ಬೆಂಗಳೂರು: ರಾಜ್ಯಾದ್ಯಂತ ತೀವ್ರ ಕುತೂಹಲ ಮೂಡಿಸಿರುವ ಬಿಪಿಎಲ್ ರೇಷನ್ ಕಾರ್ಡ್ಗಳ ಪರಿಷ್ಕರಣೆ ಕುರಿತಂತೆ ಆಹಾರ ಮತ್ತು ನಾಗರಿಕ ಸರಬರಾಜು ಇಲಾಖೆ ಸಚಿವ ಕೆ.ಎಚ್. ಮುನಿಯಪ್ಪ (KH Muniyappa) ಮಹತ್ವದ ಅಂಕಿ-ಅಂಶಗಳನ್ನು ಹಂಚಿಕೊಂಡಿದ್ದಾರೆ. ಕೇಂದ್ರ ಸರ್ಕಾರದ ನಿಯಮಾವಳಿ ಹಾಗೂ ಅಧಿಕೃತ ಮಾರ್ಗಸೂಚಿಗಳನ್ನು ಆಧರಿಸಿ ರಾಜ್ಯದಲ್ಲಿ ಒಟ್ಟು 7.76 ಲಕ್ಷ ಅನರ್ಹ ಬಿಪಿಎಲ್ ಪಡಿತರ ಚೀಟಿಗಳನ್ನು ಗುರುತಿಸಲಾಗಿದೆ ಎಂದು ಅವರು ಪ್ರಕಟಿಸಿದ್ದಾರೆ. ಸರ್ಕಾರದ ಸೌಲಭ್ಯಗಳು ದುರುಪಯೋಗವಾಗದೆ, ಕೇವಲ ನೈಜ ಅರ್ಹ ಫಲಾನುಭವಿಗಳಿಗೆ ಮಾತ್ರ ತಲುಪಬೇಕು ಎನ್ನುವ ನಿಟ್ಟಿನಲ್ಲಿ ಈ ಕಠಿಣ ಕ್ರಮ ಜರುಗಿಸಲಾಗುತ್ತಿದೆ ಎಂದು ಅವರು ಸಮರ್ಥಿಸಿಕೊಂಡಿದ್ದಾರೆ.
ಸಚಿವರು ಹೇಳಿದ್ದೇನು?
ಪ್ರಸ್ತುತ ಈ ಅನರ್ಹ ಕಾರ್ಡ್ಗಳ ಪತ್ತೆ ಹಚ್ಚುವ ಹಾಗೂ ಪರಿಷ್ಕರಿಸುವ ಪ್ರಕ್ರಿಯೆಯು ತೀವ್ರ ಗತಿಯಲ್ಲಿ ಸಾಗುತ್ತಿದ್ದು, ಈಗಾಗಲೇ ಅರ್ಧದಷ್ಟು ಕೆಲಸ ಮುಕ್ತಾಯಗೊಂಡಿದೆ. ನಿಯಮ ಉಲ್ಲಂಘಿಸಿ ಬಿಪಿಎಲ್ ಕಾರ್ಡ್ ಹೊಂದಿದ್ದ 4,32,795 ಜನರನ್ನು ಗುರುತಿಸಲಾಗಿದ್ದು, ಅವರ ಪಡಿತರ ಚೀಟಿಗಳನ್ನು ತಕ್ಷಣದಿಂದಲೇ ಜಾರಿಗೆ ಬರುವಂತೆ ಎಪಿಎಲ್ ಕಾರ್ಡ್ಗಳಾಗಿ ಬದಲಾಯಿಸಲಾಗಿದೆ. ಆರ್ಥಿಕವಾಗಿ ಸದೃಢರಾಗಿದ್ದರೂ ಅಥವಾ ಸರ್ಕಾರದ ನಿಯಮಗಳಿಗೆ ಬಾಹಿರವಾಗಿ ಉಚಿತ ಸೌಲಭ್ಯ ಪಡೆಯುತ್ತಿದ್ದವರನ್ನು ಬಿಪಿಎಲ್ ಪಟ್ಟಿಯಿಂದ ಕೈಬಿಡಲಾಗುತ್ತಿದೆ ಎಂದು ಸಚಿವರು ಮಾಹಿತಿ ನೀಡಿದ್ದಾರೆ.
