ಬೆಂಗಳೂರು: ತೊಗರಿಬೇಳೆ ಉತ್ಪಾದನೆಯಲ್ಲಿ ಮುಂಚೂಣಿಯಲ್ಲಿರುವ ಕರ್ನಾಟಕ ಸಂಸ್ಕರಣೆಗಾಗಿ 35 ಬೇಳೆ ಗಿರಣಿಗಳನ್ನು ಸ್ಥಾಪಿಸಬೇಕೆಂದು ಕೇಂದ್ರ ಕೃಷಿ ಸಚಿವ ಶಿವರಾಜ್ ಸಿಂಗ್ ಚೌಹಾಣ್ (Shivraj Singh) ಸೂಚಿಸಿದ್ದಾರೆ.
10 ಸಾವಿರ ರೂಪಾಯಿ ಪ್ರೋತ್ಸಾಹ ಧನ
ಬೆಂಗಳೂರಿನಲ್ಲಿ ನಿನ್ನೆ ಅಂತಾರಾಷ್ಟ್ರೀಯ ವಾಣಿಜ್ಯ ಮೇಳ – ಉತ್ಪಾದನೋತ್ತರ ಕೃಷಿ, ರೈತರ ಸಬಲೀಕರಣ ಕಾರ್ಯಕ್ರಮದಲ್ಲಿ ಅವರು ಮಾತನಾಡಿದ್ದು, ರೂಪಾಯಿ ಸಹಾಯ ಧನ ನೀಡಲಾಗುವುದು ಎಂದು ಕೇಂದ್ರ ಸಚಿವರು ಈ ಸಂದರ್ಭದಲ್ಲಿ ಪ್ರಕಟಿಸಿದರು. ಇನ್ನು ಕರ್ನಾಟಕ ತೊಗರಿಬೇಳೆ ಉತ್ಪಾದನೆಯಲ್ಲಿ ಅಗ್ರಸ್ಥಾನದಲ್ಲಿದೆ. ಈ ಬೆಳೆಯ ಎಕರೆವಾರು ಇಳುವರಿಯ ಉತ್ಪಾದಕತೆ ಹೆಚ್ಚಿಸಲು ಕೇಂದ್ರ ಸರ್ಕಾರ ತಾಂತ್ರಿಕ ಸಹಯೋಗ ನೀಡಲಿದೆ. ಉತ್ತಮ ಇಳುವರಿಗೆ ಉತ್ತಮ ಬೀಜ ಅಗತ್ಯವಿದೆ. ಈ ಹಿನ್ನೆಲೆಯಲ್ಲಿ 25 ಬೀಜ ಗ್ರಾಮಗಳನ್ನು ರಾಜ್ಯಸರ್ಕಾರ ರೂಪಿಸಬೇಕು. ಮಾದರಿ ಪ್ರದರ್ಶನಕ್ಕಾಗಿ ರೈತರಿಗೆ 10 ಸಾವಿರ ರೂಪಾಯಿ ಪ್ರೊತ್ಸಾಹ ಧನ ನೀಡಲಾಗುವುದು ಎಂದು ತಿಳಿಸಿದ್ದಾರೆ.
