ಬೆಂಗಳೂರು: ಬಿಡದಿ ಟೌನ್ಶಿಪ್ ಯೋಜನೆಗೆ ಸಂಬಂಧಿಸಿದಂತೆ ಅಧಿಕಾರಿಗಳ ಮೇಲೆ ನಡೆದ ಹಲ್ಲೆ ಮತ್ತು ಪ್ರತಿಭಟನೆಗಳ ಕುರಿತು ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ (DK Shivakumar) ಅವರು ತೀವ್ರ ಬೇಸರ ಮತ್ತು ಭಾವುಕತೆ ವ್ಯಕ್ತಪಡಿಸಿದ್ದಾರೆ. ನಗರದಲ್ಲಿಂದು ಹಮ್ಮಿಕೊಂಡಿದ್ದ ಜಂಟಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಬಿಡದಿಯಲ್ಲಿ ಅಧಿಕಾರಿಗಳಿಗೆ ತೊಂದರೆ ಕೊಟ್ಟಿರುವುದು ತಮಗೆ ತೀವ್ರ ನೋವುಂಟು ಮಾಡಿದೆ ಎಂದರು. ತಪ್ಪು ನಡೆದಿದ್ದರೆ ತಮಗೆ ಪೊರಕೆಯಿಂದ ಹೊಡೆಯಲಿ, ತಾವು ಅದಕ್ಕೆ ಸಿದ್ಧರಿದ್ದಾರೆ, ಆದರೆ ಕರ್ತವ್ಯ ನಿರತ ಅಧಿಕಾರಿಗಳ ಮೇಲೆ ದೌರ್ಜನ್ಯ ನಡೆಸುವುದು ಸರಿಯಲ್ಲ ಎಂದು ಆಕ್ರೋಶ ಹೊರಹಾಕಿದರು. ಈ ಇಡೀ ಗದ್ದಲದ ಹಿಂದೆ ರಾಜಕೀಯ ಪ್ರೇರಿತ ಕುಮ್ಮಕ್ಕಿದ್ದು, ರೈತರನ್ನು ದಿಕ್ಕು ತಪ್ಪಿಸುವ ವ್ಯವಸ್ಥಿತ ಸಂಚು ನಡೆಯುತ್ತಿದೆ ಎಂದು ಸಿಎಂ ಗಂಭೀರ ಆರೋಪ ಮಾಡಿದರು.
ಹೆಚ್ಡಿಕೆ ಮೇಲೆ ಆರೋಪ ಮಾಡಿದ ಸಿಎಂ
ಇದೇ ವೇಳೆ ಬಿಡದಿ ಯೋಜನೆಯ ಹೊಣೆಯನ್ನು ಸಂಪೂರ್ಣವಾಗಿ ಕೇಂದ್ರ ಸಚಿವ ಎಚ್.ಡಿ. ಕುಮಾರಸ್ವಾಮಿ ಅವರ ಹೆಗಲಿಗೇರಿಸಿದ ಮುಖ್ಯಮಂತ್ರಿಗಳು, ಇದು ತಮ್ಮ ಕನಸಿನ ಯೋಜನೆಯಲ್ಲ ಎಂದರು. ಈ ಹಿಂದೆ 2006ರಲ್ಲಿ ಕುಮಾರಸ್ವಾಮಿ ಅವರು ಮುಖ್ಯಮಂತ್ರಿಯಾಗಿದ್ದಾಗ ಐದು ಉಪನಗರಗಳ ಸಮಗ್ರ ಅಭಿವೃದ್ಧಿಗಾಗಿ ಜಾಗತಿಕ ಟೆಂಡರ್ ಕರೆಯಲು ತೀರ್ಮಾನಿಸಲಾಗಿತ್ತು ಮತ್ತು ಅಂದು ಆರ್. ಅಶೋಕ್ ಅವರೂ ಸಚಿವ ಸಂಪುಟದಲ್ಲಿದ್ದರು ಎಂದು ಹಳೇ ದಾಖಲೆಗಳನ್ನು ನೆನಪಿಸಿದರು. ಅಷ್ಟೇ ಅಲ್ಲದೆ, ಅಂದು ಇಡೀ ಭಾಗವನ್ನು ರೆಡ್ ಝೋನ್ ಎಂದು ಘೋಷಿಸಿ, ಖಾಸಗಿ ಡೆವಲಪರ್ ಸಂಸ್ಥೆಯೊಂದರಿಂದ 400 ಕೋಟಿ ರೂಪಾಯಿ ಸೆಕ್ಯುರಿಟಿ ಡೆಪಾಸಿಟ್ ಪಡೆದು ರಿಯಲ್ ಎಸ್ಟೇಟ್ಗೆ ದಾರಿ ಮಾಡಿಕೊಟ್ಟಿದ್ದು ಯಾರು ಎಂದು ಪ್ರಶ್ನಿಸಿದ ಸಿಎಂ, ನಿಜವಾದ ರಿಯಲ್ ಎಸ್ಟೇಟ್ ದಂಧೆ ನಡೆಸಿದ್ದು ತಾವಲ್ಲ, ಬದಲಿಗೆ ಕುಮಾರಣ್ಣ ಎಂದು ತಿರುಗೇಟು ನೀಡಿದರು. ಬಳಿಕ 2010ರಲ್ಲಿ ಬಿ.ಎಸ್. ಯಡಿಯೂರಪ್ಪ ಅವರೂ ಇದೇ ಯೋಜನೆಯನ್ನು ಮುಂದುವರಿಸಿದ್ದರು ಎಂದು ಅವರು ವಿವರಿಸಿದರು.
