ನವದೆಹಲಿ: ಜಲ ಜೀವನ್ ಮಿಷನ್ 2.0 ವಿಸ್ತರಣೆ ಸೇರಿದಂತೆ ಆರು ಪ್ರಮುಖ ನಿರ್ಣಯಗಳಿಗೆ ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಕೇಂದ್ರ ಸಚಿವ ಸಂಪುಟ (Cabinet) ಅನುಮೋದನೆ ನೀಡಿದೆ.
ಜಲಜೀವನ್ ಮಿಷನ್ ವಿಸ್ತರಣೆ
ಸಂಪುಟ ಸಭೆಯ ನಿರ್ಣಯಗಳ ಕುರಿತು ದೆಹಲಿಯಲ್ಲಿಂದು ಸುದ್ದಿಗೋಷ್ಠಿಯಲ್ಲಿ ವಿವರ ನೀಡಿದ ಕೇಂದ್ರ ವಾರ್ತಾ ಮತ್ತು ಪ್ರಸಾರ ಖಾತೆ ಸಚಿವ ಅಶ್ವಿನಿ ವೈಷ್ಣವ್, 8.7 ಲಕ್ಷ ಕೋಟಿ ರೂಪಾಯಿ ಮೌಲ್ಯದ ಜಲಜೀವನ್ ಮಿಷನ್ ಯೋಜನೆಯಲ್ಲಿ ಡಿಜಿಟಲೀಕರಣ ಹಾಗೂ ಸಮುದಾಯ ಪಾಲ್ಗೊಳ್ಳುವಿಕೆಗೆ ಆದ್ಯತೆ ನೀಡಲಾಗುವುದು ಎಂದರು.
2019ರಿಂದ 2024ರವರೆಗಿನ ಜಲಜೀವನ್ ಮಿಷನ್ ಯೋಜನೆಯನ್ನು 2028ರ ಡಿಸೆಂಬರ್ ವರೆಗೆ ವಿಸ್ತರಿಸಲು ಸಚಿವ ಸಂಪುಟ ಅನುಮೋದನೆ ನೀಡಿದೆ. ದೇಶದ ಗ್ರಾಮೀಣ ಭಾಗದ 12 ಕೋಟಿ 60 ಲಕ್ಷ ಮನೆಗಳಿಗೆ ಕೊಳವೆ ಮೂಲಕ ನೀರು ಸರಬರಾಜು ಮಾಡಲಾಗುವುದು. ಸ್ವಸಹಾಯ ಗುಂಪುಗಳು, ಲಖ್ ಪತಿ ದೀದಿ, ಗ್ರಾಮ ಪಂಚಾಯತಿ ಸದಸ್ಯರು, ನಾಗರಿಕರು ಸೇರಿದಂತೆ ಎಲ್ಲರನ್ನು ಈ ಯೋಜನೆಯಡಿ ಭಾಗಿದಾರರನ್ನಾಗಿ ಮಾಡಲಾಗುವುದು ಎಂದು ಹೇಳಿದರು.
ಸುಜಲಾಂ ಭಾರತ್ ಯೋಜನೆ ಡಿಜಿಟಲೀಕರಣ
ಸುಜಲಾಂ ಭಾರತ್ ರಾಷ್ಟ್ರೀಯ ಡಿಜಿಟಲೀಕರಣ ಅಭಿಯಾನದಡಿ ಪ್ರತಿ ಗ್ರಾಮಕ್ಕೆ ನಿರ್ದಿಷ್ಟ ಸುಜಲ ಗ್ರಾಮ ಗುರುತಿನ ಚೀಟಿ ನೀಡಲಾಗುವುದು. ಈ ಮೂಲಕ ಸಂಪೂರ್ಣ ಕುಡಿಯುವ ನೀರು ಪೂರೈಕೆ ವ್ಯವಸ್ಥೆಯ ಮ್ಯಾಪಿಂಗ್ ಮಾಡಲಾಗುವುದು. ಅಲ್ಲದೆ ಸಮುದಾಯ ಕೇಂದ್ರಿತ ಯೋಜನೆಯಲ್ಲಿ ಅಂತರ್ಜಲ ಹೆಚ್ಚಳ ಮತ್ತು ನೀರಿನ ಗುಣಮಟ್ಟ ಏರಿಕೆಗೆ ಆದ್ಯತೆ ನೀಡಲಾಗಿದ್ದು, ಯೋಜನೆ ಸಂಬಂಧ ರಾಜ್ಯಗಳೊಂದಿಗೆ ಶೀಘ್ರ ಒಡಂಬಡಿಕೆ ಏರ್ಪಡಲಿದೆ ಎಂದು ತಿಳಿಸಿದರು. ಇದಲ್ಲದೇ ತಮಿಳುನಾಡಿನ ಮದುರೈ ವಿಮಾನ ನಿಲ್ದಾಣವನ್ನು ಅಂತಾರಾಷ್ಟ್ರೀಯ ಶ್ರೇಣಿಗೆ ಮೇಲ್ದರ್ಜೆಗೇರಿಸಲು ಕೇಂದ್ರ ಸಚಿವ ಸಂಪುಟ ಅನುಮೋದನೆ ನೀಡಿದೆ. ಶೈಕ್ಷಣಿಕ, ಸಾಂಸ್ಕೃತಿಕ ಮತ್ತು ಧಾರ್ಮಿಕ ಕೇಂದ್ರವಾದ ಮದುರೈನಲ್ಲಿ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣ ಸ್ಥಾಪನೆಯಿಂದ ಪ್ರಾದೇಶಿಕ ಅಭಿವೃದ್ಧಿ, ಪ್ರವಾಸೋದ್ಯಮಕ್ಕೆ ಉತ್ತೇಜನ, ಜೊತೆಗೆ ಸಮೀಪದ ನಗರಗಳ ಸಂಪರ್ಕ ವೃದ್ಧಿಯಾಗಲಿದೆ ಎಂದು ಅಶ್ವಿನಿ ವೈಷ್ಣವ್ ಹೇಳಿದರು.
ಅಲ್ಲದೆ ದೆಹಲಿ-ಮುಂಬೈ ಎಕ್ಸ್ ಪ್ರೆಸ್ ಹೆದ್ದಾರಿ ಹಾಗೂ ಉತ್ತರ ಪ್ರದೇಶ ಮತ್ತು ಹರಿಯಾಣದಲ್ಲಿ ಗ್ರೀನ್ ಫೀಲ್ಡ್ ಸಂಪರ್ಕ ಯೋಜನೆಗೆ 3 ಸಾವಿರದ 630 ಕೋಟಿ ರೂಪಾಯಿ ಪರಿಷ್ಕೃತ ಬಂಡವಾಳ ವೆಚ್ಚಕ್ಕೆ ಸಚಿವ ಸಂಪುಟ ಸಮ್ಮತಿ ನೀಡಿದೆ. ರೈಲ್ವೆ ವಲಯದಲ್ಲಿ ಖರಗ್ ಪುರ್ – ಸಂತ್ರಾಗಾಚಿ ನಾಲ್ಕನೇ ಹಂತದ ರೈಲು ಮಾರ್ಗ ಸೇರಿದಂತೆ ವಿವಿಧ ಯೋಜನೆಗಳಿಗೆ ಒಟ್ಟು ನಾಲ್ಕು ಸಾವಿರದ 474 ಕೋಟಿ ರೂಪಾಯಿ ಒದಗಿಸಲು ಸಚಿವ ಸಂಪುಟ ಅನುಮೋದನೆ ನೀಡಿದೆ. (HO) ಸಚಿವ ಸಂಪುಟ ನಿರ್ಣಯಗಳ ಕುರಿತು ಪ್ರಧಾನಿ ನರೇಂದ್ರ ಮೋದಿ ತಮ್ಮ ಸಾಮಾಜಿಕ ಮಾಧ್ಯಮ ಖಾತೆಯಲ್ಲಿ ವಿವರ ಹಂಚಿಕೊಂಡಿದ್ದು, ದೇಶದ ವಿವಿಧ ಭಾಗಗಳಲ್ಲಿ ಸಂಪರ್ಕ ಬಲವರ್ಧನೆ ಹಾಗೂ ಮುಂದಿನ ತಲೆಮಾರಿನ ಮೂಲ ಸೌಕರ್ಯ ಅಭಿವೃದ್ಧಿಗೆ ಈ ನಿರ್ಧಾರಗಳು ಪೂರಕ ಎಂದು ತಿಳಿಸಿದ್ದಾರೆ.
ಇದನ್ನೂ ಓದಿ: ಪೆಟ್ರೋಲ್ – ಡೀಸೆಲ್ ಪೂರೈಕೆ ಸ್ಥಿರವಾಗಿದೆ: ಬಸವರಾಜ್ ಬೊಮ್ಮಾಯಿ
