ನವದೆಹಲಿ: ಪಶ್ಚಿಮ ಏಷ್ಯಾ ಸಂಘರ್ಷ ಪರಿಸ್ಥಿತಿ ಹಿನ್ನೆಲೆಯಲ್ಲಿ ದೇಶದ ರಫ್ತು (Import) ಉತ್ತೇಜನಕ್ಕಾಗಿ ವಿವಿಧ ಪರ್ಯಾಯ ಕ್ರಮ ಕೈಗೊಳ್ಳಲಾಗಿದೆ ಎಂದು ವಾಣಿಜ್ಯ ಸಚಿವಾಲಯದ ಕಾರ್ಯದರ್ಶಿ ರಾಜೇಶ್ ಅಗರ್ ವಾಲ್ ಹೇಳಿದ್ದಾರೆ.
ಸರಕು ಸಾಗಣೆಯಲ್ಲಿ ವ್ಯತ್ಯಯ
ದೆಹಲಿಯಲ್ಲಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಅವರು, ಪಶ್ಚಿಮ ಏಷ್ಯಾ ಸಂಘರ್ಷ ಪರಿಸ್ಥಿತಿಯಿಂದ ಜಾಗತಿಕವಾಗಿ ಸುಮಾರು 18 ಭೌಗೋಳಿಕ ಪ್ರದೇಶಗಳ ಮೇಲೆ ಪರಿಣಾಮ ಉಂಟಾಗಿದ್ದು, ಕಳೆದ ಒಂದು ತಿಂಗಳಿನಿಂದ ಸರಕು-ಸಾಗಣೆ ವ್ಯತ್ಯಯವಾಗಿದೆ ಎಂದರು. ಸರಕು ಹೊತ್ತ ಹಲವು ಹಡಗುಗಳು ಗುರಿ ತಲುಪದೆ ವಿವಿಧ ಸಾಗರಗಳಲ್ಲಿ ಸಿಲುಕಿವೆ. ಹರ್ಮೂಜ್ ಜಲಸಂಧಿಯಲ್ಲಿ ಸಮಸ್ಯೆ ತಲೆದೋರಿರುವುದರಿಂದ ಅನ್ಯ ಮಾರ್ಗಗಳ ಮೂಲಕ ಸರಕು ಸಾಗಣೆ ನಡೆಯುತ್ತಿದ್ದು, ಲಾಜಿಸ್ಟಿಕ್ ವೆಚ್ಚ ಹೆಚ್ಚಾಗಿದೆ. ಇಂತಹ ಪರಿಸ್ಥಿತಿಯಲ್ಲಿ ದೇಶದ ರಫ್ತು ಹೆಚ್ಚಿಸಲು ಮತ್ತು ರಫ್ತುದಾರರಿಗೆ ಅನುಕೂಲ ಮಾಡಿಕೊಡಲು ಸರ್ಕಾರ ಹಲವು ಕ್ರಮ ಕೈಗೊಳ್ಳುತ್ತಿದೆ ಎಂದು ತಿಳಿಸಿದರು.
ಕೇಂದ್ರ ಸರ್ಕಾರದಿಂದ ಹೊಸ ಸೌಲಭ್ಯ
ವಿದೇಶಿ ವ್ಯಾಪಾರಗಳ ಮಹಾ ನಿರ್ದೇಶಕರಾದ ಲವ್ ಅಗರ್ವಾಲ್ ಮಾತನಾಡಿ, ಸರ್ಕಾರವು ಮಧ್ಯ ಪ್ರಾಚ್ಯ ಸಂಘರ್ಷದಿಂದ ಸಂಕಷ್ಟಕ್ಕೀಡಾಗಿರುವ ಭಾರತೀಯ ರಫ್ತುದಾರರಿಗೆ ಬೆಂಬಲ ನೀಡಲು ಸರ್ಕಾರವು ರಫ್ತು ಉತ್ತೇಜನಕ್ಕಾಗಿ ಸ್ಥಿತಿಸ್ಥಾಪಕತ್ವ ಮತ್ತು ಸರಕು ಮಧ್ಯಸ್ಥಿಕೆ ಯೋಜನೆಯನ್ನು ಆರಂಭಿಸಿದೆ. ಯೋಜನೆಯಡಿ ಸಮುದ್ರ ಹಾಗೂ ವಾಯು ಮಾರ್ಗವಾಗಿ ಕಳುಹಿಸಿಕೊಡುವ ಸಾಗಣೆಗಳು ಹಾಗೂ ಮಧ್ಯ ಪ್ರಾಚ್ಯ ವಲಯದ ಪ್ರಮುಖ ಪ್ರದೇಶಗಳಿಗೆ ರವಾನಿಸುವ ಹಾಗೂ ಅಲ್ಲಿಂದ ಬರುವ ಸರಕುಗಳು ಫೆಬ್ರವರಿ 14ರಿಂದ ಮಾರ್ಚ್ 15ರೊಳಗಿನ ಬಿಲ್ ಗಳನ್ನು ಹೊಂದಿದ್ದಲ್ಲಿ ಅವುಗಳನ್ನು ಯೋಜನೆಯಡಿ ಪರಿಗಣಿಸಲಾಗುವುದು ಎಂದರು. ಯಾವುದೇ ಪ್ರೀಮಿಯಂ ಹೆಚ್ಚಳವಿಲ್ಲದೆ ರಪ್ತುದಾರರು ತಮ್ಮ ಸರಕುಗಳಿಗೆ ಶೇಕಡ 100ರಷ್ಟು ಪರಿಹಾರದ ಖಾತರಿಯನ್ನು ಪಡೆಯಲಿದ್ದಾರೆ. ಪ್ರೀಮಿಯಂ ನ ಹೆಚ್ಚುವರಿ ವೆಚ್ಚವನ್ನು ಸರ್ಕಾರವೇ ಭರಿಸಲಿದೆ ಎಂದು ತಿಳಿಸಿದ್ದಾರೆ.
