TOP NEWS

Gruhajyoti: ಗೃಹಜ್ಯೋತಿ ಗ್ರಾಹಕರ ಡೇಟಾ ಸಂಗ್ರಹಕ್ಕೆ ತಾಂತ್ರಿಕ ಗ್ರಹಣ: ಸೌಲಭ್ಯ ರದ್ದಾಗುವ ಆತಂಕದಲ್ಲಿ ಜನಸಾಮಾನ್ಯರು

Technical Issues and Public Backlash Slow Down GruhaJyothi Door to Door Survey

ಬೆಂಗಳೂರು: ರಾಜ್ಯ ಸರ್ಕಾರದ ಮಹತ್ವಾಕಾಂಕ್ಷೆಯ ‘ಗೃಹಜ್ಯೋತಿ’ (Gruhajyoti) ಯೋಜನೆಯ ಫಲಾನುಭವಿಗಳ ಮಾಹಿತಿ ಸಂಗ್ರಹದ ಜವಾಬ್ದಾರಿ ಹೊತ್ತಿರುವ ಎಸ್ಕಾಂಗಳ ಸಿಬ್ಬಂದಿಗೆ ಹಲವು ತಾಂತ್ರಿಕ ಅಡಚಣೆಗಳು ತಲೆನೋವಾಗಿ ಪರಿಣಮಿಸಿವೆ. ಸ್ಥಳೀಯವಾಗಿ ಸಮೀಕ್ಷೆ ನಡೆಸುವ ಸಂದರ್ಭದಲ್ಲಿ ಆ್ಯಪ್‌ಗಳ ಕೈಕೊಡುತ್ತಿರುವುದು ಹಾಗೂ ಸಾರ್ವಜನಿಕರ ಅಸಹಕಾರ ಸಿಬ್ಬಂದಿಯನ್ನು ಹೈರಾಣಾಗಿಸಿದೆ.

ಸಿಬ್ಬಂದಿಯನ್ನು ಕಾಡುತ್ತಿರುವ ತಾಂತ್ರಿಕ ದೋಷಗಳು

ಮೊಬೈಲ್ ಆ್ಯಪ್‌ನಲ್ಲಿ ಗ್ರಾಹಕರ ವಿದ್ಯುತ್ ಸಂಪರ್ಕದ ಆರ್‌ಆರ್ (RR) ಸಂಖ್ಯೆಯನ್ನು ನಮೂದಿಸಿದ ತಕ್ಷಣ, ಮಾಲೀಕರ ಹೆಸರು ಮತ್ತು ಯೋಜನೆಗೆ ನೋಂದಾಯಿತರಾದವರ ವಿವರಗಳು ಸ್ವಯಂಚಾಲಿತವಾಗಿ ಮೂಡಬೇಕಿದೆ. ಆದರೆ, ಹಲವು ಫಲಾನುಭವಿಗಳ ವಿವರಗಳು ಹೀಗೆ ಪ್ರದರ್ಶನಗೊಳ್ಳುತ್ತಿಲ್ಲ. ಇದರೊಂದಿಗೆ ಕೆಲವು ಗ್ರಾಮೀಣ ಭಾಗಗಳಲ್ಲಿ ಮೊಬೈಲ್ ನೆಟ್‌ವರ್ಕ್ ಸಮಸ್ಯೆ ಇರುವುದರಿಂದ ಸಮೀಕ್ಷೆಗೆ ಹಿನ್ನಡೆಯಾಗಿದೆ. ಇನ್ನು ಕೆಲವು ಕಡೆ ಆ್ಯಪ್ ಇದ್ದಕ್ಕಿದ್ದಂತೆ ಸ್ಥಗಿತಗೊಳ್ಳುತ್ತಿದ್ದು (Crash), ಮೊದಲಿನಿಂದ ಎಲ್ಲ ವಿವರಗಳನ್ನು ಮತ್ತೆ ಭರ್ತಿ ಮಾಡಬೇಕಾದ ಅನಿವಾರ್ಯತೆ ಸಮೀಕ್ಷೆದಾರರಿಗೆ ಎದುರಾಗಿದೆ.

ದಾಖಲೆ ಸಂಗ್ರಹಣೆ ಹಾಗೂ ಎಸ್‌ಇಪಿ-ಟಿಎಸ್‌ಪಿ ಅನುದಾನದ ವಿವಾದ

ಗೃಹಜ್ಯೋತಿ ಫಲಾನುಭವಿಗಳಿಂದ ಆಧಾರ್ ಕಾರ್ಡ್, ಪಾನ್ ಕಾರ್ಡ್ ಹಾಗೂ ಜಾತಿಯ ವಿವರ ಸೇರಿದಂತೆ ಒಟ್ಟು 11 ಪ್ರಮುಖ ಅಂಶಗಳನ್ನು ಕಲೆಹಾಕಲಾಗುತ್ತಿದೆ. ಪಾನ್ ಹಾಗೂ ಆಧಾರ್‌ನಂತಹ ಸೂಕ್ಷ್ಮ ದಾಖಲೆಗಳನ್ನು ಮೀಟರ್ ರೀಡರ್‌ಗಳು ಸಂಗ್ರಹಿಸುತ್ತಿರುವುದು ಸಾರ್ವಜನಿಕರಲ್ಲಿ ಗೊಂದಲ ಮೂಡಿಸಿದೆ. ಜಾತಿ ಪ್ರಮಾಣಪತ್ರ ಕಡ್ಡಾಯವಲ್ಲದಿದ್ದರೂ, ಜಾತಿಯ ವಿವರ ನೀಡುವಂತೆ ಒತ್ತಾಯಿಸಲಾಗುತ್ತಿದೆ ಎಂಬ ಆರೋಪಗಳು ಕೇಳಿಬಂದಿವೆ.

