ಬೆಂಗಳೂರು: ಮುಂದಿನ ಬಜೆಟ್ನಲ್ಲಿ ಪ್ರಾದೇಶಿಕ ಅಸಮತೋಲನ ನಿವಾರಿಸುವ ನಿಟ್ಟಿನಲ್ಲಿ ಪ್ರೊ. ಗೋವಿಂದರಾವ್ ಸಮಿತಿ ಶಿಫಾರಸ್ಸುಗಳ ಅನುಷ್ಟಾನಕ್ಕಾಗಿ ಕನಿಷ್ಟ 15 ಸಾವಿರ ಕೋಟಿ ರೂ. ಅನುದಾನ ಹಂಚಿಕೆ ಮಾಡಬೇಕು ಎಂದು ವಿಧಾನಸಭೆ ಪ್ರತಿಪಕ್ಷದ ನಾಯಕ ಆರ್. ಅಶೋಕ (R Ashok) ಒತ್ತಾಯ ಮಾಡಿದ್ದಾರೆ.
ಪ್ರಾದೇಶಿಕ ಅಸಮತೋಲನಕ್ಕೆ ಸಿದ್ದರಾಮಯ್ಯ ಕಾರಣ
ಅತಿ ಹೆಚ್ಚು ಬಜೆಟ್ ಮಂಡನೆಯನ್ನು ಮುಖ್ಯಮಂತ್ರಿ ಸಿದ್ದರಾಮಯ್ಯ ಮಾಡಿದ್ದಾರೆ. ಹೀಗಾಗಿ ಪ್ರಾದೇಶಿಕ ಅಸಮತೋಲನಕ್ಕೆ ಅವರೇ ಕಾರಣ. ಈಗ ಆ ತಪ್ಪನ್ನು ಸರಿಪಡಿಸಲು ಬಜೆಟ್ನಲ್ಲಿ ಸೂಕ್ತ ಅನುದಾನ ನಿಗದಿ ಮಾಡಬೇಕು ಎಂದು ಆಗ್ರಹಿಸಿದ್ದಾರೆ. ಅನ್ಯ ಇಲಾಖೆ ಅಥವಾ ಸಂಸ್ಥೆಗಳಿಗೆ ನೀಡುವ ಅನುದಾನವನ್ನು ಕ್ರೊಢೀಕರಿಸಿ ಇಂತಿಷ್ಟು ಮೊತ್ತ ಹಣವನ್ನು ನೀಡಿರುವುದಾಗಿ ಹಾರಿಕೆ ಭರವಸೆ ನೀಡಬಾರದು. KKRDB ಸಹಿತ ಇತರೆ ಅಭಿವೃದ್ಧಿ ಮಂಡಳಿ ಅಥವಾ ನಿಗಮಗಳಿಗೆ ನೀಡುವ ಅನುದಾನವನ್ನು ಈ ಲೆಕ್ಕಾಚಾರಕ್ಕೆ ಸೇರಿಸಬಾರದು. ತಾರತಮ್ಯ ನಿವಾರಣೆಗಾಗಿಯೇ ವಿಶೇಷ, ಪ್ರತ್ಯೇಕ ಅನುದಾನ ಒದಗಿಸಬೇಕು. ಇಲ್ಲವಾದರೆ ನಿಮ್ಮ ಮಾತಿಗೂ ಕೃತಿಗೂ ಸಂಬಂಧವಿಲ್ಲ ಎಂದು ರಾಜ್ಯದ ಜನ ಭಾವಿಸಬೇಕಾಗುತ್ತದೆ ಎಂದು ಎಚ್ಚರಿಕೆ ನೀಡಿದ್ದಾರೆ.
ಅನುದಾನ ಹಂಚಿಕೆ ಮಾಡಲು ಆಗ್ರಹ
ಪ್ರೊ. ಡಿ.ಎಂ. ನಂಜುಂಡಪ್ಪ ಸಮಿತಿ ಗುರುತಿಸಿದ್ದ ರಾಜ್ಯದ ಹಿಂದುಳಿದ ತಾಲ್ಲೂಕುಗಳ ಪ್ರಮಾಣ ಎರಡು ದಶಕಗಳ ಬಳಿಕವೂ ಕಡಿಮೆ ಆಗಿಲ್ಲ. ಶೇಕಡಾ 65 ರಿಂದ ಶೇಕಡಾ 72.8ಕ್ಕೆ ಹೆಚ್ಚಳ ಆಗಿರುವುದು ಆತಂಕಕಾರಿ ಬೆಳವಣಿಗೆ. ಹಿಂದುಳಿದ ಪ್ರದೇಶಗಳ ಜನರ ಬಗ್ಗೆ ಮೊಸಳೆ ಕಣ್ಣೀರು ಸುರಿಸುವುದನ್ನು ಕಾಂಗ್ರೆಸ್ ಮುಖಂಡರು ನಿಲ್ಲಿಸಬೇಕು. ಪ್ರಾದೇಶಿಕ ತಾರತಮ್ಯ ನಿವಾರಣೆಗೂ ಅತಿ ಹೆಚ್ಚು ಅನುದಾನ ಹಂಚಿಕೆ ಮಾಡಬೇಕು ಎಂದು ಹೇಳಿದರು.
ಇದನ್ನೂ ಓದಿ: ಹಂಪಿ ಉತ್ಸವಕ್ಕೆ ಸ್ಥಿರ ದಿನಾಂಕ ನಿಗದಿ ಮಾಡಿದ ಸಿಎಂ ಸಿದ್ದರಾಮಯ್ಯ
