ಹೈದರಾಬಾದ್: 9 ಕೋಟಿ ರೂಪಾಯಿ ಸಾಲ ಮತ್ತು ಚೆಕ್ ಬೌನ್ಸ್ ಪ್ರಕರಣದಲ್ಲಿ ಜೈಲುಪಾಲಾಗಿದ್ದ ಬಾಲಿವುಡ್ ನಟ ರಾಜ್ಪಾಲ್ ಯಾದವ್, (Rajpal Yadav) ಅವರಿಗೆ ಮಧ್ಯಂತರ ಜಾಮೀನು ಲಭಿಸಿದ್ದು, ಇದೀಗ ಸೋಷಿಯಲ್ ಮೀಡಿಯಾದಲ್ಲಿ ಪೋಸ್ಟ್ ಮಾಡಿದ್ದಾರೆ. ಅಲ್ಲದೇ, ತಮಗೆ ಸಹಾಯ ಮಾಡಿದ ಎಲ್ಲರಿಗೂ ಧನ್ಯವಾದ ತಿಳಿಸಿದ್ದಾರೆ.
ಸಹಾಯ ಮಾಡಿದ ಜನರ ಹೆಸರನ್ನ ಬಹಿರಂಗ ಮಾಡದ ನಟ
ಈ ಪ್ರಕರಣಕ್ಕೆ ಸಂಬಂಧಪಟ್ಟಂತೆ ಫೆಬ್ರವರಿ 16 ರಂದು ನಟನಿಗೆ ಮಧ್ಯಂತರ ಜಾಮೀನು ನೀಡಲಾಗಿದೆ. ಅವರ ಜಾಮೀನು ಮಾರ್ಚ್ 18 ರವರೆಗೆ ಮಾನ್ಯವಾಗಿರುತ್ತದೆ. ಇನ್ನು ರಾಜ್ಪಾಲ್ ಜೈಲಿನಲ್ಲಿದ್ದಾಗ, ಹಲವಾರು ಬಾಲಿವುಡ್ ಸೆಲೆಬ್ರಿಟಿಗಳು ಅವರ ಬಾಕಿ ಹಣವನ್ನು ಪಾವತಿಸಲು ಸಹಾಯ ಮಾಡಲು ಮುಂದೆ ಬಂದಿದ್ದಾರೆ ಎನ್ನಲಾಗಿತ್ತು. ಆದರೆ ಈ ವಿಚಾರವಾಗಿ ಯಾವುದೇ ವಿವರಗಳನ್ನು ಬಹಿರಂಗಪಡಿಸದಿರಲು ನಿರ್ಧರಿಸಿದ್ದಾರೆ.
ಸಹಾನೂಭೂತಿ ಬೇಡ ಎಂದ ನಟ
ಇನ್ನು ಇತ್ತೀಚೆಗೆ ಸುದ್ದಿವಾಹಿನಿಯೊಂದಕ್ಕೆ ನೀಡಿದ ಸಂದರ್ಶನದಲ್ಲಿ, ನಟ ತನಗೆ ಸಹಾನುಭೂತಿ ಬೇಡ ಮತ್ತು ಈ ಪ್ರಕರಣ ಇನ್ನೂ ಕೂಡ ನ್ಯಾಯಾಲಯದಲ್ಲಿ ಪರಿಗಣನೆಯಲ್ಲಿರುವ ಕಾರಣ ತನ್ನ ಮಾತುಗಳ ಬಗ್ಗೆ ಜಾಗರೂಕನಾಗಿದ್ದೇನೆ ಎಂದು ಹೇಳಿದ್ದಾರೆ.
ಚಲನಚಿತ್ರೋದ್ಯಮದ ಬೆಂಬಲದ ಕುರಿತು ಮಾತನಾಡಿದ ರಾಜ್ಪಾಲ್, “ಈ ವಿಷಯವು ಮೊದಲು ಮಾಧ್ಯಮಗಳಲ್ಲಿ 2012 ರಲ್ಲಿ ಬಂದಿತ್ತು. ‘ರಾಜ್ಪಾಲ್ ಯಾದವ್ ಒಬ್ಬ ಮೋಸಗಾರ’ ಎಂದು ಹೆಡ್ಲೈನ್ಸ್ ಕೊಡಲಾಗುತ್ತು. ಅಂದಿನಿಂದ, ನಾನು ಪ್ರತಿ ವರ್ಷ ಕನಿಷ್ಠ ಹತ್ತು ಚಿತ್ರಗಳಲ್ಲಿ ಕೆಲಸ ಮಾಡಿದ್ದೇನೆ. ನಾನು ನಿಜವಾಗಿಯೂ ಮೋಸಗಾರನಾಗಿದ್ದರೆ, ಜನರು ನನ್ನೊಂದಿಗೆ ಏಕೆ ಕೆಲಸ ಮಾಡುವುದನ್ನು ಮುಂದುವರಿಸುತ್ತಾರೆ? ಚಿತ್ರೋದ್ಯಮವು ನನ್ನೊಂದಿಗಿದೆ ಎಂದು ಸಾಬೀತುಪಡಿಸುವ ಅಗತ್ಯವಿಲ್ಲ. ಎಲ್ಲರೂ ನನ್ನೊಂದಿಗಿದ್ದಾರೆ ಎಂದು ನನಗೆ ನಂಬಿಕೆ ಇದೆ” ಎಂದು ಹೇಳಿದ್ದಾರೆ.
