ನವದೆಹಲಿ: ಪ್ರಧಾನಿ ನರೇಂದ್ರ ಮೋದಿ ನೇತೃತ್ವದ NDA ಸರ್ಕಾರದ ಕೃಷಿ ನೀತಿಯಿಂದಾಗಿ ದೇಶದಲ್ಲಿ ಕಳೆದ 10 ವರ್ಷಗಳಲ್ಲಿ ದಾಖಲೆ ಆಹಾರಧಾನ್ಯ (Agriculture) ಉತ್ಪಾದನೆಯಾಗಿದೆ ಎಂದು , ಕೃಷಿ ಮತ್ತು ರೈತ ಕಲ್ಯಾಣ ಸಚಿವ ಶಿವರಾಜ್ ಸಿಂಗ್ ಚೌಹಾಣ್ ಲೋಕಸಭೆಗೆ ತಿಳಿಸಿದ್ದಾರೆ.
357 ದಶಲಕ್ಷ ಟನ್ ಆಹಾರಧಾನ್ಯ (Agriculture) ಉತ್ಪಾದನೆ
ಪ್ರಶ್ನೋತ್ತರ ವೇಳೆಯಲ್ಲಿಂದು ಸದಸ್ಯರ ಪ್ರಶ್ನೆಗೆ ಉತ್ತರ ನೀಡಿದ ಅವರು, ದೇಶದಲ್ಲಿ 357 ದಶಲಕ್ಷ ಟನ್ ಆಹಾರಧಾನ್ಯ ಉತ್ಪಾದನೆಯಾಗಿದ್ದು, ಹೊಸ ದಾಖಲೆಯಾಗಿದೆ. 15 ಕೋಟಿ ಟನ್ ಭತ್ತ ಉತ್ಪಾದನೆಯೊಂದಿಗೆ ಭಾರತ, ಈ ವಲಯದಲ್ಲಿ ಚೈನಾವನ್ನು ಹಿಂದಿಕ್ಕಿ ಜಾಗತಿಕ ಅಗ್ರಸ್ಥಾನಕ್ಕೇರಿದೆ ಎಂದರು. ಪ್ರಧಾನಮಂತ್ರಿ ಧನಧಾನ್ಯ ಯೋಜನೆಯ , ಪರಿಣಾಮಕಾರಿ ಅನುಷ್ಠಾನದಿಂದಾಗಿ , ಭತ್ತ ಮಾತ್ರವಲ್ಲದೆ, ಬೇಳೆಕಾಳು, ಎಣ್ಣೆಬೀಜ, ಸೋಯಾಬಿನ್ ಸೇರಿದಂತೆ , ಎಲ್ಲ ಉತ್ಪನ್ನಗಳ ಇಳುವರಿ ಹೆಚ್ಚಾಗಿದೆ. ಒಟ್ಟು 357 ದಶಲಕ್ಷ ಟನ್ ಆಹಾರಧಾನ್ಯ ಉತ್ಪಾದನೆಯಾಗಿದ್ದು, ಆಹಾರದ ಭಂಡಾರ ಭರ್ತಿಯಾಗಿದೆ. ಕಳೆದ 10 ವರ್ಷಗಳಲ್ಲಿ ಆಹಾರಧಾನ್ಯ ಉತ್ಪಾದನೆಯಲ್ಲಿ ಶೇಕಡ 46ಕ್ಕಿಂತ ಹೆಚ್ಚು ಪ್ರಗತಿಯಾಗಿದೆ ಎಂದು ಹೇಳಿದರು.
