ನವದೆಹಲಿ: 2026-27ನೇ ಸಾಲಿನ ಕೃಷಿ (Agriculture) ಮತ್ತು ರೈತ ಕಲ್ಯಾಣ ಸಚಿವಾಲಯದ ನಿಯಂತ್ರಣದಲ್ಲಿರುವ ಅನುದಾನದ ಬೇಡಿಕೆಗಳಿಗೆ ಲೋಕಸಭೆ ಅಂಗೀಕಾರ ನೀಡಿತು.
ಕೃಷಿ ಉತ್ಪಾದನೆ ಹೆಚ್ಚಿಸಲು ನಿರಂತರ ಕ್ರಮ
ಇದಕ್ಕೂ ಮುನ್ನ ಈ ಅನುದಾನ ಬೇಡಿಕೆಗಳ ಬಗೆಗಿನ ಚರ್ಚೆಯ ವೇಳೆ, ಕೇಂದ್ರ ಕೃಷಿ ಸಚಿವ ಶಿವರಾಜ್ ಸಿಂಗ್ ಚೌಹಾಣ್, ಪ್ರಧಾನಿ ನರೇಂದ್ರ ಮೋದಿಯವರ ನೇತೃತ್ವದಲ್ಲಿ ಸರ್ಕಾರ ಕೃಷಿ ಉತ್ಪಾದನೆಯನ್ನು ಹೆಚ್ಚಿಸಲು ನಿರಂತರವಾಗಿ ಕೆಲಸ ಮಾಡುತ್ತಿದೆ. 2013-14ರಲ್ಲಿ ಕೃಷಿ ಬಜೆಟ್ ಕೇವಲ 21 ಸಾವಿರದ 933 ಕೋಟಿ ರೂಪಾಯಿಗಳಾಗಿದ್ದು, ಅದು ಈಗ ಒಂದು ಲಕ್ಷದ 30 ಸಾವಿರ ಕೋಟಿ ರೂಪಾಯಿಗಳಿಗೂ ಹೆಚ್ಚಾಗಿದೆ ಎಂದರು.
ರಾಸಾಯನಿಕ ಮುಕ್ತ ಕೃಷಿ
ಭಾರತದಲ್ಲಿ ನೈಸರ್ಗಿಕ ಕೃಷಿಯು ವೇಗವಾಗಿ ಬೆಳೆಯುತ್ತಿದ್ದು, 18 ಲಕ್ಷಕ್ಕೂ ಹೆಚ್ಚು ರೈತರು 7.8 ಲಕ್ಷ ಹೆಕ್ಟೇರ್ ಪ್ರದೇಶದಲ್ಲಿ ರಾಸಾಯನಿಕ ಮುಕ್ತ ಕೃಷಿ ಮಾಡುತ್ತಿದ್ದಾರೆ. ನೈಸರ್ಗಿಕ ಕೃಷಿಯಿಂದ ಮಣ್ಣಿನ ಆರೋಗ್ಯವನ್ನು ಸುಧಾರಿಸುತ್ತದೆ ಮತ್ತು ದೀರ್ಘಾವಧಿಯ ಸುಸ್ಥಿರತೆಯನ್ನು ಉತ್ತೇಜಿಸುತ್ತದೆ. ರಾಷ್ಟ್ರೀಯ ಧ್ಯೇಯ ಮಿಷನ್ ಯೋಜನೆಯಡಿ ರೈತರಿಗೆ ನೈಸರ್ಗಿಕ ಕೃಷಿಯಲ್ಲಿ ತರಬೇತಿ ನೀಡುವ ಗುರಿಯನ್ನು ಸರ್ಕಾರ ಹೊಂದಿದೆ. ಈ ಕೃಷಿ ಉತ್ಪನ್ನಗಳಿಗೆ ಉತ್ತಮ ಬೆಲೆ ಸಿಗುವಂತೆ ಮಾಡಲು ಸರ್ಕಾರವು ನೈಸರ್ಗಿಕ ಕೃಷಿ ಪ್ರಮಾಣೀಕರಣ ವ್ಯವಸ್ಥೆ NFCS ಯೋಜನೆ ಜಾರಿಗೆ ತರುತ್ತಿದೆ ಎಂದು ಸಚಿವರು ಮಾಹಿತಿ ನೀಡಿದರು. ಪ್ರಧಾನಮಂತ್ರಿ ಧನ ಧಾನ್ಯ ಕೃಷಿ ಯೋಜನೆಯಿಂದ ಕೃಷಿಕರ ಅಭಿವೃದ್ಧಿಯಾಗುತ್ತಿದೆ. ಇದು 100 ಜಿಲ್ಲೆಗಳಲ್ಲಿ ಕೃಷಿ ಉತ್ಪಾದಕತೆ ಹೆಚ್ಚಿಸಲು, ಬೆಳೆ ವೈವಿಧ್ಯೀಕರಣ, ನೀರಾವರಿ ಮತ್ತು ಸುಗ್ಗಿಯ ನಂತರದ ಸಂಗ್ರಹಣೆಯನ್ನು ಸುಧಾರಿಸುವ ಗುರಿಯನ್ನು ಹೊಂದಿದೆ. ಗುಣಮಟ್ಟದ ಬೀಜಗಳು, ರಸಗೊಬ್ಬರಗಳು, ಆಧುನಿಕ ತಂತ್ರಜ್ಞಾನ ಮತ್ತು ಸುಗ್ಗಿಯ ನಂತರದ ಮೌಲ್ಯವರ್ಧನೆಗೆ ಇದು ಸಹಕಾರಿಯಾಗಲಿದೆ ಎಂದು ಸಚಿವ ಶಿವರಾಜ್ ಸಿಂಗ್ ಚೌಹಾಣ್ ತಿಳಿಸಿದರು. ಕಲಾಪವನ್ನು ಸೋಮವಾರಕ್ಕೆ ಮುಂದೂಡಲಾಯಿತು
ಇದನ್ನೂ ಓದಿ: ಪಶ್ಚಿಮ ಏಷ್ಯಾ ಸಂಘರ್ಷ, ರಫ್ತು ಉತ್ತೇಜನಕ್ಕೆ ವಿವಿಧ ಕ್ರಮ
