ಬೆಂಗಳೂರು: ಗ್ರೇಟರ್ ಬೆಂಗಳೂರು ಪ್ರಾಧಿಕಾರದ ಚುನಾವಣೆಗೆ ಬ್ಯಾಲೆಟ್ ಬಳಕೆಗೆ ಕೇಂದ್ರ ಸಚಿವ ಪ್ರಹ್ಲಾದ್ ಜೋಶಿ (Prahlad Joshi) ವಿರೋಧ ವ್ಯಕ್ತಪಡಿಸಿದ್ದು, ಈ ವಿಚಾರವಾಗಿ ಟ್ವೀಟ್ ಮಾಡಿದ್ದಾರೆ.
ದುರಂತದ ವಿಷಯ ಎಂದ ಜೋಶಿ
ತಮ್ಮ ಟ್ವೀಟ್ನಲ್ಲಿ ರಾಜ್ಯ ಸರ್ಕಾರದ ನಿರ್ಧಾರಕ್ಕೆ ಅವರು ವಿರೋಧ ವ್ಯಕ್ತಪಡಿಸಿದ್ದು, ಸ್ಥಳೀಯ ಸಂಸ್ಥೆಗಳ ಚುನಾವಣೆಗಳನ್ನು ಮತ ಪತ್ರಗಳನ್ನು ಬಳಸಿ ನಡೆಸಲು ನಿರ್ಧರಿಸಿರುವುದು ನಿಜಕ್ಕೂ ದುರಂತದ ವಿಷಯ ಎಂದು ಹೇಳಿದ್ದಾರೆ. ಅಲ್ಲದೇ, ದಶಕಗಳ ಪ್ರಗತಿಯನ್ನು ಹಳ್ಳಗೆಡಿಸುವ ಪ್ರಯತ್ನ ರಾಜ್ಯ ಸರ್ಕಾರ ಮಾಡುತ್ತಿದೆ ಎಂದು ರಾಜ್ಯ ಕಾಂಗ್ರೆಸ್ ಸರ್ಕಾರದ ವಿರುದ್ಧ ಆರೋಪ ಮಾಡಿದ್ದಾರೆ.
ಏನಿದೆ ಜೋಶಿ ಟ್ವೀಟ್ನಲ್ಲಿ?
ಚುನಾವಣಾ ಬೂತ್ಗಳಲ್ಲಿ ನಡೆಯುತ್ತಿದ್ದ ಅಕ್ರಮಗಳು ಇವಿಎಂ ಪರಿಚಯದ ಬಳಿಕ ಕಾಣೆಯಾಗಿದೆ. ಕರ್ನಾಟಕ ರಾಜ್ಯ ಇಲಾಖೆಯೊಂದರ ಇತ್ತೀಚಿನ ಸಮೀಕ್ಷೆ ನಡೆದಿದೆ. KAP ಸರ್ವೆಯಲ್ಲಿ ಸಹ ಜನ ಇವಿಎಂಗಳನ್ನು ನಂಬಿರುವುದಾಗಿ ಸ್ಪಷ್ಟಿಕರಿಸಿದೆ. 1980 ರ ದಶಕದಲ್ಲಿ ಬೆಂಗಳೂರು ಇವಿಎಂಗಳನ್ನು ಪ್ರಾಯೋಗಿಕವಾಗಿ ಬಳಸಿದ ಮೊದಲ ನಗರಗಳಲ್ಲಿ ಒಂದಾಗಿದ್ದು. ಭಾರತದ ಇವಿಎಂ ಕ್ರಾಂತಿಯಲ್ಲಿ ಕರ್ನಾಟಕದ ಕೊಡುಗೆ ಅಪಾರವಾಗಿತ್ತು ಮತ್ತು 1990 ರ ದಶಕದಲ್ಲಿ ಇವಿಎಂ ಅಳವಡಿಸಿಕೊಳ್ಳಲು ಕಾರಣವಾಯಿತು. ನಂತರದಲ್ಲಿ, ವಿವಿಪ್ಯಾಟ್ ಹೊಂದಿರುವ ಇವಿಎಂಗಳು ಭಾರತದ ಚುನಾವಣಾ ಪ್ರಕ್ರಿಯೆಯನ್ನು ಮತ್ತಷ್ಟು ಬಲಿಷ್ಠಗೊಳಿಸಿದೆ. ರಾಜ್ಯದ ಕೊಡುಗೆಯನ್ನು ನಿರ್ಲಕ್ಷಿಸಿ, ದೆಹಲಿಯಲ್ಲಿರುವ ತನ್ನ ಹೈಕಮಾಂಡ್ ಮೆಚ್ಚಿಸಲು ಹಾಗೂ ಅವರ ಆಧಾರರಹಿತ ಆರೋಪಗಳಿಗೆ ಕುಣಿಯುತ್ತ ಕರ್ನಾಟಕ ರಾಜ್ಯ ಸರ್ಕಾರ ಮತಪತ್ರಗಳನ್ನು ಬಳಸಲು ತೀರ್ಮಾನಿಸಿರುವುದು ಅತ್ಯಂತ ನಾಚಿಕೆಗೇಡಿನ ಸಂಗತಿ ಎಂದು ಜೋಶಿ ತಮ್ಮ ಟ್ವೀಟ್ನಲ್ಲಿ ಕಿಡಿಕಾರಿದ್ದಾರೆ.
