ನವದೆಹಲಿ: ಪಶ್ಚಿಮ ಬಂಗಾಳದಲ್ಲಿ ನಡೆಯುತ್ತಿರುವ ಮತದಾರರ ಪಟ್ಟಿಯ ವಿಶೇಷ ತೀವ್ರ ಪರಿಷ್ಕರಣೆ (ಎಸ್ಐಆರ್) ಅನ್ನು ಪ್ರಶ್ನಿಸಿ ಸಲ್ಲಿಸಲಾದ ಅರ್ಜಿಯನ್ನು ವಾದಿಸಲು ಸಿಎಂ ಮಮತಾ ಬ್ಯಾನರ್ಜಿ(Mamata Banerjee) ಸ್ವತಃ ಆಗಮಿಸಿದ್ದು, ಈ ಸಮಯದಲ್ಲಿ ಚುನಾವಣಾ ಆಯೋಗದ ಮೇಲೆ ಹರಿಹಾಯ್ದಿದ್ದಾರೆ.
ಚುನಾವಣಾ ಆಯೋಗದ ಮೇಲೆ ಆರೋಪಗಳ ಸುರಿಮಳೆ
ಸಿಜೆಐ ಸೂರ್ಯ ಕಾಂತ್ ಅವರ ಮುಂದೆ ತಮ್ಮ ವಾದವನ್ನು ಮಂಡಿಸಲು ಮಮತಾ ಅವರು ಐದು ನಿಮಿಷಗಳ ಸಮಯ ಕೇಳಿದರು. ಸಿಜೆಐ ಒಪ್ಪಿಕೊಂಡು ಅವರಿಗೆ 15 ನಿಮಿಷಗಳ ಅವಕಾಶ ನೀಡಿದರು. ಈ ಸಮಯದಲ್ಲಿ ಚುನಾವಣಾ ಆಯೋಗದ ಮೇಲೆ ಮಮತಾ ಅವರು ಆರೋಪಗಳ ಸುರಿಮಳೆ ಸುರಿಸಿದ್ದು, ಸಮಸ್ಯೆ ಏನೆಂದರೆ, ನಮಗೆ ಎಲ್ಲಿಯೂ ನ್ಯಾಯ ಸಿಗುವುದಿಲ್ಲ. ನಾನು ಚುನಾವಣಾ ಆಯೋಗಕ್ಕೆ ಆರು ಬಾರಿ ಪತ್ರ ಬರೆದಿದ್ದರೂ ಇನ್ನೂ ಯಾವುದೇ ಉತ್ತರ ಬಂದಿಲ್ಲ ಎಂದು ಹೇಳಿದ್ದಾರೆ.
ನ್ಯಾಯಮೂರ್ತಿಗಳಾದ ಜೋಯ್ಮಲ್ಯ ಬಾಗ್ಚಿ ಮತ್ತು ವಿಎಂ ಪಂಚೋಲಿ ಅವರನ್ನೂ ಒಳಗೊಂಡ ಪೀಠವು, ಬ್ಯಾನರ್ಜಿಯವರ ಮನವಿ ಒಪ್ಪಿಕೊಂಡಿದ್ದು, ಪ್ರತಿಯೊಂದು ಸಮಸ್ಯೆಗೂ ಪರಿಹಾರವಿದೆ ಎಂದು ಭರವಸೆ ನೀಡಿದೆ.
ಚುನಾವಣಾ ಆಯೋಗಕ್ಕೆ ನೋಟಿಸ್ ಜಾರಿ
ನ್ಯಾಯಾಲಯವು ಚುನಾವಣಾ ಆಯೋಗಕ್ಕೆ ನೋಟಿಸ್ ಜಾರಿ ಮಾಡಿದ್ದು, ಎಸ್ಐಆರ್ ನೋಟಿಸ್ಗಳನ್ನು ಕಳುಹಿಸುವಾಗ ಜಾಗರೂಕರಾಗಿರಲು ಕೇಳಿದೆ. ಬ್ಯಾನರ್ಜಿ ಅವರ ಲಿಖಿತ ಅರ್ಜಿಯ ಮೇರೆಗೆ ನಿಮ್ಮ ಅಧಿಕಾರಿಗಳಿಗೆ ಸ್ವಲ್ಪ ಸಂವೇದನಾಶೀಲರಾಗಿರಲು ಹೇಳಿ ಎಂದು ಚುನಾವಣಾ ಆಯೋಗಕ್ಕೆ ತಿಳಿಸಿದ್ದು, ನೊಬೆಲ್ ಪ್ರಶಸ್ತಿ ವಿಜೇತ ಅಮರ್ತ್ಯ ಸೇನ್, ಖ್ಯಾತ ಬಂಗಾಳಿ ಕವಿ ಜಾಯ್ ಗೋಸ್ವಾಮಿ ಮತ್ತು ತೃಣಮೂಲ ಸಂಸದ ದೀಪಕ್ ಅಧಿಕಾರಿ ಸೇರಿದಂತೆ ಪ್ರಮುಖ ವ್ಯಕ್ತಿಗಳಿಗೆ ಎಸ್ಐಆರ್ ನೋಟಿಸ್ಗಳನ್ನು ಕಳುಹಿಸಲಾಗಿದೆ ಎಂದು ತಿಳಿಸಿದೆ.
ಇದನ್ನೂ ಓದಿ: ಭಾರತದ ಮೇಲಿನ ತೆರಿಗೆ ಕಡಿಮೆ ಮಾಡಿದ ಅಮೆರಿಕ, ರಷ್ಯಾದಿಂದ ತೈಲ ಆಮದು ನಿಲ್ಲಿಸಲಿದೆಯಾ ಮೋದಿ ಸರ್ಕಾರ?
