಮಂತ್ರಿ ಆವಾಸ್ ಯೋಜನೆ- ಗ್ರಾಮೀಣ ಸೇರಿದಂತೆ ಮಹತ್ವಾಕಾಂಕ್ಷಿ ಯೋಜನೆಗಳ ಕುರಿತು ಸಚಿವರ ನಿಯೋಗ ಮಾಹಿತಿ ನೀಡಿತು. ಗ್ರಾಮೀಣಾಭಿವೃದ್ಧಿಗಾಗಿ ಕೈಗೊಂಡಿರುವ ಸಚಿವಾಲಯದ ಪರಿವರ್ತನಾತ್ಮಕ ಕ್ರಮಗಳನ್ನು ಉಪರಾಷ್ಟ್ರಪತಿ ಶ್ಲಾಘಿಸಿದರು. ಇದೇ ಸಂದರ್ಭದಲ್ಲಿ ಅವರು, ಭಾರತದ ಜೀವಾಳ ಅದರ ಹಳ್ಳಿಗಳಲ್ಲಿವೆ ಎಂಬ ಮಹಾತ್ಮ ಗಾಂಧೀಜಿ ಅವರ ಮಾತುಗಳನ್ನು ಉಲ್ಲೇಖಿಸಿ ಗ್ರಾಮೀಣಾಭಿವೃದ್ಧಿ ಹಾಗೂ ಉದ್ಯೋಗ ಮತ್ತು ಕೌಶಲ್ಯಾವಕಾಶಗಳಿಗೆ ಬೆಂಬಲ ನೀಡುವ ಮೂಲಕ ವಿಕಸಿತ ಭಾರತದ ಗುರಿ ಸಾಧನೆ ಸಾಧ್ಯ ಎಂದರು.
ಇದನ್ನೂ ಓದಿ: ರಾಷ್ಟ್ರೀಯ ಹಿತಾಸಕ್ತಿಗಳೊಂದಿಗೆ ರಾಹುಲ್ ಗಾಂಧಿ ರಾಜಿ: ಪಿಯೂಷ್ ಗೋಯಲ್ ಆರೋಪ
