ಬೆಂಗಳೂರು: ಪಶ್ಚಿಮ ಏಷ್ಯಾದಲ್ಲಿ ಬಿಕ್ಕಟ್ಟು ಎದುರಾಗಿರುವ ಹಿನ್ನಲೆಯಲ್ಲಿ ಕಾಳಸಂತೆಯಲ್ಲಿ ಅನಧಿಕೃತ ಸಿಲಿಂಡರ್ ಮಾರಾಟ ಮಾಡುವವರ ವಿರುದ್ಧ ನಿಗಾ ವಹಿಸುವಂತೆ , ಪೊಲೀಸ್ ಅಧಿಕಾರಿಗಳಿಗೆ ಸೂಚನೆ ನೀಡಲಾಗಿದೆ ಎಂದು ಆಹಾರ ಮತ್ತು ನಾಗರಿಕ ಸರಬರಾಜು ಸಚಿವ ಕೆ.ಎಚ್. ಮುನಿಯಪ್ಪ (KH Muniyappa) ವಿಧಾನ ಪರಿಷತ್ತಿನಲ್ಲಿಂದು ತಿಳಿಸಿದ್ದಾರೆ.
ವಾಣಿಜ್ಯಾತ್ಮಕ ಅಡುಗೆ ಅನಿಲ ಪೂರೈಕೆಗೆ ಸೂಚನೆ
ಶೂನ್ಯ ವೇಳೆಯಲ್ಲಿ , ಸದಸ್ಯರಾದ ಎಂ. ನಾಗರಾಜ್ ಮತ್ತು ಐವಾನ್ ಡಿಸೋಜಾ ಅವರ ಪ್ರಸ್ತಾಪಕ್ಕೆ ಉತ್ತರಿಸಿದ ಸಚಿವರು, ತೈಲ ಕಂಪನಿಗಳ ಅಧಿಕಾರಿಗಳೊಂದಿಗೆ ಸಭೆ ನಡೆಸಲಾಗಿದೆ. ಆಸ್ಪತ್ರೆ, ಹಾಸ್ಟೆಲ್ ಗಳು, ವಸತಿ ಶಾಲೆಗಳಿಗೆ, ಆದ್ಯತಾವಾರು, ವಾಣಿಜ್ಯಾತ್ಮಕ ಅಡುಗೆ ಅನಿಲ ಪೂರೈಸಲು ಸೂಚಿಸಲಾಗಿದೆ ಎಂದರು. ಅಡುಗೆ ಅನಿಲ ಸಮಸ್ಯೆಯಿಂದ ಪಾರಾಗಲು ಹೋಟೆಲ್ ಗಳು, ವಿದ್ಯುತ್ ಒಲೆ ಬಳಸುವ ಅಗತ್ಯವಿದೆ . ಸದ್ಯದ ಮಟ್ಟಿಗೆ ಹೋಟೆಲ್ ಗಳಿಗೆ ಸಿಲಿಂಡರ್ ಪೂರೈಕೆ ಕಷ್ಟವಾಗುತ್ತಿದ್ದು, ಮುಂದಿನ 10 ದಿನಗಳ ವರೆಗೆ ಹೋಟೆಲ್ ಮಾಲೀಕರು ಸಹಕಾರ ನೀಡುವುದು ಅಗತ್ಯವಿದೆ. ಹೀಗಾಗಿ ವಿದ್ಯುತ್ ಒಲೆ ಬಳಸುವುದು ಅನಿವಾರ್ಯವಾಗಿದೆ ಎಂದರು.
ಸಿಲುಕಿಕೊಂಡಿರುವ 10 ಹಡಗುಗಳು
ಹರ್ಮುಜ್ ಜಲಸಂಧಿಯಿಂದ ಈಗಾಗಲೇ ಎರಡು ಹಡಗುಗಳು ಭಾರತಕ್ಕೆ ಬಂದಿವೆ. ಇನ್ನೂ 10 ಹಡಗುಗಳು ಸಿಲುಕಿಕೊಂಡಿರುವ ಹಿನ್ನಲೆಯಲ್ಲಿ , ಅವುಗಳು ಬರುವ ತನಕ ಕಷ್ಟವಾಗಲಿದೆ ಎಂದು ಹೇಳಿದರು.
ಕನ್ನಡಪರ ಹೋರಾಟಗಾರ ವಾಟಾಳ್ ನಾಗರಾಜ್ ಅವರಿಗೆ , ಕನ್ನಡ ರಾಜ್ಯೋತ್ಸವ ಪ್ರಶಸ್ತಿಯನ್ನು ರಾಜ್ಯ ಸರ್ಕಾರ ನೀಡಲಿದೆ ಎಂದು ಕನ್ನಡ ಮತ್ತು ಸಂಸ್ಕೃತಿ ಸಚಿವ ಶಿವರಾಜ್ ತಂಗಡಗಿ ಹೇಳಿದ್ದಾರೆ. ಕಾಂಗ್ರೆಸ್ ಸದಸ್ಯ ರಮೇಶ್ ಬಾಬು ಪ್ರಸ್ತಾಪಕ್ಕೆ ಉತ್ತರ ನೀಡಿದ ಅವರು, ಕನ್ನಡ ಪರ ಹೋರಾಟ ಮಾಡುವವರಿಗೆ ಕನ್ನಡ ರಾಜ್ಯೋತ್ಸವ ಪ್ರಶಸ್ತಿ ನೀಡುವ ಕೆಲಸ ಮಾಡಲಾಗುತ್ತಿದೆ. ಈ ವರ್ಷ ಪ್ರಶಸ್ತಿ ಆಯ್ಕೆ ಸಮಿತಿಯ ಮುಂದೆ ,ವಾಟಾಳ್ ನಾಗರಾಜ್ ಅವರ ಹೆಸರು ಪ್ರಸ್ತಾಪ ಮಾಡಲಾಗುವುದು. ಜೊತೆಗೆ ಕನ್ನಡ ಹೋರಾಟಗಾರರ ಮೇಲಿನ ಪ್ರಕರಣಗಳನ್ನು ವಾಪಸ್ ಪಡೆಯುವ ಪ್ರಕ್ರಿಯೆ ನಡೆದಿದೆ. ಈ ಸಂಬಂಧ ಮುಖ್ಯಮಂತ್ರಿ ಅವರ ಗಮನಕ್ಕೆ ತಂದು ಮುಂದಿನ ಕ್ರಮ ಜರುಗಿಸಲಾಗುವುದು ಎಂದರು.
