ನವದೆಹಲಿ: ಪಶ್ಚಿಮ ಬಂಗಾಳದ ರಾಜಕೀಯ ಇತಿಹಾಸದಲ್ಲಿ ಇಂದು ಹೊಸ ಶಕೆ ಆರಂಭವಾಗಿದ್ದು, ಮಮತಾ ಬ್ಯಾನರ್ಜಿ ಅವರ ಸುದೀರ್ಘ ಆಳ್ವಿಕೆಗೆ ಬ್ರೇಕ್ ಹಾಕುವಲ್ಲಿ ಬಿಜೆಪಿ ಯಶಸ್ವಿಯಾಗಿದೆ. ಈ ಗೆಲುವಿನೊಂದಿಗೆ ‘ಚುನಾವಣಾ ಚಾಣಕ್ಯ’ ಎಂದೇ ಖ್ಯಾತರಾದ ಅಮಿತ್ ಶಾ (Amit Shah) ಅವರು ಈ ಹಿಂದೆ ನೀಡಿದ್ದ ಹೇಳಿಕೆ ಅಕ್ಷರಶಃ ನಿಜವಾಗಿದ್ದು, ಅವರ ರಾಜಕೀಯ ಲೆಕ್ಕಾಚಾರ ಎಷ್ಟು ಕರಾರುವಕ್ಕು ಎಂಬುದು ಮತ್ತೊಮ್ಮೆ ಸಾಬೀತಾಗಿದೆ.
ಫಲಿಸಿದ ಶಾ ರಣತಂತ್ರ: ಏಪ್ರಿಲ್ 24ರಂದು ಕೋಲ್ಕತ್ತಾದಲ್ಲಿ ಮಾತನಾಡಿದ್ದ ಅಮಿತ್ ಶಾ, “ಅಂಗ, ಬಂಗ ಮತ್ತು ಕಳಿಂಗ” (ಬಿಹಾರ, ಬಂಗಾಳ ಮತ್ತು ಒಡಿಶಾ) ಭೂಭಾಗದಲ್ಲಿ ಬಿಜೆಪಿ ಅಧಿಪತ್ಯ ಸ್ಥಾಪಿಸಲಿದೆ ಎಂದು ಭವಿಷ್ಯ ನುಡಿದಿದ್ದರು. ಅಂದು ಅವರು ಹೇಳಿದಂತೆಯೇ, ಈ ಮೂರೂ ಪೂರ್ವ ರಾಜ್ಯಗಳಲ್ಲಿ ಬಿಜೆಪಿ ಈಗ ಅತ್ಯಂತ ಶಕ್ತಿಶಾಲಿಯಾಗಿ ಹೊರಹೊಮ್ಮಿದೆ. 1970ರ ದಶಕದ ನಂತರ ಇದೇ ಮೊದಲ ಬಾರಿಗೆ ಈ ಭಾಗದಲ್ಲಿ ಒಂದೇ ಪಕ್ಷವು ಇಷ್ಟೊಂದು ಪ್ರಭಾವಶಾಲಿಯಾಗಿ ಬೆಳೆದಿರುವುದು ವಿಶೇಷ.
ಸತತ ಪರಿಶ್ರಮಕ್ಕೆ ಸಂದ ಜಯ: 2021ರ ಚುನಾವಣೆಯ ಸೋಲು ಅಥವಾ ನಂತರದ ಹಿನ್ನಡೆಗಳಿಂದ ಅಮಿತ್ ಶಾ ಎದೆಗುಂದಿರಲಿಲ್ಲ. ಬಂಗಾಳದ ಪ್ರತಿ ಹಳ್ಳಿಯಲ್ಲೂ ಪಕ್ಷದ ಸಂಘಟನೆಯನ್ನು ಬಲಪಡಿಸುತ್ತಾ, ದೀದಿ ಸರ್ಕಾರದ ವಿರುದ್ಧ ಜನರಲ್ಲಿ ಜಾಗೃತಿ ಮೂಡಿಸುವಲ್ಲಿ ಅವರು ಯಶಸ್ವಿಯಾದರು. “ಬೈ ಬೈ ದೀದಿ” ಎಂಬ ಅವರ ಘೋಷಣೆ ಇಂದು ಬಂಗಾಳದ ಮತದಾರರ ಧ್ವನಿಯಾಗಿ ಬದಲಾಗಿದೆ. 15 ವರ್ಷಗಳ ಮಮತಾ ಬ್ಯಾನರ್ಜಿ ಅವರ ಭದ್ರಕೋಟೆಯನ್ನು ಧೂಳೀಪಟ ಮಾಡುವಲ್ಲಿ ಶಾ ಅವರ ತಳಮಟ್ಟದ ಸಂಘಟನಾ ಶಕ್ತಿ ಪ್ರಮುಖ ಪಾತ್ರ ವಹಿಸಿದೆ.
ಬಂಗಾಳದಲ್ಲಿ ಕೇಸರಿ ಅಲೆ: ಚುನಾವಣಾ ಆಯೋಗದ ಅಂಕಿ-ಅಂಶಗಳು ಬಿಜೆಪಿಯ ಭರ್ಜರಿ ಮುನ್ನಡೆಯನ್ನು ದೃಢೀಕರಿಸುತ್ತಿದ್ದಂತೆ, ದೇಶದ ಪೂರ್ವ ದಿಕ್ಕಿನಲ್ಲಿ ಕೇಸರಿ ಯುಗ ಆರಂಭವಾದಂತಾಗಿದೆ. ಅಮಿತ್ ಶಾ ಅವರ ಈ ‘ಪರ್ಫೆಕ್ಟ್’ ಪ್ಲಾನಿಂಗ್ ಬಿಜೆಪಿಯನ್ನು ಕೇವಲ ಒಂದು ಪಕ್ಷವಾಗಿ ಮಾತ್ರವಲ್ಲದೆ, ಬಂಗಾಳದ ಬದಲಾವಣೆಯ ಶಕ್ತಿಯಾಗಿ ರೂಪಿಸಿದೆ. ಈ ಗೆಲುವು ರಾಷ್ಟ್ರಮಟ್ಟದಲ್ಲಿ ಅಮಿತ್ ಶಾ ಅವರ ವರ್ಚಸ್ಸನ್ನು ಮತ್ತಷ್ಟು ಹೆಚ್ಚಿಸಿದೆ.
ಇದನ್ನೂ ಓದಿ: ಅಡುಗೆ ಅನಿಲ ನಿಯಮಗಳಲ್ಲಿ ಭಾರಿ ಬದಲಾವಣೆ: ಎಲ್ಪಿಜಿ ಮತ್ತು ಪೈಪ್ಡ್ ಗ್ಯಾಸ್ ಎರಡನ್ನೂ ಹೊಂದುವಂತಿಲ್ಲ!
