ಮದ್ರಾಸ್: ತಮಿಳು ಸ್ಟಾರ್ ನಟ ದಳಪತಿ ವಿಜಯ್ ಅವರ ಕೊನೆಯ ಸಿನಿಮಾ ಜನ ನಾಯಗನ್ (Jana Nayagan) ವಿಚಾರವಾಗಿ ಮದ್ರಾಸ್ ಹೈಕೋರ್ಟ್ ತೀರ್ಪು ನೀಡಿದ್ದು, ಸಿನಿಮಾ ತಂಡಕ್ಕೆ ಹಿನ್ನಡೆಯಾಗಿದೆ.
ಏಕಸದಸ್ಯ ಪೀಠದ ಆದೇಶ ರದ್ದು ಮಾಡಿದ ಮದ್ರಾಸ್ ಹೈಕೋರ್ಟ್
ಜನ ನಾಯಗನ್ ಸಿನಿಮಾಗೆ ಸೆನ್ಸಾರ್ ಪ್ರಮಾಣಪತ್ರ ನೀಡುವಂತೆ ಕೇಂದ್ರ ಚಲನಚಿತ್ರ ಪ್ರಮಾಣೀಕರಣ ಮಂಡಳಿ (ಸಿಬಿಎಫ್ಸಿ)ಗೆ ನಿರ್ದೇಶನ ನೀಡಿದ್ದ ಹಿಂದಿನ ಏಕಸದಸ್ಯ ಪೀಠದ ಆದೇಶವನ್ನು ಮದ್ರಾಸ್ ಹೈಕೋರ್ಟ್ ಮಂಗಳವಾರ ರದ್ದು ಮಾಡಿದ್ದು, ಈ ಮೂಲಕ ನಿರ್ಮಾಪಕರಿಗೆ ಸಂಕಷ್ಟ ಎದುರಾಗಿದೆ.
ನಿಯಮ ಪಾಲಿಸಿಲ್ಲ ಎಂದ ಕೋರ್ಟ್
ಮುಖ್ಯ ನ್ಯಾಯಮೂರ್ತಿ ಮಣೀಂದ್ರ ಮೋಹನ್ ಶ್ರೀವಾಸ್ತವ ಮತ್ತು ನ್ಯಾಯಮೂರ್ತಿ ಜಿ. ಅರುಳ್ ಮುರುಗನ್ ಅವರಿದ್ದ ಪೀಠವು, ಈ ಹಿಂದೆ ಪ್ರಕರಣದ ವಿಚಾರಣೆಯ ಸಮಯದಲ್ಲಿ ನಿಯಮಗಳನ್ನ ಪಾಲಿಸಲಾಗಿಲ್ಲ ಎಂದು ಹೇಳಿದೆ.
ನ್ಯಾಯಾಲಯದಲ್ಲಿ ಕೆವಿಎನ್ ಪ್ರೊಡಕ್ಷನ್ಸ್ ಪರ ಹಾಜರಿದ್ದ ಹಿರಿಯ ವಕೀಲ ಸತೀಶ್ ಪರಾಶರನ್, ಹಿರಿಯ ವಕೀಲ ಪ್ರದೀಪ್ ರೈ ಮತ್ತು ವಕೀಲ ವಿಜಯನ್ ಸುಬ್ರಮಣಿಯಂ, ಚಿತ್ರಕ್ಕೆ ಯು/ಎ ಪ್ರಮಾಣಪತ್ರ ನೀಡಲಾಗುವುದು ಎಂದು ಮಂಡಳಿಯು ನಿರ್ಮಾಪಕರಿಗೆ ಮೊದಲೇ ತಿಳಿಸಿತ್ತು, ಆದರೆ ಪ್ರಮಾಣೀಕರಣವನ್ನು ಎಂದಿಗೂ ನೀಡಿಲ್ಲ ಎಂದು ವಾದಿಸಿದರು. ಮಂಡಳಿ ಹೇಳಿದಂತೆ ಸಿನಿಮಾದಲ್ಲಿ ಅನೇಕ ಬದಲಾವಣೆಗಳನ್ನ ಮಾಡಲಾಗಿದೆ. ಆದರೂ ಸಹ ಮಂಡಳಿ ಪ್ರಮಾಣಪತ್ರ ಕೊಡದೇ ಪರಿಷ್ಕರಣಾ ಸಮಿತಿಗೆ ಕಳುಹಿಸಿತ್ತು.