ಚುನಾವಣಾ ಸಂದರ್ಭದಲ್ಲಿ ಗ್ಯಾರಂಟಿ ಘೋಷಿಸಿದ್ದ ಕಾಂಗ್ರೆಸ್ ಸರ್ಕಾರ, ಅನುಷ್ಠಾನದ ವೇಳೆ ಎದುರಾದ ಆರ್ಥಿಕ ಸಂಕಷ್ಟ ಸರಿದೂಗಿಸಲು ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡದ ಅಭಿವೃದ್ಧಿಗೆ ಮೀಸಲಿಟ್ಟಿದ್ದ ಎಸ್‌ಇಪಿ-ಟಿಎಸ್‌ಪಿ (SEP-TSP) ಹಣವನ್ನು ಬಳಕೆ ಮಾಡಿಕೊಂಡಿತ್ತು. ಈ ನಡೆಗೆ ತೀವ್ರ ರಾಜಕೀಯ ಟೀಕೆಗಳು ವ್ಯಕ್ತವಾಗಿದ್ದರೂ ಸರ್ಕಾರ ಅನುದಾನ ಬಳಕೆಯನ್ನು ಮುಂದುವರಿಸಿದೆ. ಭವಿಷ್ಯದ ಕಾನೂನು ಅಥವಾ ರಾಜಕೀಯ ಸವಾಲುಗಳನ್ನು ಎದುರಿಸುವ ಮುನ್ನೆಚ್ಚರಿಕೆಯಾಗಿ ಈಗ ಅಧಿಕೃತವಾಗಿ ಜಾತಿವಾರು ಮಾಹಿತಿ ಕಲೆಹಾಕಲಾಗುತ್ತಿದೆ ಎಂಬ ಚರ್ಚೆಗಳು ಆರಂಭವಾಗಿವೆ. ಸ್ವಂತ ರಾಜಕೀಯ ಲಾಭಕ್ಕಾಗಿ ಯೋಜನೆ ಜಾರಿಗೊಳಿಸಿ, ಮೂರು ವರ್ಷಗಳ ಬಳಿಕ ಈಗ ಮಾಹಿತಿ ಸಂಗ್ರಹಿಸುತ್ತಿರುವುದು ಸಾರ್ವಜನಿಕ ವಲಯದಲ್ಲಿ ಪ್ರಶ್ನೆಗೆ ಈಡಾಗಿದೆ.

ಸಾರ್ವಜನಿಕರ ತಕರಾರು: ಯೋಜನೆ ಕಡಿತದ ಆತಂಕ

ಮನೆ ಮನೆಗೆ ತೆರಳಿ ಮಾಹಿತಿ ಪಡೆಯುವ ಸಿಬ್ಬಂದಿಗೆ ತಾಂತ್ರಿಕ ದೋಷಗಳಷ್ಟೇ ಅಲ್ಲದೆ, ಸಾರ್ವಜನಿಕರ ಲಭ್ಯತೆಯ ಕೊರತೆಯೂ ದೊಡ್ಡ ಸವಾಲಾಗಿದೆ. ಕೆಲವರು ವೈಯಕ್ತಿಕ ಮಾಹಿತಿ ನೀಡಲು ತಕರಾರು ತೆಗೆಯುತ್ತಿದ್ದಾರೆ. ಮತ್ತೊಂದೆಡೆ, ಸರ್ಕಾರಿ ನೌಕರರು ಹಾಗೂ ಆದಾಯ ತೆರಿಗೆ ಪಾವತಿದಾರರ ವಿವರಗಳನ್ನು ಪ್ರತ್ಯೇಕಿಸಿ, ಮುಂದಿನ ದಿನಗಳಲ್ಲಿ ಅವರಿಗೆ ಗೃಹಜ್ಯೋತಿ ಸೌಲಭ್ಯವನ್ನು ಕಡಿತಗೊಳಿಸಲು ಈ ಸಮೀಕ್ಷೆ ನಡೆಸಲಾಗುತ್ತಿದೆ ಎಂಬ ಆತಂಕ ಸಾರ್ವಜನಿಕರಲ್ಲಿ ದಟ್ಟವಾಗಿದೆ.

ಇದನ್ನೂ ಓದಿ: ಹರ್ಷ ತಂದ ಹೇಮಾವತಿ ಒಳಹರಿವು, ರೈತರಲ್ಲಿ ಮೂಡಿದ ಆಶಾಕಿರಣ

Leave a Reply

Your email address will not be published. Required fields are marked *