ರದ್ದಾದ ಬಿಪಿಎಲ್ ಕಾರ್ಡ್ದಾರರಿಗೆ ರಾಜ್ಯ ಸರ್ಕಾರದಿಂದ ಭರ್ಜರಿ ಸಿಹಿ ಸುದ್ದಿ: ಮರುಸ್ಥಾಪನೆಗೆ ಮುಕ್ತ ಅವಕಾಶ, ಗಡುವು ರದ್ದು!
ಬೆಂಗಳೂರು: ತಾಂತ್ರಿಕ ಕಾರಣಗಳು ಹಾಗೂ ನಿಯಮಾವಳಿಗಳ ಪರಿಷ್ಕರಣೆಯಿಂದಾಗಿ ಬಿಪಿಎಲ್ ಪಡಿತರ ಚೀಟಿ ಕಳೆದುಕೊಂಡು ಆತಂಕದಲ್ಲಿದ್ದ ರಾಜ್ಯದ ಲಕ್ಷಾಂತರ ಬಡ ಕುಟುಂಬಗಳಿಗೆ ಆಹಾರ ಇಲಾಖೆಯು ದೊಡ್ಡ ಸಮಾಧಾನ ತಂದಿದೆ. ನಿಯಮ ಉಲ್ಲಂಘನೆ ನೆಪದಲ್ಲಿ ಬಿಪಿಎಲ್ನಿಂದ ಎಪಿಎಲ್ ಕಾರ್ಡ್ ಆಗಿ ಬದಲಾಗಿದ್ದ ಸುಮಾರು 4 ಲಕ್ಷಕ್ಕೂ ಅಧಿಕ ಪಡಿತರ ಚೀಟಿಗಳನ್ನು ಮರು ಪರಿಶೀಲಿಸಿ, ಅರ್ಹರಿರುವವರಿಗೆ ಮತ್ತೆ ಬಿಪಿಎಲ್ ಭಾಗ್ಯ ಕಲ್ಪಿಸಲು ಸರ್ಕಾರ ಹಸಿರು ನಿಶಾನೆ ತೋರಿದೆ.
ಇದಕ್ಕಾಗಿ ಈ ಹಿಂದೆ ನಿಗದಿಪಡಿಸಲಾಗಿದ್ದ 45 ದಿನಗಳ ಕಠಿಣ ಗಡುವನ್ನು ಸರ್ಕಾರ ಸಂಪೂರ್ಣವಾಗಿ ತೆರವುಗೊಳಿಸಿದೆ. ಇದರಿಂದಾಗಿ ನೈಜ ಫಲಾನುಭವಿಗಳು ಯಾವುದೇ ಆತುರವಿಲ್ಲದೆ ನಿರಾಳವಾಗಿ ಅಗತ್ಯ ದಾಖಲೆಗಳನ್ನು ಸರಿಪಡಿಸಿಕೊಳ್ಳಲು ದಾರಿ ಸುಗಮವಾಗಿದೆ.
