TOP NEWS

Dengue: ಸಿಲಿಕಾನ್ ಸಿಟಿಯಲ್ಲಿ ಮುಂಗಾರು ಮಳೆ ಸಿಂಚನ: ಮಕ್ಕಳಲ್ಲಿ ಹೆಚ್ಚಿದ ಡೆಂಗ್ಯೂ ಭೀತಿ, ಪೋಷಕರು ಹೈ ಅಲರ್ಟ್!

dengue case increasing in kids at Bengaluru doctors warns

ಬೆಂಗಳೂರಿನಲ್ಲಿ ಕಳೆದ ಕೆಲವು ದಿನಗಳಿಂದ ಸಂಜೆಯಾಗುತ್ತಿದ್ದಂತೆ ವರುಣನ ಆರ್ಭಟ ಜೋರಾಗಿದ್ದು, ಸುಡುವ ಬೇಸಿಗೆಯಿಂದ ಕಂಗಾಲಾಗಿದ್ದ ಜನರಿಗೆ ತಂಪಾದ ವಾತಾವರಣ ನೆಮ್ಮದಿ ತಂದಿದೆ. ಆದರೆ, ಈ ಆಹ್ಲಾದಕರ ಹವಾಮಾನದ ಬೆನ್ನಲ್ಲೇ ಸಾಂಕ್ರಾಮಿಕ ರೋಗಗಳ ತಲೆನೋವು ಶುರುವಾಗಿದೆ. ಶಾಲೆಗಳು ಪುನರಾರಂಭಗೊಳ್ಳುತ್ತಿರುವ ಈ ಸಂದರ್ಭದಲ್ಲೇ ರಾಜಧಾನಿಯಲ್ಲಿ ಡೆಂಗ್ಯೂ (Dengue) ಜ್ವರದ ಹಾವಳಿ ದಿಢೀರ್ ಹೆಚ್ಚಾಗಿದ್ದು, ಪೋಷಕರಲ್ಲಿ ಆತಂಕ ಮೂಡಿಸಿದೆ.

ನಿಂತ ನೀರೇ ಇದಕ್ಕೆ ಮುಖ್ಯ ಕಾರಣ

ಕಳೆದ ಸಾಲಿನಲ್ಲಿ ನಿಯಂತ್ರಣದಲ್ಲಿದ್ದ ಡೆಂಗ್ಯೂ, ಈ ಬಾರಿ ಮುಂಗಾರು ಆರಂಭದಲ್ಲೇ ಅಬ್ಬರಿಸುವ ಲಕ್ಷಣಗಳನ್ನು ತೋರಿಸುತ್ತಿದೆ. ನಗರದಲ್ಲಿ ಎಡೆಬಿಡದೆ ಸುರಿಯುತ್ತಿರುವ ಮಳೆಯಿಂದಾಗಿ ರಸ್ತೆ ಹಾಗೂ ಖಾಲಿ ಜಾಗಗಳಲ್ಲಿ ನೀರು ನಿಲ್ಲುತ್ತಿದ್ದು, ಇದು ಸೊಳ್ಳೆಗಳ ಸಂತಾನೋತ್ಪತ್ತಿಗೆ ಹಾಟ್‌ಸ್ಪಾಟ್ ಆಗಿ ಮಾರ್ಪಟ್ಟಿದೆ. ಇದರ ಪರಿಣಾಮವಾಗಿ ಪ್ರಮುಖವಾಗಿ ಶಾಲಾ ಮಕ್ಕಳಲ್ಲಿ ಡೆಂಗ್ಯೂ ಲಕ್ಷಣಗಳು ಹೆಚ್ಚಾಗಿ ಕಾಣಿಸಿಕೊಳ್ಳುತ್ತಿವೆ.

ವಾತಾವರಣದ ಏರುಪೇರಿನಿಂದಾಗಿ ಕೇವಲ ಡೆಂಗ್ಯೂ ಮಾತ್ರವಲ್ಲದೆ, ಸಾಮಾನ್ಯ ವೈರಲ್ ಜ್ವರ, ತೀವ್ರ ಕೆಮ್ಮು, ನೆಗಡಿ, ಗಂಟಲು ನೋವು ಮತ್ತು ವಾಂತಿಯಂತಹ ಆರೋಗ್ಯ ಸಮಸ್ಯೆಗಳೂ ವ್ಯಾಪಕವಾಗಿ ಹರಡುತ್ತಿವೆ. ಸದ್ಯ ನಗರದ ಆಸ್ಪತ್ರೆಗಳಲ್ಲಿ ಜ್ವರ ಸಂಬಂಧಿತ ಪ್ರಕರಣಗಳ ಸಂಖ್ಯೆ ಶೇಕಡಾ 15 ರಿಂದ 20 ರಷ್ಟು ಏರಿಕೆಯಾಗಿದೆ ಎಂದು ವೈದ್ಯರು ಆತಂಕ ವ್ಯಕ್ತಪಡಿಸಿದ್ದಾರೆ.

ಈ ಹಿನ್ನೆಲೆಯಲ್ಲಿ ಎಚ್ಚೆತ್ತುಕೊಂಡಿರುವ ಆರೋಗ್ಯ ಇಲಾಖೆ ಸಾರ್ವಜನಿಕರಿಗೆ ಅಗತ್ಯ ಮುನ್ನೆಚ್ಚರಿಕೆ ವಹಿಸಲು ಕಟ್ಟುನಿಟ್ಟಿನ ಮಾರ್ಗಸೂಚಿ ನೀಡಿದೆ. ಮನೆಗಳ ಸುತ್ತಮುತ್ತ ನೀರು ಸಂಗ್ರಹವಾಗದಂತೆ ಜಾಗ್ರತೆ ವಹಿಸುವುದು ಮತ್ತು ಮಕ್ಕಳಿಗೆ ಜ್ವರದ ಸಣ್ಣ ಲಕ್ಷಣಗಳು ಕಂಡುಬಂದರೂ ತಕ್ಷಣವೇ ವೈದ್ಯರ ಬಳಿ ತಪಾಸಣೆ ನಡೆಸುವುದು ಅತ್ಯಗತ್ಯ ಎಂದು ಜಾಗೃತಿ ಮೂಡಿಸಿದೆ.

ಇದನ್ನೂ ಓದಿ: ನಾಳೆ ತುಮರಿಯಲ್ಲಿ ಹವ್ಯಕ ಸಮಾಜ ಬಾಂಧವರಿಗಾಗಿ ವಿಶೇಷ ‘ಪ್ರತಿಬಿಂಬ’ ಕಾರ್ಯಕ್ರಮ ಆಯೋಜನೆ

Leave a Reply

Your email address will not be published. Required fields are marked *