ಧಾರವಾಡ: ಜಿಲ್ಲೆಯ ಕ್ರೀಡಾಪಟುಗಳ ದಶಕಗಳ ಕನಸಾಗಿದ್ದ ಸುಸಜ್ಜಿತ ಕ್ರೀಡಾ ಸಂಕೀರ್ಣವನ್ನು (Dharwad) ಕೇಂದ್ರ ಯುವಜನ ವ್ಯವಹಾರ ಮತ್ತು ಕ್ರೀಡಾ ಸಚಿವ ಮನ್ಸುಖ್ ಮಾಂಡವಿಯಾ ಲೋಕಾರ್ಪಣೆಗೊಳಿಸಿದರು.
ಏನೆಲ್ಲಾ ಸೌಲಭ್ಯಗಳಿದೆ?
NMDC ಮತ್ತು ONGC ಸಂಸ್ಥೆಗಳ CSR ಅನುದಾನದಡಿ 50 ಕೋಟಿ ರೂಪಾಯಿ ವೆಚ್ಚದಲ್ಲಿ ನಿರ್ಮಿಸಲಾದ ಈ ಸಂಕೀರ್ಣದಲ್ಲಿ ಅಂತಾರಾಷ್ಟ್ರೀಯ ಗುಣಮಟ್ಟದ ಈಜುಕೊಳ, ಕಬಡ್ಡಿ ಅಂಕಣ, ಬ್ಯಾಡ್ಮಿಂಟನ್ ಕೋರ್ಟ್, ಜಿಮ್ ಮತ್ತು ವೈದ್ಯಕೀಯ ಸೌಲಭ್ಯಗಳಂತಹ ಅತ್ಯಾಧುನಿಕ ಸೌಕರ್ಯಗಳನ್ನು ಕಲ್ಪಿಸಲಾಗಿದೆ.
ಕಾರ್ಯಕ್ರಮದಲ್ಲಿ ಕೇಂದ್ರ ಸಚಿವ ಪ್ರಲ್ಹಾದ್ ಜೋಶಿ, ಶಾಸಕ ಅರವಿಂದ್ ಬೆಲ್ಲದ್, ವಿಧಾನಪರಿಷತ್ ಸಭಾಪತಿ ಬಸವರಾಜ ಹೊರಟ್ಟಿ, ಸದಸ್ಯರಾದ M.R. ಪಾಟೀಲ್, S.V. ಸಂಕನೂರು, ಮೇಯರ್ ಜ್ಯೋತಿ ಪಾಟೀಲ್ ಸೇರಿದಂತೆ ಅನೇಕ ಗಣ್ಯರು ಉಪಸ್ಥಿತರಿದ್ದರು. ಬಳಿಕ ಮನ್ಸುಖ್ ಮಾಂಡವಿಯಾ, ಕ್ರೀಡಾ ಕ್ಷೇತ್ರದಲ್ಲಿನ ಸಾಧನೆ, ಉತ್ತಮ ಸಮಾಜ ಹಾಗೂ ರಾಷ್ಟ್ರ ನಿರ್ಮಾಣದ ಬದ್ಧತೆ ಇವೆಲ್ಲವೂ ಮಹತ್ತರವಾದ ಕಾರ್ಯಗಳಾಗಿವೆ. ಕ್ರೀಡಾಪಟುಗಳು ಉತ್ತಮ ತಯಾರಿಯೊಂದಿಗೆ ಸಾಧನೆ ಮಾಡುವ ಮೂಲಕ ದೇಶಕ್ಕೆ ಕೀರ್ತಿ ತರಬೇಕು ಎಂದು ಹೇಳಿದರು.
ಸಚಿವ ಪ್ರಲ್ಹಾದ್ ಜೋಶಿ, ನೂತನ ಸಂಕೀರ್ಣವು ಧಾರವಾಡದ ಯುವ ಪ್ರತಿಭೆಗಳಿಗೆ ಅತ್ಯುತ್ತಮ ತರಬೇತಿ ಹಾಗೂ ಪ್ರೋತ್ಸಾಹ ನೀಡುವ ಕೇಂದ್ರವಾಗಿ ಹೊರಹೊಮ್ಮಲಿದೆ. ಈ ಸೌಲಭ್ಯವನ್ನು ನಮ್ಮ ಜಿಲ್ಲೆಯ ಕ್ರೀಡಾಪಟುಗಳು ಸಮರ್ಥವಾಗಿ ಬಳಸಿಕೊಳ್ಳಬೇಕು. ಕ್ರೀಡಾಪಟುಗಳು ರಾಜ್ಯ ಹಾಗೂ ರಾಷ್ಟ್ರಮಟ್ಟದಲ್ಲಿ ಕೀರ್ತಿ ತರಲಿ ಎಂದರು. ಶಾಸಕ ಅರವಿಂದ್ ಬೆಲ್ಲದ್, ನೂತನ ಈಜುಕೊಳದ ಸೌಲಭ್ಯದಿಂದ ಅಂತಾರಾಷ್ಟ್ರೀಯ ಮಟ್ಟದ ಕ್ರೀಡೆಗಳಿಗೆ ತರಬೇತಿ ಪಡೆಯಲು ಕ್ರೀಡಾಪಟುಗಳಿಗೆ ಪೂರಕವಾಗಲಿದೆ. ಸುಸಜ್ಜಿತ ಈಜುಕೊಳ ನಿರ್ಮಾಣದಿಂದ ಪ್ರತಿಭೆಗಳಿಗೆ ಉತ್ತಮ ಅವಕಾಶ ಕಲ್ಪಿಸಿದಂತಾಗಿದೆ ಎಂದು ತಿಳಿಸಿದರು.