ರಾಜ್ಯ ಸರ್ಕಾರದ ‘ಕುಟುಂಬ ಸಾಫ್ಟ್ವೇರ್’ ದತ್ತಾಂಶಗಳ ಆಧಾರದ ಮೇಲೆ ತಪಾಸಣೆ ನಡೆಸಿದಾಗ ಒಟ್ಟು 13.87 ಲಕ್ಷಕ್ಕೂ ಅಧಿಕ ಕಾರ್ಡ್ಗಳು ಮಾನದಂಡಗಳಿಗೆ ವಿರುದ್ಧವಾಗಿರುವುದು ಪತ್ತೆಯಾಗಿತ್ತು. ಇವುಗಳಲ್ಲಿ ನಾಲ್ಕು ಲಕ್ಷಕ್ಕೂ ಹೆಚ್ಚು ಕಾರ್ಡ್ಗಳನ್ನು ಬಿಪಿಎಲ್ ಪಟ್ಟಿಯಿಂದ ಕೈಬಿಟ್ಟು ಎಪಿಎಲ್ ದರ್ಜೆಗೆ ವರ್ಗಾಯಿಸಲಾಗಿತ್ತು. ಆದರೆ ಈ ಪ್ರಕ್ರಿಯೆಯಲ್ಲಿ ಹತ್ತಾರು ನಿಜವಾದ ಬಡವರಿಗೂ ಅನ್ಯಾಯವಾಗಿದೆ ಎಂಬ ವ್ಯಾಪಕ ದೂರುಗಳು ಬಂದ ಹಿನ್ನೆಲೆಯಲ್ಲಿ ಆಹಾರ ಇಲಾಖೆ ಎಚ್ಚೆತ್ತುಕೊಂಡಿದೆ. ತಮ್ಮ ಕಾರ್ಡ್ ಅನ್ಯಾಯವಾಗಿ ರದ್ದಾಗಿದೆ ಎನ್ನುವವರು ಸೂಕ್ತ ಪುರಾವೆಗಳೊಂದಿಗೆ ಆಯಾ ತಾಲೂಕಿನ ತಹಸೀಲ್ದಾರ್ಗೆ ಮೇಲ್ಮನವಿ ಸಲ್ಲಿಸಬಹುದಾಗಿದ್ದು, ತನಿಖೆ ನಡೆಸಿ ಅರ್ಹತೆ ಸಾಬೀತಾದರೆ ಅವುಗಳನ್ನು ತಾನಾಗಿಯೇ ಮತ್ತೆ ಬಿಪಿಎಲ್ ಆಗಿ ಪರಿವರ್ತಿಸಲಾಗುತ್ತದೆ.
ಕಾರ್ಡ್ ಮರು ಸಕ್ರಿಯಗೊಳಿಸಲು ಇರಬೇಕಾದ ಮಾನದಂಡಗಳು: ರದ್ದಾಗಿರುವ ಬಿಪಿಎಲ್ ಕಾರ್ಡ್ ಅನ್ನು ಮತ್ತೆ ಪಡೆಯಲು ಕುಟುಂಬಗಳು ಕೆಲವು ಕಡ್ಡಾಯ ನಿಯಮಗಳನ್ನು ಪೂರೈಸಬೇಕಾಗುತ್ತದೆ:
- ಕುಟುಂಬದ ಯಾವುದೇ ಸದಸ್ಯರು ಆದಾಯ ತೆರಿಗೆ (Income Tax) ಪಾವತಿಸುವಂತಿಲ್ಲ.
- ಒಟ್ಟು ಕೃಷಿ ಭೂಮಿಯ ಪ್ರಮಾಣ 7 ಎಕರೆಗಿಂತ ಕಡಿಮೆ ಇರಬೇಕು.
- ಇಡೀ ಕುಟುಂಬದ ಒಟ್ಟು ವಾರ್ಷಿಕ ಆದಾಯ 1.20 ಲಕ್ಷ ರೂಪಾಯಿ ಮೀರಿರಬಾರದು.
