ನವದೆಹಲಿ: ಪಶ್ಚಿಮ ಏಷ್ಯಾ ಸಂಘರ್ಷಕ್ಕೆ (West Asia War) ಶೀಘ್ರ ಕೊನೆ ಹಾಡಬೇಕು ಹಾಗೂ ಮಾತುಕತೆ ಮತ್ತು ರಾಜತಾಂತ್ರಿಕ ಮಾರ್ಗಗಳ ಮೂಲಕ ಪರಿಹಾರ ಕಂಡುಕೊಳ್ಳಬೇಕೆಂದು ಭಾರತ ಪುನರುಚ್ಚರಿಸಿದೆ.
ಮಲೇಷ್ಯಾ ಪ್ರಧಾನಿ ಜೊತೆ ಮೋದಿ ಮಾತುಕತೆ
ದೆಹಲಿಯ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ವಿದೇಶಾಂಗ ವಕ್ತಾರ ರಣಧೀರ್ ಜೈಸ್ವಾಲ್, ಪಶ್ಚಿಮ ಏಷ್ಯಾ ಪರಿಸ್ಥಿತಿ ಕುರಿತು ಓಮನ್ ಸುಲ್ತಾನ, ಫ್ರಾನ್ಸ್ ರಾಷ್ಟ್ರಪತಿ ಮತ್ತು ಮಲೇಷ್ಯಾ ಪ್ರಧಾನಿ ಅವರೊಂದಿಗೆ ಪ್ರಧಾನಿ ನರೇಂದ್ರ ಮೋದಿ ಮಾತುಕತೆ ನಡೆಸಿರುವುದಾಗಿ ತಿಳಿಸಿದರು.
ತೈಲಕ್ಕಾಗಿ ಭಾರತಕ್ಕೆ ಮೊರೆ
ಪಶ್ಚಿಮ ಏಷ್ಯಾ ಪರಿಸ್ಥಿತಿಯಿಂದಾಗಿ ಜಾಗತಿಕ ಇಂಧನ ವಲಯದಲ್ಲಿ ಸಮಸ್ಯೆ ತಲೆದೋರಿದ್ದು, ಬಾಂಗ್ಲಾ ದೇಶ, ಶ್ರೀಲಂಕಾ, ಮಾಲ್ಡೀವ್ಸ್ ಸೇರಿದಂತೆ ನೆರೆಯ ರಾಷ್ಟ್ರಗಳು ತೈಲ ಪೂರೈಕೆಗಾಗಿ ಭಾರತಕ್ಕೆ ಮನವಿ ಸಲ್ಲಿಸಿವೆ. ಕಳೆದ ಹಲವು ವರ್ಷಗಳಿಂದ ಭಾರತ ಈ ರಾಷ್ಟ್ರಗಳಿಗೆ ಸಂಸ್ಕರಿತ ತೈಲ ಪೂರೈಸುತ್ತಿದ್ದು, ಆಂತರಿಕ ಬೇಡಿಕೆ ಲಭ್ಯತೆ ಅನುಸಾರ ಈ ರಾಷ್ಟ್ರಗಳ ಮನವಿಗೆ ಸ್ಪಂದಿಸಲಾಗುವುದು ಎಂದು ತಿಳಿಸಿದರು. ಆಫ್ಘಾನಿಸ್ತಾನದ ನಾಗರಿಕ ನೆಲೆಗಳ ಮೇಲೆ ಪಾಕಿಸ್ತಾನ ಸೇನಾ ಕಾರ್ಯಾಚರಣೆ ಮೂಲಕ ಬರ್ಬರ ಕೃತ್ಯ ಎಸಗಿರುವುದನ್ನು ಭಾರತ ತೀವ್ರವಾಗಿ ಖಂಡಿಸುತ್ತದೆ ಎಂದು ಅವರು ಹೇಳಿದರು.