ಉತ್ಪಾದನೆ ಹೆಚ್ಚಳಕ್ಕೆ ಸಕಲ ಕ್ರಮ
ಕೃಷಿ ಸಮಗ್ರ ಅಭಿವೃದ್ಧಿಗಾಗಿ ಆಹಾರ ಭದ್ರತೆ, ರೈತರ ಹಿತರಕ್ಷಣೆ ಮತ್ತು ಪೌಷ್ಟಿಕ ಆಹಾರ ಒದಗಿಸುವುದು ಸೇರಿದಂತೆ, ಮೂರು ಮುಖ್ಯ ಗುರಿಗಳನ್ನು ಹಾಕಿಕೊಳ್ಳಲಾಗಿದೆ. ರೈತರಿಗೆ ಪ್ರತ್ಯೇಕ ಗುರುತಿನಚೀಟಿ ನೀಡಲಾಗುತ್ತಿದ್ದು, ಇದರಲ್ಲಿ ಕೃಷಿ ಜಮೀನಿನ ವಿಸ್ತೀರ್ಣ, ಕುಟುಂಬ ಸದಸ್ಯರ ವಿವರ, ಬೆಳೆ ಮಾಹಿತಿ ಸೇರಿದಂತೆ, ರೈತರಿಗೆ ಸಂಬಂಧಿಸಿದ ಎಲ್ಲ ವಿವರಗಳು ಇರಲಿವೆ ಎಂದರು. ರೈತರಿಗೆ ಒಟ್ಟು 1 ಲಕ್ಷ 86 ಸಾವಿರ ಕೋಟಿ ರೂಪಾಯಿ ಸಹಾಯಧನ ನೀಡಲಾಗಿದ್ದು, ಮಾರುಕಟ್ಟೆ ದರಕ್ಕಿಂತ ,ಅತಿ ಕಡಿಮೆ ಬೆಲೆಯಲ್ಲಿ ಯೂರಿಯಾ ಸೇರಿದಂತೆ ರಸಗೊಬ್ಬರ ಒದಗಿಸಲಾಗುತ್ತಿದೆ. ಕೃಷಿ ಇಳುವರಿಯಲ್ಲಿ ಪ್ರಾದೇಶಿಕ ಅಸಮಾನತೆ ತೊಡೆದುಹಾಕಲು ರಾಷ್ಟ್ರೀಯ ಸರಾಸರಿಗಿಂತ ಕಡಿಮೆ ಇರುವ ಜಿಲ್ಲೆಗಳಲ್ಲಿ ಉತ್ಪಾದನೆ ಹೆಚ್ಚಳಕ್ಕೆ ಸಕಲ ಕ್ರಮ ಕೈಗೊಳ್ಳಲಾಗಿದೆ. ದೇಶದ ನೂರು ಜಿಲ್ಲೆಗಳಲ್ಲಿ ಈ ಯೋಜನೆ ಜಾರಿಗೊಳಿಸಲಾಗಿದ್ದು, ಈ ಪೈಕಿ 96 ಜಿಲ್ಲೆಗಳು ಪ್ರಗತಿ ಕಂಡಿವೆ. ಆದರೆ ಪಶ್ಚಿಮ ಬಂಗಾಳ ಸರ್ಕಾರದ ಅಸಹಕಾರದಿಂದಾಗಿ 4 ಜಿಲ್ಲೆಗಳು ಯೋಜನೆಯಿಂದ ವಂಚಿತವಾಗಿರುವುದು ದುರದೃಷ್ಟಕರ ಎಂದು ತಿಳಿಸಿದರು.
ಕಲಾಪದ ಆರಂಭದಿಂದಲೂ ಪ್ರತಿಪಕ್ಷಗಳ ಸದಸ್ಯರು ಘೋಷಣೆ ಕೂಗುತ್ತ ಗದ್ದಲ ಉಂಟು ಮಾಡಿದರು. ರೈತರ ಪ್ರಗತಿ ಕುರಿತ ಮಹತ್ವಪೂರ್ಣ ವಿಷಯದ ಚರ್ಚೆಯ ವೇಳೆ , ಗದ್ದಲ ಉಂಟು ಮಾಡಬಾರದು ಎಂದು ಸಚಿವ ಶಿವರಾಜ್ ಸಿಂಗ್ ಚೌಹಾಣ್ ಕೋರಿದರು. ಪೀಠಾಸೀನಾಧಿಕಾರಿ ಸಂಧ್ಯಾರಾಯ್, ಅತ್ಯಂತ ಪ್ರಮುಖ ವಿಷಯದ ಮೇಲಿನ ಚರ್ಚೆಯ ವೇಳೆ ಕಲಾಪಕ್ಕೆ ಅಡ್ಡಿ ಉಂಟುಮಾಡುವುದು ಸರಿಯಲ್ಲ. ಚರ್ಚೆಗೆ ಅವಕಾಶ ನೀಡಬೇಕು ಎಂದು ಹಲವು ಬಾರಿ ವಿನಂತಿಸಿದರು. ಆಗಲೂ ಗದ್ದಲ ಮುಂದುವರಿದಾಗ ಸದನವನ್ನು ಹಲವು ಬಾರಿ ಮುಂದೂಡಿದರು.
