ನವದೆಹಲಿ: ಶಿಕ್ಷಣ ವಲಯದಲ್ಲಿ ಕೃತಕ ಬುದ್ಧಿಮತ್ತೆಯ ಬಳಕೆಯನ್ನು ಸಕ್ರಿಯವಾಗಿ ಬಲಪಡಿಸಲು ಸರ್ಕಾರ ಸಕಲ ಕ್ರಮ ಕೈಗೊಂಡಿದೆ ಎಂದು ಶಿಕ್ಷಣ ಸಚಿವ ಧರ್ಮೇಂದ್ರ ಪ್ರಧಾನ್ (Dharmendra Pradhan) ಹೇಳಿದ್ದಾರೆ.
ದೇಶದಲ್ಲಿ ಅದ್ಭುತ ಪ್ರತಿಭೆಗಳಿವೆ
ದೆಹಲಿಯಲ್ಲಿ ಎರಡು ದಿನಗಳ ಭಾರತ್ ಬೋಧನ್ ಎಐ ಸಮಾವೇಶ ಉದ್ದೇಶಿಸಿ ಅವರು, ಎಐ ವಲಯದಲ್ಲಿ ರಾಷ್ಟ್ರ ಸಶಕ್ತ ಮತ್ತು ಸಮೃದ್ಧ ಪ್ರತಿಭೆಗಳನ್ನು ಹೊಂದಿದೆ ಎಂದರು. ಮೂರನೇ ತರಗತಿಯಿಂದ ಸ್ನಾತಕೋತ್ತರ ಸಂಶೋಧನೆ ಹಂತದವರೆಗೆ ಎಐ ಅನ್ನು ನಾವೀನ್ಯತೆಯ ಮಾದರಿ ಹಾಗೂ ಸಂಪರ್ಕ ಕಾರ್ಯತಂತ್ರವಾಗಿ ಅಳವಡಿಸಲಾಗುವುದು. ಅಲ್ಲದೇ, ದೇಶದ ವಿದ್ಯಾರ್ಥಿಗಳು ಮತ್ತು ವೃತ್ತಿಪರ ಯುವಜನರಿಗೆ ಅಗತ್ಯ ಕೌಶಲ್ಯ ತರಬೇತಿ ನೀಡಲಾಗುವುದು ಎಂದರು.
80 ಕೋಟಿ ಜನರಿಗೆ ಅಗತ್ಯ ವೃತ್ತಿಪರ ತರಬೇತಿ
ದೇಶದಲ್ಲಿ ಪ್ರಸ್ತುತ 31 ಕೋಟಿ ವಿದ್ಯಾರ್ಥಿಗಳು ಹಾಗೂ 50 ಕೋಟಿ ದುಡಿಯಲು ಸಮರ್ಥ ಯುವ ಜನರು ಸೇರಿದಂತೆ ಒಟ್ಟು 80 ಕೋಟಿ ಜನರಿಗೆ ಅಗತ್ಯ ವೃತ್ತಿಪರ ಮತ್ತು ಕೌಶಲ್ಯ ತರಬೇತಿ ನೀಡಲು ಯೋಜನೆ ರೂಪಿಸಲಾಗಿದೆ. ದೇಶಾದ್ಯಂತ 1 ಕೋಟಿ ಶಾಲಾ ಶಿಕ್ಷಕರಿದ್ದು, 15 ಲಕ್ಷ ಶಿಕ್ಷಣ ಸಂಸ್ಥೆಗಳಿವೆ. ಈ ಪೈಕಿ 17 ಸಾವಿರ ಉನ್ನತ ಶಿಕ್ಷಣ ಸಂಸ್ಥೆಗಳಿವೆ. ಇವುಗಳನ್ನು ಕೌಶಲ್ಯಾಭಿವೃದ್ಧಿಯಲ್ಲಿ ಭಾಗೀದಾರರನ್ನಾಗಿ ಮಾಡಲಾಗಿದೆ ಎಂದರು