ತೆಂಗು ಉತ್ಪನ್ನ ಹೆಚ್ಚಿಸಲು ಯೋಜನೆ
ತೆಂಗು ಉತ್ಪನ್ನವನ್ನು ಹೆಚ್ಚಿಸುವ ನಿಟ್ಟಿನಲ್ಲಿ ಪ್ರಧಾನಮಂತ್ರಿಯವರ ನಿರ್ದೇಶನದ ಮೇರೆಗೆ ತೆಂಗು ಅಭಿವೃದ್ಧಿಗೆ ಕಾರ್ಯಕ್ರಮ ಆರಂಭಿಸಲಾಗುವುದು. ಯೋಜನೆಯಡಿ ರೋಗ ಪೀಡಿತ ಹಳೆಯ ಮರಗಳ ಬದಲಿಸಲು ಉತ್ತೇಜಿಸಲಾಗುವುದು. ರೈತರು ಈ ಯೋಜನೆಯ ಪ್ರಯೋಜನ ಪಡೆಯಬೇಕು ಎಂದು ಅವರು ಮನವಿ ಮಾಡಿದ್ದಾರೆ. ರೈತರ ನೆರವಿನಿಂದ ಭಾರತ ವಿಶ್ವದಲ್ಲೇ ಅಗ್ರಮಾನ್ಯ ಭತ್ತ ಬೆಳೆಯುವ ದೇಶವಾಗಿ ಹೊರಹೊಮ್ಮಿದೆ. ಚೀನಾವನ್ನು ಹಿಂದಿಕ್ಕಿದೆ. ಇದಕ್ಕಾಗಿ ರೈತರು ಅಭಿನಂದನಾರ್ಹರು. ನೀರಿನ ಮಿತಬಳಕೆ, ಕಡಿಮೆ ಶ್ರಮದಲ್ಲಿ ಉತ್ತಮ ಇಳುವರಿ ನೀಡುವ ಅಕ್ಕಿತಳಿಗಳನ್ನು ವಿಜ್ಞಾನಿಗಳು ಅಭಿವೃದ್ಧಿಪಡಿಸುತ್ತಿದ್ದು, ರೈತರು ಇದರ ಪ್ರಯೋಜನ ಪಡೆಯಬೇಕು ಎಂದು ತಿಳಿಸಿದ್ದಾರೆ.
ಕಾಫಿ, ಕೊಕ್ಕೊ, ಫಲಪುಷ್ಪ, ತರಕಾರಿ ಸೇರಿದಂತೆ ತೋಟಗಾರಿಕೆ ಬೆಳೆಗಳಿಗೆ ಕೇಂದ್ರ ಸರ್ಕಾರ ಬೆಂಬಲ ನೀಡುತ್ತಿದೆ ಎಂದು ಸಚಿವ ಶಿವರಾಜ್ ಸಿಂಗ್ ಚೌಹಾಣ್ ಹೇಳಿದರು. ಕರ್ನಾಟಕದ ಸಿರಿಧಾನ್ಯದ ಬ್ರ್ಯಾಂಡ್ಗಳನ್ನು ದೇಶ-ವಿದೇಶಗಳಲ್ಲಿ ಪ್ರಚುರಗೊಳಿಸಲು ಕೇಂದ್ರ ಸರ್ಕಾರ ಸಿದ್ಧವಿದೆ ಎಂದು ಅವರು ಹೇಳಿದರು. ದ್ವಿದಳ ಧಾನ್ಯ ಮಿಷನ್ ಅಡಿ ರಾಜ್ಯಕ್ಕೆ ಅನುದಾನ ನೀಡುವ 191 ಕೋಟಿ 97 ಲಕ್ಷ ರೂಪಾಯಿ ಮೊತ್ತದ ನೆರವು ಪತ್ರವನ್ನು ಈ ಸಂದರ್ಭದಲ್ಲಿ ಕೇಂದ್ರ ಸಚಿವ ಶಿವರಾಜ್ ಸಿಂಗ್ ಚೌಹಾಣ್, ರಾಜ್ಯದ ಕೃಷಿ ಸಚಿವ ಚಲುವರಾಯಸ್ವಾಮಿ ಅವರಿಗೆ ಹಸ್ತಾಂತರಿಸಿದರು. ಇದಲ್ಲದೇ ರಾಜ್ಯಕ್ಕೆ ನೀಡಬೇಕಾಗಿರುವ 154 ಕೋಟಿ ರೂಪಾಯಿ ಅನುದಾನವನ್ನು ಬಿಡುಗಡೆ ಮಾಡುವುದಾಗಿ ಕೇಂದ್ರ ಸಚಿವರು ತಿಳಿಸಿದರು.
ಇದನ್ನೂ ಓದಿ: ದೆಹಲಿಗೆ ಸೆಷಲ್ಸ್ ರಾಷ್ಟ್ರಪತಿ ಡಾ. ಪ್ಯಾಟ್ರಿಕ್ ಹರ್ಮಿನಿ ಭೇಟಿ
