ಬೀದರ್: ಪಿಂಚಣಿ ನಿಧಿ ನಿಯಂತ್ರಣ ಮತ್ತು ಅಭಿವೃದ್ಧಿ ಪ್ರಾಧಿಕಾರ ಹಾಗೂ ಜಿಲ್ಲಾ ಲೀಡ್ ಬ್ಯಾಂಕ್ ಸಹಯೋಗದಲ್ಲಿ ಕೃಷಿ ಮತ್ತು ಸಂಬಂಧಿತ ವಲಯದ ಜನರಿಗೆ ವೃದ್ಧಾಪ್ಯದಲ್ಲಿ ಆರ್ಥಿಕ ಭದ್ರತೆ ಒದಗಿಸುವ ನಿಟ್ಟಿನಲ್ಲಿ ಬೀದರ್ ನಲ್ಲಿ (Bidar) ಬೆಳೆ ಪಿಂಚಣಿ ವಿಶೇಷ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿತ್ತು.
ಯಾರೆಲ್ಲಾ ಈ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು?
ಈ ಕಾರ್ಯಕ್ರಮಕ್ಕೆ ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಗಿರೀಶ್ ಬದೋಲೆ ಚಾಲನೆ ನೀಡಿದರು. ಕಾರ್ಯಕ್ರಮದಲ್ಲಿ ಕರ್ನಾಟಕ ರಾಜ್ಯ ರೈತ ಸಂಘದ ಜಿಲ್ಲಾ ಪ್ರಧಾನ ಕಾರ್ಯದರ್ಶಿ ದಯಾನಂದ ಸ್ವಾಮಿ ಸಿರ್ಸಿ, ಕೃಷಿ ಇಲಾಖೆಯ ಜಂಟಿ ನಿರ್ದೇಶಕಿ ದೇವಿಕಾ, ನಾಬಾರ್ಡ್ ಜಿಲ್ಲಾ ಅಭಿವೃದ್ಧಿ ವ್ಯವಸ್ಥಾಪಕ ವಿಷ್ಣುವರ್ಧನ್, ನವ ನಿರ್ಮಾಣ ರೂರಲ್ ಡೆವಲಪ್ಮೆಂಟ್ನ ಸಂಜೀವ ಕುಮಾರ ಬಿರಾದಾರ ಸೇರಿದಂತೆ ಹಲವು ಅಧಿಕಾರಿಗಳು ಮತ್ತು ತಜ್ಙರು ಉಪಸ್ಥಿತರಿದ್ದರು.
ಇದೇ ವೇಳೆ ಅರ್ಹ ಫಲಾನುಭವಿಗಳಿಗೆ ಗಣ್ಯರು ಕಿಟ್ ವಿತರಿಸಿದರು. ಬಳಿಕ ಗಿರೀಶ್ ಬದೋಲೆ, ರಾಷ್ಟ್ರೀಯ ಪಿಂಚಣಿ ಯೋಜನೆ ಕೇವಲ ಸರ್ಕಾರಿ ಅಥವಾ ಕಾರ್ಪೊರೇಟ್ ನೌಕರರಿಗೆ ಮಾತ್ರ ಸೀಮಿತವಲ್ಲ. ರೈತರು ಮತ್ತು ಕೃಷಿ ಕಾರ್ಮಿಕರು ಕೂಡ ದುಡಿಯುವ ಕಾಲದಲ್ಲಿ ಸಣ್ಣ ಮೊತ್ತವನ್ನು ಉಳಿತಾಯ ಮಾಡುವ ಮೂಲಕ ಗೌರವಯುತ ವೃದ್ಧಾಪ್ಯವನ್ನು ಹೊಂದಬಹುದು ಎಂದು ಅಭಿಪ್ರಾಯಪಟ್ಟರು.
140 ಕೋಟಿ ಜನರಿಗೆ ಭಯ
ಈ ಸಮಯದಲ್ಲಿ ಮಾತನಾಡಿದ ದಯಾನಂದ ಸ್ವಾಮಿ ಸಿರ್ಸಿ, ಈ ಹಿಂದೆ ಇದು ಕೇವಲ ನೌಕರರಿಗೆ ಮಾತ್ರ ಎನ್ನುವ ಭಾವನೆ ಇತ್ತು. ಆದರೆ ಈಗ 140 ಕೋಟಿ ಜನರಿಗೂ ಅನ್ವಯವಾಗುತ್ತಿರುವುದು ಸಂತಸದ ವಿಷಯ. ಪ್ರಾಯೋಗಿಕವಾಗಿ ಬೀದರ್ ಜಿಲ್ಲೆಯನ್ನು ಆಯ್ಕೆ ಮಾಡಿಕೊಂಡಿರುವುದು ಹೆಮ್ಮೆಯ ಸಂಗತಿ ಎಂದರು.ವಿಷ್ಣುವರ್ಧನ್, ಎನ್ಪಿಎಸ್ನ ವೈಶಿಷ್ಟ್ಯಗಳನ್ನು ವಿವರಿಸುತ್ತಾ, ಇದು ಸುರಕ್ಷಿತ ಪಿಂಚಣಿ ಯೋಜನೆ ಎಂದು ತಿಳಿಸಿದರು. ದೇವಿಕಾ, ಕೃಷಿ ಇಲಾಖೆ ವತಿಯಿಂದ ರೈತರಿಗೆ ಈ ಬಗ್ಗೆ ಹೆಚ್ಚಿನ ಮಾಹಿತಿ ನೀಡುವ ಭರವಸೆ ನೀಡಿದರು.ಸಂಜೀವ ಕುಮಾರ ಬಿರಾದಾರ, ಕೃಷಿ ಕ್ಷೇತ್ರದಲ್ಲಿ ಪಿಂಚಣಿ ದೊರಕಿಸುವ ಈ ಯೋಜನೆ ಅತ್ಯಂತ ಭರವಸೆಯದ್ದಾಗಿದೆ. ರೈತರು ರಾಷ್ಟ್ರೀಯ ಪಿಂಚಣಿ ಯೋಜನೆಯಲ್ಲಿ ಹೂಡಿಕೆ ಮಾಡುವ ಮೂಲಕ ಜೀವನ ಭದ್ರತೆ ಪಡೆಯಬಹುದು ಎಂದು ಹೇಳಿದರು.