ಈ ನಿಯಮಾವಳಿಗಳಿಗೆ ಒಳಪಡುವ ನಾಗರಿಕರು ಅರ್ಜಿ ಸಲ್ಲಿಸಿದಾಗ, ತಹಸೀಲ್ದಾರ್ ಕಚೇರಿ ಅಧಿಕಾರಿಗಳು ಖುದ್ದಾಗಿ ಸ್ಥಳ ಪರಿಶೀಲನೆ ನಡೆಸಿ ವರದಿ ಸಿದ್ಧಪಡಿಸುತ್ತಾರೆ. ಈ ವರದಿಯ ಆಧಾರದ ಮೇಲೆ ಆಹಾರ ಇಲಾಖೆಯ ಉಪ ನಿರ್ದೇಶಕರು (DD) ಕಾರ್ಡ್ ಅನ್ನು ಮತ್ತೆ ಚಾಲ್ತಿಗೆ ತರುತ್ತಾರೆ. ಆದರೆ, ಸತತವಾಗಿ ಆರು ತಿಂಗಳ ಕಾಲ ಪಡಿತರ ಪಡೆಯದ ಕಾರ್ಡ್ಗಳನ್ನು ಇಲಾಖೆ ಸಂಪೂರ್ಣವಾಗಿ ಅಮಾನತುಗೊಳಿಸಲಿದೆ.
ಆದಾಯದ ಮಿತಿ ಹೆಚ್ಚಳಕ್ಕೆ ಹೆಚ್ಚಿದ ಒತ್ತಡ: ಪ್ರಸ್ತುತ ಜಾರಿಯಲ್ಲಿರುವ ವಾರ್ಷಿಕ 1.20 ಲಕ್ಷ ರೂ. ಆದಾಯದ ಮಿತಿಯನ್ನು ಹಲವು ವರ್ಷಗಳ ಹಿಂದೆ ನಿಗದಿಪಡಿಸಲಾಗಿತ್ತು. ಇಂದಿನ ಜೀವನ ವೆಚ್ಚಕ್ಕೆ ಹೋಲಿಸಿದರೆ ತಿಂಗಳಿಗೆ 15 ಸಾವಿರ ಗಳಿಸುವ ಸಾಮಾನ್ಯ ಭದ್ರತಾ ಸಿಬ್ಬಂದಿಯ ಆದಾಯವೂ ಈ ಮಿತಿಯನ್ನು ಮೀರುತ್ತದೆ. ಹೀಗಾಗಿ ಇದೇ ಮಾನದಂಡ ಮುಂದುವರಿಸಿದರೆ ಬಡವರ ಕಾರ್ಡ್ಗಳೂ ರದ್ದಾಗುವ ಭೀತಿ ಇರುವುದರಿಂದ ವರಮಾನದ ಮಿತಿಯನ್ನು ಹೆಚ್ಚಿಸಬೇಕೆಂಬ ಒತ್ತಾಯ ಕೇಳಿಬಂದಿದೆ.
ಸರ್ಕಾರದ ಮಟ್ಟದಲ್ಲೂ ಈ ಆದಾಯದ ಮಿತಿ ಹೆಚ್ಚಿಸುವ ಪ್ರಸ್ತಾವನೆ ಕುರಿತು ಆಲೋಚನೆ ನಡೆಯುತ್ತಿದ್ದು, ವಿವಿಧ ಇಲಾಖೆಗಳ ಸಮನ್ವಯ ಸಭೆಯ ಬಳಿಕ ಅಂತಿಮ ತೀರ್ಮಾನ ಹೊರಬೀಳುವ ಸಾಧ್ಯತೆಯಿದೆ. ರಾಜ್ಯದಲ್ಲಿ ಅನರ್ಹರನ್ನು ಪಟ್ಟಿಯಿಂದ ಸಂಪೂರ್ಣವಾಗಿ ಹೊರಹಾಕಿದ ಬಳಿಕವಷ್ಟೇ ಹೊಸ ಬಿಪಿಎಲ್ ಕಾರ್ಡ್ಗಳ ವಿತರಣೆಗೆ ಚಾಲನೆ ನೀಡಲಾಗುವುದು ಎಂದು ಅಧಿಕಾರಿಗಳು ಸ್ಪಷ್ಟಪಡಿಸಿದ್ದಾರೆ.
