ಚೆನ್ನೈ: ತಮಿಳುನಾಡಿನ ಚುನಾವಣಾ ಅಖಾಡದಲ್ಲಿ ದ್ರಾವಿಡ ಪಕ್ಷಗಳ ದಶಕಗಳ ಆಧಿಪತ್ಯವನ್ನು ಅಲುಗಾಡಿಸಿರುವ ನಟ ವಿಜಯ್, (Vijay) ಈಗ ಆಡಳಿತಾತ್ಮಕ ಸಿದ್ಧತೆಗಳನ್ನು ಆರಂಭಿಸಿದ್ದಾರೆ. ಮೂಲಗಳ ಪ್ರಕಾರ, ತಾವು ಗೆದ್ದಿರುವ ಎರಡು ಕ್ಷೇತ್ರಗಳ ಪೈಕಿ ಪೆರಂಬೂರು ಕ್ಷೇತ್ರವನ್ನು ತಮ್ಮ ಬಳಿಯೇ ಉಳಿಸಿಕೊಂಡು, ತಿರುಚಿ (ಪೂರ್ವ) ಕ್ಷೇತ್ರದ ಶಾಸಕ ಸ್ಥಾನಕ್ಕೆ ರಾಜೀನಾಮೆ ನೀಡಲು ಅವರು ಚಿಂತನೆ ನಡೆಸಿದ್ದಾರೆ ಎನ್ನಲಾಗಿದೆ.
ಪೆರಂಬೂರು ಆಯ್ಕೆಗೆ ಕಾರಣವೇನು? ರಾಜಧಾನಿ ಚೆನ್ನೈಗೆ ಹತ್ತಿರವಿರುವ ಪೆರಂಬೂರು ಕ್ಷೇತ್ರವನ್ನು ಆಯ್ದುಕೊಳ್ಳುವ ಮೂಲಕ, ಆಡಳಿತಾತ್ಮಕ ಕೆಲಸಗಳನ್ನು ಮತ್ತು ಕ್ಷೇತ್ರದ ಜವಾಬ್ದಾರಿಗಳನ್ನು ಸಮರ್ಥವಾಗಿ ನಿಭಾಯಿಸಬಹುದು ಎಂಬುದು ವಿಜಯ್ ಅವರ ಲೆಕ್ಕಾಚಾರವಾಗಿದೆ. ಡಿಎಂಕೆಯ ಭದ್ರಕೋಟೆ ಎನಿಸಿಕೊಂಡಿದ್ದ ಪೆರಂಬೂರಿನಲ್ಲಿ ಸುಮಾರು 53,715 ಮತಗಳ ಬೃಹತ್ ಅಂತರದಿಂದ ಗೆಲ್ಲುವ ಮೂಲಕ ವಿಜಯ್ ತಮ್ಮ ಜನಪ್ರಿಯತೆಯನ್ನು ಸಾಬೀತುಪಡಿಸಿದ್ದಾರೆ. ಅದೇ ರೀತಿ, ತಿರುಚಿ (ಪೂರ್ವ) ಕ್ಷೇತ್ರದಲ್ಲೂ ಅದ್ಭುತ ಜಯ ಸಾಧಿಸುವ ಮೂಲಕ ತಮಗೆ ಕೇವಲ ನಗರ ಪ್ರದೇಶಗಳಲ್ಲಿ ಮಾತ್ರವಲ್ಲದೆ ರಾಜ್ಯಾದ್ಯಂತ ಬೆಂಬಲವಿದೆ ಎಂಬ ಸಂದೇಶವನ್ನು ರವಾನಿಸಿದ್ದಾರೆ.
ಇತಿಹಾಸ ಮರುಕಳಿಸಿದ ಕ್ಷಣ: 1991ರಲ್ಲಿ ಬೆಳ್ಳಿತೆರೆಯಿಂದ ಬಂದು ತಮಿಳುನಾಡಿನ ಮುಖ್ಯಮಂತ್ರಿಯಾಗಿದ್ದ ಜಯಲಲಿತಾ ಅವರ ಹಾದಿಯಲ್ಲೇ ಈಗ ವಿಜಯ್ ಕೂಡ ಸಾಗುತ್ತಿದ್ದಾರೆ. 234 ಸ್ಥಾನಗಳ ಪೈಕಿ ವಿಜಯ್ ಅವರ ಟಿವಿಕೆ ಪಕ್ಷ 108 ಕ್ಷೇತ್ರಗಳಲ್ಲಿ ಜಯಗಳಿಸಿದ್ದು, ಅಧಿಕಾರದ ಗದ್ದುಗೆ ಏರಲು ಬೇಕಾದ ಮ್ಯಾಜಿಕ್ ನಂಬರ್ ತಲುಪಲು ಕಾಂಗ್ರೆಸ್ ಅಥವಾ ಎಡಪಕ್ಷಗಳ ಬೆಂಬಲ ಪಡೆಯುವ ಸಾಧ್ಯತೆ ದಟ್ಟವಾಗಿದೆ.
ತಮಿಳುನಾಡಿನ ಹಳೆಯ ರಾಜಕೀಯ ಶೈಲಿಯಿಂದ ಬೇಸತ್ತಿದ್ದ ಮತದಾರರು, ವಿಜಯ್ ಅವರಿಗೆ ನೀಡಿದ ಈ ಬೆಂಬಲವು ರಾಜ್ಯ ರಾಜಕಾರಣದಲ್ಲಿ ಹೊಸ ಕ್ರಾಂತಿಗೆ ನಾಂದಿ ಹಾಡಿದೆ. ಶೀಘ್ರದಲ್ಲೇ ವಿಜಯ್ ಅವರು ತಮ್ಮ ನಿರ್ಧಾರವನ್ನು ಅಧಿಕೃತವಾಗಿ ಪ್ರಕಟಿಸಲಿದ್ದಾರೆ ಎಂದು ನಿರೀಕ್ಷಿಸಲಾಗಿದೆ.