ನನ್ನನ್ನ ಜೈಲಿಗೆ ಕಳುಹಿಸಲು ಸಂಚು
ತಮ್ಮನ್ನು ಜೈಲಿಗೆ ಕಳುಹಿಸಲು ವರ್ಷಗಳಿಂದ ಸಂಚು ನಡೆಯುತ್ತಿದೆ ಮತ್ತು ತಮ್ಮ ಸಿಎಂ ಹುದ್ದೆಯನ್ನು ಕೆಲವರಿಗೆ ಸಹಿಸಿಕೊಳ್ಳಲು ಆಗುತ್ತಿಲ್ಲ ಎಂದು ಮಾರ್ಮಿಕವಾಗಿ ನುಡಿದ ಡಿ.ಕೆ. ಶಿವಕುಮಾರ್, ಜೈಲು ತಮಗೇನು ಹೊಸದಲ್ಲ ಎಂದು ಕುಮಾರಸ್ವಾಮಿ ಅವರ ಇತ್ತೀಚಿನ ಹೇಳಿಕೆಗಳಿಗೆ ಟಾಂಗ್ ನೀಡಿದರು. ಬೆಂಗಳೂರಿನ ಸುತ್ತಮುತ್ತ ವಿಮಾನ ನಿಲ್ದಾಣ ಸೇರಿದಂತೆ ಹಲವು ಯೋಜನೆಗಳಿಗೆ ಹಿಂದೆ ಸಾವಿರಾರು ಎಕರೆ ಜಮೀನು ಸ್ವಾಧೀನಪಡಿಸಿಕೊಳ್ಳಲಾಗಿದೆ, ಇಂದು ಆ ಭೂಮಿಯ ಬೆಲೆ ಏನಾಗಿದೆ ಎಂಬುದು ಎಲ್ಲರಿಗೂ ಗೊತ್ತು ಎಂದ ಅವರು, ತಮ್ಮ ಸರ್ಕಾರ ಯಾರಿಂದಲೂ ಬಲವಂತವಾಗಿ ಭೂಮಿ ಕಿತ್ತುಕೊಳ್ಳುತ್ತಿಲ್ಲ ಎಂದು ಸ್ಪಷ್ಟಪಡಿಸಿದರು. ರೈತರಿಗೆ ಇಷ್ಟವಿದ್ದರೆ ಮಾತ್ರ ನಿಗದಿತ ಪರಿಹಾರ ಪಡೆದು ಜಮೀನು ನೀಡಬಹುದು, ಯಾರ ಮೇಲೂ ಒತ್ತಡವಿಲ್ಲ ಎಂದ ಸಿಎಂ, ಬಿಡದಿ ಟೌನ್ಶಿಪ್ ಅನುಷ್ಠಾನದ ಸಾಧಕ-ಬಾಧಕಗಳನ್ನು ಪರಿಶೀಲಿಸಲು ವಿಶೇಷ ಸಮಿತಿಯೊಂದನ್ನು ರಚಿಸುವ ಬಗ್ಗೆ ಮುಂದಿನ ಸಚಿವ ಸಂಪುಟ ಸಭೆಯಲ್ಲಿ ನಿರ್ಧಾರ ಕೈಗೊಳ್ಳಲಾಗುವುದು ಮತ್ತು ಆ ಸಮಿತಿಯ ವರದಿಯ ಆಧಾರದ ಮೇಲೆಯೇ ಮುಂದಿನ ಕ್ರಮ ಜರುಗಿಸಲಾಗುವುದು ಎಂದು ತಿಳಿಸಿದರು.
